ಪ್ರಜಾಪ್ರಭುತ್ವಕ್ಕೆ ಅಡಿಪಾಯ ಹಾಕಿದ ವಿಶ್ವಗುರು: ಡಿಸಿ ವಿಜಯಮಹಾಂತೇಶ್ ದಾನಮ್ಮನವರ ಬಣ್ಣನೆ

| Published : May 01 2025, 12:48 AM IST

ಪ್ರಜಾಪ್ರಭುತ್ವಕ್ಕೆ ಅಡಿಪಾಯ ಹಾಕಿದ ವಿಶ್ವಗುರು: ಡಿಸಿ ವಿಜಯಮಹಾಂತೇಶ್ ದಾನಮ್ಮನವರ ಬಣ್ಣನೆ
Share this Article
  • FB
  • TW
  • Linkdin
  • Email

ಸಾರಾಂಶ

ಜಾತಿ ಪದ್ಧತಿ ವಿರುದ್ಧ ಹೋರಾಡಿದ ಅವರು, ಜಾತ್ಯತೀತ ಸಮಾಜ ಕಟ್ಟಲು ಶ್ರಮಿಸಿದರು. ಬಾಲ್ಯದಲ್ಲೆ ಗಂಡು ಮತ್ತು ಹೆಣ್ಣು ಎಂಬ ತಾರತಮ್ಯ ವಿರೋಧಿಸಿದರು. ಎಲ್ಲರಿಗೂ ಕಾಯಕ ಹಾಗೂ ದಾಸೋಹದ ಮಹತ್ವ ತಿಳಿಸಿದರು.

ಹಾವೇರಿ: ಸಮಾಜ ಸುಧಾರಕ, ಕ್ರಾಂತಿಕಾರಿ, ಭಕ್ತಿಭಂಡಾರಿ, ವಚನಕಾರ, ಮಹಾನ್ ಮಾನವತಾವಾದಿ ಅಪರೂಪದ ವ್ಯಕ್ತಿತ್ವಗಳ ಸಂಗಮ ಬಸವಣ್ಣನವರು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ್ ದಾನಮ್ಮನವರ ಬಣ್ಣಿಸಿದರು.ನಗರದ ಹುಕ್ಕೇರಿಮಠದ ಶಿವಾನುಭವ ಮಂಟಪದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹುಕ್ಕೇರಿಮಠದ ಸಹಯೋಗದಲ್ಲಿ ಜರುಗಿದ ಬಸವೇಶ್ವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ, ಪುಷ್ಪನಮನ ಸಲ್ಲಿಸಿ ಮಾತನಾಡಿದರು.ಜಾತಿ ಪದ್ಧತಿ ವಿರುದ್ಧ ಹೋರಾಡಿದ ಅವರು, ಜಾತ್ಯತೀತ ಸಮಾಜ ಕಟ್ಟಲು ಶ್ರಮಿಸಿದರು. ಬಾಲ್ಯದಲ್ಲೆ ಗಂಡು ಮತ್ತು ಹೆಣ್ಣು ಎಂಬ ತಾರತಮ್ಯ ವಿರೋಧಿಸಿದರು. ಎಲ್ಲರಿಗೂ ಕಾಯಕ ಹಾಗೂ ದಾಸೋಹದ ಮಹತ್ವ ತಿಳಿಸಿದರು ಎಂದು ಸ್ಮರಿಸಿದರು.ಬಸವಣ್ಣನವರು ಭಾರತ ಕಂಡ ಶ್ರೇಷ್ಠ ಸಂತ. ಒಂಬತ್ತು ಶತಮಾನ ಕಳೆದರೂ ಬಸಣ್ಣನವರ ಸಾಧನೆ ಹಾಗೂ ಸಂದೇಶಗಳು ಈಗಲೂ ಪ್ರಸ್ತುತವಾಗಿವೆ. ಪ್ರಜಾಪ್ರಭುತ್ವದ ಅಡಿಪಾಯ ಅನುಭವ ಮಂಟಪವಾಗಿದೆ. ಅನುಭವ ಮಂಟಪದಲ್ಲಿ ಎಲ್ಲರಿಗೂ ಸಮಾನ ಅವಕಾಶ ನೀಡಿದ್ದರು. ಅವರ ಆಚಾರ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಜಯಂತಿ ಆಚರಣೆ ಅರ್ಥಪೂರ್ಣವಾಗುತ್ತದೆ ಹಾಗೂ ಸಮಾಜ ಸುಧಾರಿಸಬಲ್ಲದು ಎಂದು ಸಲಹೆ ಮಾಡಿದರು.ಬೈಲಹೊಂಗಲ ಸಾಹಿತಿ ಹಾಗೂ ವಿಮರ್ಶಕ ಡಾ. ಫಕೀರನಾಯ್ಕ ದುಂಡಪ್ಪ ಗಡ್ಡಿಗೌಡರ ಮಾತನಾಡಿ, ಬಸವಣ್ಣನವರ ಬಗ್ಗೆ ಮಾತನಾಡುವುದು ಎಂದರೆ ಸೂರ್ಯ ಮತ್ತು ಚಂದ್ರಲೋಕಕ್ಕೆ ಪ್ರಯಾಣಿಸಿದಂತೆ. ಬಸಣ್ಣನವರ ವ್ಯಕ್ತಿತ್ವ ಅಷ್ಟು ಎತ್ತರದಲ್ಲಿದೆ. ಪ್ರೀತಿ ಮತ್ತು ಸ್ನೇಹದಿಂದ ಸಮಾಜ ಕಟ್ಟಿದರು. ಜನರಲ್ಲಿ ವೈಚಾರಿಕ ವಿಚಾರಗಳನ್ನು ಬಿತ್ತಿದ್ದರು. ಇಡಿ ವಿಶ್ವಕ್ಕೆ ಸಂಸತ್ತಿನ ಪರಿಕಲ್ಪನೆ ಮೂಡಿಸಿದ ಶ್ರೇಯಸ್ಸು ಬಸವಣ್ಣನವರಿಗೆ ಸಲ್ಲುತ್ತದೆ.

ಅನುಭವ ಮಂಟಪದಲ್ಲಿ ಎಲ್ಲ ಶರಣರಿಗೆ ಅವಕಾಶ ನೀಡಿದ್ದರು. ಮಹಿಳಾ ಸಮಾನತೆಗೆ ಹೋರಾಟ ಮಾಡಿದ ಸ್ತ್ರೀ ಸ್ವಾತಂತ್ರ‍್ಯ ಸುಧಾರಕ, ದಯೆ, ಅನುಕಂಪ, ಪ್ರೀತಿ ಹಾಗೂ ಮಾನವೀಯತೆ ಧರ್ಮ ಎಂದು ತೋರಿಸಿಕೊಟ್ಟವರು. ಇದನ್ನು ಅರ್ಥ ಮಾಡಿಕೊಳ್ಳಬೇಕು. ಜಯಂತಿ ಆಚರಣೆ ಅರಿವಿನ ಜಾತ್ರೆಯಾಗಬೇಕು. ಬಸವಣ್ಣನವರ ಸಂದೇಶ ಎಲ್ಲೆಡೆ ಮುಟ್ಟಿಸುವ ಕೆಲಸ ಇನ್ನಷ್ಟು ವ್ಯಾಪಕವಾಗಿ ಆಗಮಬೇಕಿದೆ. ಇದರಿಂದ ಅರಿವಿನ ಬೆಳವಣಿಗೆ ಮತ್ತು ಜಾಗೃತಿ ಮೂಡಲು ಸಾಧ್ಯ ಎಂದರು.ಸಾನಿಧ್ಯ ವಹಿಸಿದ್ದ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹಾಗೂ ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು. ನಗರಸಭೆ ಅಧ್ಯಕ್ಷೆ ಶಶಿಕಲಾ ರಾಮು ಮಾಳಗಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡ್ರ, ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ ಹಾಗೂ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಎಂ.ಎಂ. ಮೈದೂರ, ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ್ ಎಲ್., ಹಾವೇರಿ ಬಸವ ಬಳಗದ ಅಧ್ಯಕ್ಷ ವಿ.ಜಿ. ಎಳಗೇರಿ ಹಾಗೂ ಹುಕ್ಕೇರಿಮಠದ ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಅಶೋಕ ಮಾಗನೂರ, ತಹಸೀಲ್ದಾರ್ ಶರಣಮ್ಮ, ನಗರಸಭೆ ಆಯುಕ್ತ ಗಂಗಾಧರ ಬೆಲ್ಲದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಆರ್. ವಿ. ಚಿನ್ನಿಕಟ್ಟಿ, ಪಿ.ಡಿ. ಶಿರೂರ ಹಾಗೂ ಇತರರು ಉಪಸ್ಥಿತರಿದ್ದರು. ಸುನಿಲ್ ಸ್ವಾಗತಿಸಿದರು. ಅನಿತಾ ಹರನಗಿರಿ ನಿರೂಪಿಸಿದರು.ಪುತ್ಥಳಿಗೆ ಮಾಲಾರ್ಪಣೆ

ಕಾರ್ಯಕ್ರಮಕ್ಕೂ ಮೊದಲು ಬೆಳಗ್ಗೆ ನಗರದ ಹೊಸಮಠದ ಎದುರು ಇರುವ ಬಸವೇಶ್ವರ ವೃತ್ತದಲ್ಲಿನ ಪ್ರತಿಮೆಗೆ ಹೊಸಮಠದ ಬಸವ ಶಾಂತಲಿಂಗ ಶ್ರೀಗಳು, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಸೇರಿದಂತೆ ಗಣ್ಯರು ಮಾಲಾರ್ಪಣೆ ಮಾಡುವ ಮೂಲಕ ಪುಷ್ಪನಮನ ಸಲ್ಲಿಸಿದರು.