ಪಾಳು ಬಿದ್ದ ಜಾಗ ಈಗ ಶಾಲಾ-ಮಕ್ಕಳಿಗೆ ಸೆಲ್ಫಿ ಪಾಯಿಂಟ್‌

| Published : Feb 08 2024, 01:30 AM IST

ಪಾಳು ಬಿದ್ದ ಜಾಗ ಈಗ ಶಾಲಾ-ಮಕ್ಕಳಿಗೆ ಸೆಲ್ಫಿ ಪಾಯಿಂಟ್‌
Share this Article
  • FB
  • TW
  • Linkdin
  • Email

ಸಾರಾಂಶ

ಬೀದರ್‌ನ ಪೊಲೀಸ್‌ ವೃತ್ತಕ್ಕೆ ನೂತನ ರೂಪ. ಪೊಲೀಸ್‌ ಆ್ಯಕ್ಷನ್-1948 ವೃತ್ತ ಎಂದು ಹೆಸರಿಟ್ಟು ವೃತ್ತದಲ್ಲಿ ಹೆಲ್ಮೇಟ್‌ ಇಟ್ಟು ಶಾಲಾ ಮಕ್ಕಳಿಗೆ ಜಾಗೃತಿ ಮೂಡಿಸಲು ಪ್ರಯತ್ನ. ಜನಸ್ನೇಹಿ, ಮಕ್ಕಳ ಸ್ನೇಹಿಯಾಗುತ್ತಿರುವ ಪೊಲೀಸ್‌ ಇಲಾಖೆ.

ಕನ್ನಡಪ್ರಭ ವಾರ್ತೆ ಬೀದರ್‌

ನಗರದ ಫತ್ತೆದರವಾಜಾ ಬಳಿ ಪೊಲೀಸ್‌ ಚೌಕ್‌ ಎಂದೇ ಹೆಸರು ವಾಸಿಯಾಗಿದ್ದ ಪಾಳು ಬಿದ್ದ ವೃತ್ತಕ್ಕೆ ಪೊಲೀಸ್‌ ಇಲಾಖೆ ಹೊಸ ರೂಪ ಕೊಟ್ಟು ಅದನ್ನು ಶಾಲಾ ಮಕ್ಕಳಿಗೆ ಸೆಲ್ಫಿ ಪಾಯಿಂಟ್‌ ಅಷ್ಟೇ ಅಲ್ಲದೆ ಸಂಚಾರ ನಿಯಮಗಳ, ಜ್ಞಾನಾರ್ಜನೆಯ ಕೇಂದ್ರವಾಗಿ ಪರಿವರ್ತನೆ ಮಾಡಿದೆ.

ಅನೇಕ ದಶಕಗಳಿಂದ ಪಾಳು ಬಿದ್ದಿರುವ ಇಲ್ಲಿನ ಪೊಲೀಸ್‌ ವೃತ್ತಕ್ಕೆ ಪೊಲೀಸ್‌ ಆ್ಯಕ್ಷನ್-1948 ವೃತ್ತ ಎಂದು ಹೆಸರಿಟ್ಟು ಶಾಲಾ ಮಕ್ಕಳಿಗೆ ಪೊಲೀಸ್‌ ಇಲಾಖೆಯ ಸಂಪೂರ್ಣ ಮಾಹಿತಿ, ಅಪಘಾತ ತಡೆಯಲು ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ತಿಳಿಸುವ ಪ್ರಯತ್ನ ಮಾಡಲಾಗಿದೆ.

ಪೊಲೀಸ್‌ ಆ್ಯಕ್ಷನ್‌ 1948 ವೃತ್ತಕ್ಕೆ ಬಂದರೆ ಸಾಕು, ಭಾರತ ದೇಶ ಸ್ವಾತಂತ್ರ್ಯ ಆದರೂ ಈ ಕ್ಷೇತ್ರ ಇನ್ನೂ ನಿಜಾಮನ ಹಿಡಿತದಲ್ಲಿತ್ತು. ಅದನ್ನು ದೇಶದ ಪ್ರಥಮ ಗೃಹ ಸಚಿವರಾದ ಸರದಾರ ವಲ್ಲಭಭಾಯಿ ಪಟೇಲ್‌ ಅವರು ಪೊಲೀಸರಿಗೆ ಬಳಸಲು ನೀಡಿದ ಆಯುಧಗಳ ಮೂಲಕ ಪೊಲೀಸ್‌ ಆ್ಯಕ್ಷನ್‌ ನಡೆಸಿ ಸ್ವಾತಂತ್ರ್ಯ ನೀಡಿರುವ ಕುರಿತು ಹಾಗೂ ಈಗಿನ ಪೊಲೀಸ್‌ ಅಧಿಕಾರಿಗಳಿಗೆ ಇರುವ ಬ್ಯಾಡ್ಜ್‌ಗಳ ಬಗ್ಗೆಯೂ ವಿಸ್ತಾರವಾಗಿ ನಮೂದಿಸಲಾಗಿದೆ.

ಶಾಲಾ ಮಕ್ಕಳಿಗಾಗಿಯೇ ವಿಶೇಷವಾಗಿ ಒಂದು ಪೊಲೀಸ್‌ ಜೀಪ್‌ ಇಟ್ಟಿದ್ದು ಅದರ ಮೇಲೆ ಸ್ವಯಂ ಚಾಲಿತ ಮಶಿನ್‌ ಗನ್‌ ಮಾದರಿ ಇಡಲಾಗಿದೆ. ಜೀಪಿನ ಹಿಂದುಗಡೆ ಪೊಲೀಸ್‌ ಆ್ಯಕ್ಷನ್‌ ಸಮಯದಲ್ಲಿ ನಡೆದ ಘಟನೆಗಳು ಹಾಗೂ ಹೈದ್ರಾಬಾದ್‌ ನಿಜಾಮನ ಶರಣಾಗತಿಯ ಚಿತ್ರಗಳನ್ನು ಚಿತ್ರೀಕರಿಸಲಾಗಿದೆ.

ಮಕ್ಕಳಿಗೆ ಅಪಘಾತ ತಡೆ ಕುರಿತು ಮಾಹಿತಿ:

ಶಾಲಾ ಮಕ್ಕಳಿಗೆ ಪೊಲೀಸ್‌ ಸರ್ಕಲ್‌ ಬಳಿ ಒಂದು ಬೈಕ್‌ ಇಟ್ಟಿದ್ದು ಅದರ ಮೇಲೆ ಒಂದು ಹೆಲ್ಮೆಟ್‌ ಇಡಲಾಗಿದೆ. ಆ ಹೆಲ್ಮೇಟ್‌ ಮೂಲಕ ಹೆಲ್ಮೇಟ್‌ ಹಾಕಿಕೊಂಡಾಗ ಅಪಘಾತ ನಡೆದರೆ ಏನಾಗುತ್ತದೆ ಇಲ್ಲದೆ ಇದ್ದಾಗ ಅಪಘಾತವಾದರೆ ಏನಾಗುತ್ತದೆ ಯಾವ ರೀತಿಯ ಪೆಟ್ಟಿನ ಅನುಭವದ ಕುರಿತು ಮಾಹಿತಿ ನೀಡುತ್ತದೆ. ಇದಲ್ಲದೆ ಕ್ಯೂಆರ್‌ ಕೋಡ್‌ ನೀಡಿದ್ದು ಮಕ್ಕಳು ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿದರೆ ಅಪಘಾತಗಳ ವಿಡಿಯೋಗಳು ಸಿಗುತ್ತವೆ.

ಡಾ. ಬಾಬಾ ಸಾಹೇಬ್‌ ಗಡ್ಡೆ ಅವರ ಚಿಂತನೆ: ಇದ್ದ ವೃತ್ತವನ್ನೇ ಬಳಸಿಕೊಂಡು ಅದರಲ್ಲಿ ಹಳ್ಳಿ ಕಟ್ಟೆ, ಪೊಲೀಸ್ ಇಲಾಖೆಯ ಅಧಿಕಾರಿಗಳ ವಿವರ, ನಿಜಾಮನ ಕಪಿಮುಷ್ಠಿಯಿಂದ ಈ ಭಾಗ ಸ್ವಾತಂತ್ರ್ಯ ಪಡೆದದ್ದು, ಬೈಕ್‌ ಸವಾರರು ಹೆಲ್ಮೇಟ್‌ ಧರಿಸದೆ ಇದ್ದಲ್ಲಿ ಏನಾಗುತ್ತದೆ ಎಂಬುವದರ ವಿಸ್ತ್ರತ ಯೋಜನೆ ಸಿದ್ಧಪಡಿಸಿದ ಜಿಲ್ಲೆಯ ವೈದ್ಯ, ಪ್ರಮುಖ ಇಲಾಖೆಗಳ ವಿಶಿಷ್ಟ ಯೋಜನೆಗಳಿಗೆ ಖಾಸಗಿ ತಾಂತ್ರಿಕ ಸಲಹೆಗಾರರೆಂದೇ ಗುರುತಿಸಿಕೊಳ್ಳುವ ಡಾ. ಬಾಬಾ ಸಾಹೇಬ್‌ ಗಡ್ಡೆ ಅವರ ಚಿಂತನೆ ಹಾಗೂ ಯೋಜನೆ ಇದಾಗಿತ್ತು ಎಂದು ಎಸ್‌ಪಿ ಚನ್ನಬಸವಣ್ಣ ಎಸ್‌.ಎಲ್‌ ತಿಳಿಸಿದ್ದಾರೆ.

ಡಾ. ಬಾಬಾ ಸಾಹೇಬ್ ಗಡ್ಡೆ ಈಗಾಗಲೇ ಬಸವಕಲ್ಯಾಣದ ನೂತನ ಅನುಭವ ಮಂಟಪ ನಿರ್ಮಾಣ ಕಾರ್ಯದಲ್ಲಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. ಹೀಗಾಗಿ ಎಸ್ಪಿ ಚನ್ನಬಸವಣ್ಣ ಬಾಬಾ ಸಾಹೇಬ್ ಗಡ್ಡೆಯವರಿಂದ ಯೋಜನೆ ಸಿದ್ಧಪಡಿಸಿ ಸ್ಥಳೀಯವಾಗಿ ಆಟೋಮೊಬೈಲ್ಸ್‌ ಸಂಸ್ಥೆಗಳ ಸಹಕಾರದಿಂದ ಎಲ್ಲವನ್ನೂ ಸಿದ್ಧಪಡಿಸಿ ಸಾರ್ವಜನಿಕರ ಹಾಗೂ ಮಕ್ಕಳ ಮನ ಗೆಲ್ಲುವತ್ತ ಕಾರ್ಯ ಮಾಡಿದ್ದಾರೆ ಎಂದರೆ ತಪ್ಪಾಗಲಾರದು.