ಲೀಡ್‌..ಶರಣರ ವಚನಗಳೇ ನಮಗೆ ಬೈಬಲ್, ಕುರಾನ್: ಎ.ಎಸ್. ಪಾವಟೆ

| Published : Jun 18 2024, 12:48 AM IST

ಲೀಡ್‌..ಶರಣರ ವಚನಗಳೇ ನಮಗೆ ಬೈಬಲ್, ಕುರಾನ್: ಎ.ಎಸ್. ಪಾವಟೆ
Share this Article
  • FB
  • TW
  • Linkdin
  • Email

ಸಾರಾಂಶ

ಮುಧೋಳ ತಾಲೂಕಿನ ಚಿಂಚಖಂಡಿ ಕೆ.ಡಿ. ಗ್ರಾಮದ ಮಲ್ಲಪ್ಪ ನೀಲಿ ಶಾಲೆಯಲ್ಲಿ ಶ.ಸಾ.ಪ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಅತಿಥಿ ಗಣ್ಯರು ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಮುಧೋಳ

12ನೇ ಶತಮಾನದಲ್ಲಿ ಶರಣರು ನೀಡಿದ ವಚನಗಳೇ ನಮಗೆಲ್ಲ ಬೈಬಲ್, ಕುರಾನ್ ಗಳು ಇದ್ದಂತೆ. ವಚನಕಾರರು ತಮ್ಮದೆ ಆದ ಸರಳ ಭಾಷೆಯಲ್ಲಿ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ವಚನಗಳು ನಮಗೆ ಜೀವನದ ಮಾರ್ಗದರ್ಶಕಗಳಾಗಿವೆ ಎಂದು ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಎ.ಎಸ್. ಪಾವಟೆ ಹೇಳಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ವೇದಿಕೆ ಮುಧೋಳ ತಾಲೂಕು ಘಟಕ ವತಿಯಿಂದ ಗುಲಗಾಲಜಂಬಗಿಯ ಲಿಂ.ಮಲ್ಲಪ್ಪ ಬಸಪ್ಪ ನೀಲಿ ಇವರ ಸ್ಮರಣಾರ್ಥ ಸೋಮವಾರ ಚಿಂಚಖಂಡಿ ಕೆ.ಡಿ. ಗ್ರಾಮದ ಮಲ್ಲಪ್ಪ ನೀಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅವಿದ್ಯಾವಂತರ ಸಂಖ್ಯೆಯೇ ಹೆಚ್ಚಿರುವ 12ನೇ ಶತಮಾನದಲ್ಲಿ ಅನುಭವಿ ಶರಣರು ಜಾತ್ಯತೀತವಾಗಿ ತಾರತಮ್ಯವಿಲ್ಲದೆ ವಚನಗಳನ್ನು ಬರೆದು, ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ನುಡಿದಂತೆ ನಡೆದು ತೋರಿಸಿದರು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವಿಂದು ನಡೆದು ತೋರಿಸಬೇಕಾಗಿದೆ ಎಂದರು.ಇಂದು ವಚನಗಳು ವೇದಿಕೆಗೆ ಮಾತ್ರ ಸೀಮಿತವಾಗಿವೆ. ಜೀವನದಲ್ಲಿ ಅಳವಡಿಸಿಕೊಳ್ಳುವವರ ಸಂಖ್ಯೆಯೇ ಕಡಿಮೆಯಿದೆ. ಜೀವನದಲ್ಲಿ ಅಳವಡಿಸಿಕೊಂಡು ಮಾರ್ಗದರ್ಶನ ನೀಡುವವರ ಸಂಖ್ಯೆ ಬೆರಳಣಿಕೆಯಷ್ಟಿದೆ. ಶರಣರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆದರೆ ನಮ್ಮೆಲ್ಲರ ಜೀವನ ಪರಿಶುದ್ಧವಾಗುತ್ತದೆ. ವಚನಕಾರರು ವಚನಗಳ ಮೂಲಕ ಇಂದಿನ ಸಮಾಜಕ್ಕೆ ಅಂಕುಶಗಳನ್ನು ಬಿಟ್ಟು ಹೋಗಿದ್ದಾರೆ. ಇಂದಿನ ಜನತೆಗೆ ವಚನಗಳ ಸಾರವನ್ನು ತಿಳಿಸಿ ಜಾಗೃತರನ್ನಾಗಿ ಮಾಡಬೇಕಿದೆ ಎಂದರು.

ಶ.ಸಾ.ಪ ಹಾಗೂ ಕದಳಿ ವೇದಿಕೆ ಪದಾಧಿಕಾರಿಗಳಾದ ಕಲ್ಲಪ್ಪ ಸಬರದ, ಎಸ್.ಡಿ. ಬಿಳ್ಳೂರ, ಡಾ.ಸಿದ್ದು ದಿವಾಣ, ಉಮಾ (ರುದ್ರಮ್ಮ) ರೇವಡಿಗಾರ, ವಿಜಯಲಕ್ಷ್ಮೀ ಭದ್ರಶೆಟ್ಟಿ, ವಿಜಯಾ ಹಂಗರಗಿ, ಬಸವರಾಜ ಮುಕುಪಿ ಮಾತನಾಡಿ, ಪ್ರಸ್ತುತ ಮನುಷ್ಯನಲ್ಲಿ ಸಮಯ ಪ್ರಜ್ಞೆ ಇಲ್ಲದಾಗಿದೆ. ಪ್ರತಿಯೊಬ್ಬರು ಮೊಬೈಲ್ ಬಳಕೆಯಿಂದ ತಮ್ಮ ಸ್ವಂತಿಕೆ ಕಳೆದುಕೊಳ್ಳುತ್ತಿದ್ದಾನೆ. ಸಮಾನತೆ ಸಾರಿದ ಬಸವಣ್ಣನವರ ವಚನಗಳನ್ನು ಹೇಳಿಕೊಂಡು ದಾರಿ ತಪ್ಪಿಸುವವರು ಇದ್ದಾರೆ. ಅಂತಹವರಿಂದ ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದ ಅವರು, ಶರಣರು ಹೇಳಿಕೊಟ್ಟ ವಚನಗಳನ್ನು ಓದಿ, ಅರ್ಥೈಸಿಕೊಂಡು ಅದರಂತೆ ನಡೆದುಕೊಳ್ಳಬೇಕೆಂದು ಹೇಳಿದರು.

ಶ.ಸಾ.ಪ ತಾಲೂಕಾ ಅಧ್ಯಕ್ಷ ನಾಗಪ್ಪ ಮುರಗೋಡ ಅಧ್ಯಕ್ಷತೆ ವಹಿಸಿ ಸಾಂದರ್ಭಿಕವಾಗಿ ಮಾತನಾಡಿದರು, ಎಸ್.ಎಸ್. ಅಕ್ಕಿಮರಡಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಶ.ಸಾ.ಪ ಕಾರ್ಯದರ್ಶಿ ರುದ್ರಪ್ಪ ಜಾಡರ ಸ್ವಾಗತಿಸಿ, ವಂದಿಸಿದರು.

ದತ್ತಿ ದಾನಿಗಳಾದ ಶ್ರೀಶೈಲ, ಬಸಪ್ಪ, ಪಂಚಪ್ಪ ನೀಲಿ, ಸಿದ್ದಲಿಂಗಪ್ಪ ಅಕ್ಕಿಮರಡಿ, ಕಲ್ಲನಗೌಡ ಪಾಟೀಲ, ಜಗದೀಶ ಮುಳ್ಳೂರ, ಮಹಾದೇವಿ ಮಾಲೋಜಿ, ವಿಶ್ವನಾಥ ಮುನವಳ್ಳಿ, ಸುರೇಶ ರಾಮತೀರ್ಥ, ಸವಿತಾ ಅಂಗಡಿ, ನಿರ್ಮಲಾ (ಹೇಮಾ) ನಾವಲಗಿ, ಸೀಮಾ ರಾಮತೀರ್ಥ ಸೇರಿದಂತೆ ಇತರರು ಇದ್ದರು.