ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ರಾಜ್ಯದಲ್ಲೇ ಅತಿ ಹೆಚ್ಚು ಕನ್ನಡ ಮಾತನಾಡುವುದು ಮಂಡ್ಯದಲ್ಲಿ. ಇಲ್ಲಿ ಕನ್ನಡವನ್ನು ಕಟ್ಟುವ ಕೆಲಸವನ್ನು ಜನರೇ ಮಾಡುತ್ತಾರೆ. ಕನ್ನಡಪರ ಸಂಘಟನೆಗಳು ಜಾಗ್ರತೆಯಿಂದ ಕನ್ನಡದ ಕೆಲಸ ಮಾಡಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಹೇಳಿದರು.ಪಟ್ಟಣದ ಸುಲೋಚನಮ್ಮ ರಾಮದಾಸ್ ಸಭಾಂಗಣದಲ್ಲಿ ಕರ್ನಾಟಕ ಯುವ ರಕ್ಷಣಾ ವೇದಿಕೆ ನೂತನ ಘಟಕವನ್ನು ಉದ್ಘಾಟಿಸಿ ಮಾತನಾಡಿ, ನನ್ನಿಂದ ಯುವ ರಕ್ಷಣಾ ಘಟಕವನ್ನು ಉದ್ಘಾಟಿಸಿದ್ದೀರಿ. ನಿಮ್ಮ ನಡೆ ನುಡಿಗಳು ಪಾರದರ್ಶಕವಾಗಿರಬೇಕು. ನಮ್ಮ ನಾಡು ನುಡಿಯ ಬಗ್ಗೆ ಎಲ್ಲರೂ ಹೆಚ್ಚು ಗೌರವ ಬರುವಂತೆ ನಡೆದುಕೊಳ್ಳಬೇಕು ಎಂದರು.
ಕೇವಲ ನವೆಂಬರ್ ಸಂಘಟನೆಯಾಗಿ ಕನ್ನಡಪರ ಸಂಘಟನೆಗಳು ಇರಬಾರದು. ನಾಡಿನ ಸಮಸ್ಯೆಯಷ್ಟೆ ಅಲ್ಲದೆ ಶೋಷಿತರ, ಬಡವರ, ಮಹಿಳೆಯರ ಧ್ವನಿಯಾಗಿ ಕೆಲಸವನ್ನು ಮಾಡಬೇಕು. ನಾನು ಕನ್ನಡ ಭಾಷೆ ಮೇಲೆ ಇಟ್ಟಿರುವ ಪ್ರೀತಿಯಿಂದ ಇಲ್ಲಿಗೆ ಬಂದಿದ್ದೇನೆ. ವೇದಿಕೆ ರಾಜ್ಯಾಧ್ಯಕ್ಷ ಡಾ.ಎಂ.ಎಸ್.ಸುನಿಲ್ ನೇತೃತ್ವದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಲಿ ಎಂದು ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ನಾಗೇಂದ್ರಕುಮಾರ್, ವೇದಿಕೆ ರಾಜ್ಯಾಧ್ಯಕ್ಷ ಎಂ.ಎಸ್.ಸುನಿಲ್, ತೆಂಡೆಕೆರೆ ಬಾಳೆಹೊನ್ನೂರು ಶಾಖಾ ಮಠದ ಪೀಠಾಧ್ಯಕ್ಷ ಶ್ರೀ ಗಂಗಾಧರಶಿವಾಚಾರ್ಯ ಸ್ವಾಮೀಜಿ, ಗವಿಮಠದ ಶ್ರೀ ಸ್ವತಂತ್ರ ಚನ್ನವೀರಯ್ಯ ಸ್ವಾಮೀಜಿ, ಬೆಡದಹಳ್ಳಿ ಪಂಚಭೂತೇಶ್ವರ ಮಠದ ಶ್ರೀ ರುದ್ರಮುನಿ ಸ್ವಾಮೀಜಿ, ಆದಿಚುಂಚನಗಿರಿ ಹೇಮಗಿರಿ ಶಾಖಾ ಮಠದ ಡಾ.ಜೆ.ಎನ್.ರಾಮಕೃಷ್ಣಗೌಡ, ಸಮಾಜ ಸೇವಕರಾದ ಆರ್.ಟಿ.ಓ. ಮಲ್ಲಿಕಾರ್ಜುನ್ ಮತ್ತಿತರರು ಉಪಸ್ಥಿತರಿದ್ದರು.ಮಹಿಳೆಯರಿಂದ ದೂರು ಸ್ವೀಕರಿಸಿದ ಮಹಿಳಾ ಆಯೋಗದ ಅಧ್ಯಕ್ಷರು
ಕೆ.ಆರ್.ಪೇಟೆ:ಪಟ್ಟಣಕ್ಕೆ ಆಗಮಿಸಿದ್ದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಹಲವು ಮಹಿಳೆಯರಿಂದ ದೂರುಗಳನ್ನು ಸ್ವೀಕರಿಸಿದರು.
ಇದೇ ವೇಳೆ ತಹಸೀಲ್ದಾರ್, ತಾಪಂ ಇಒ, ವೃತ್ತ ಆರಕ್ಷ್ಕ ನಿರೀಕ್ಷಕಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಜೊತೆಯಲ್ಲಿದ್ದು ಮಹಿಳೆಯರ ದೂರುಗಳನ್ನು ದಾಖಲಿಸಿಕೊಂಡರು.ಈ ವೇಳೆ ಮಾತನಾಡಿದ ಅವರು, ವೃತ್ತ ಆರಕ್ಷಕ ನಿರೀಕ್ಷಕರಿಗೆ ಮಹಿಳೆಯರ ಮೇಲೆ ದೌರ್ಜನ್ಯ ದಬ್ಬಾಳಿಕೆ ನಡೆದರೂ ಪೊಲೀಸರು ದೌರ್ಜನ್ಯ ಮಾಡಿದವರ ವಿರುದ್ದ ಎಫ್ಐಆರ್ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದರೆ ಆಯೋಗ ಸಹಿಸುವುದಿಲ್ಲ. ಪ್ರಕರಣ ಚಿಕ್ಕದು ದೊಡ್ಡದು ಎಂದು ಏಕೆ ನೀವೆ ಸ್ವಯಂ ತೀರ್ಮಾನ ಮಾಡುತ್ತೀರಿ ಎಂದು ಎಚ್ಚರಿಸಿದರು.
ಮಾಂಬಹಳ್ಳಿಯಲ್ಲಿ ಸುಲೋಚನ ಎಂಬ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದರೂ 307ಸೆಕ್ಷನ್ ದಾಖಲಿಸದೇ ಲಘು ಪ್ರಕರಣ ದಾಖಲಿಸಿರುವ ಬಗ್ಗೆ ಅವರ ಮಕ್ಕಳಾದ ಯಶಸ್ವಿನಿಗೌಡ ಮತ್ತು ಹರ್ಷವರ್ಧಿನಿಗೌಡ ಅವರು ದೂರು ಪತ್ರ ನೀಡಿದರು. ಹೊಸಹೊಳಲು ಗ್ರಾಮದ ದಲಿತ ಮಹಿಳೆ ರತ್ನಮ್ಮ ತಮ್ಮ ಗಂಡ ನಂದೀಶ್ 17 ವರ್ಷ ಸಂಸಾರ ಮಾಡಿ ಈಗ ನೀನು ಕೆಳ ಜಾತಿಯವಳು ಎಂದು ನನ್ನಿಂದ ದೂರವಿದ್ದಾರೆ. ಈ ಬಗ್ಗೆ ಠಾಣೆಗೆ ದೂರು ನೀಡಿದರೂ ಯಾವುದೆ ಕ್ರಮ ಕೈಗೊಂಡಿಲ್ಲ ಎಂದರು.ಸ್ಥಳದಲ್ಲೇ ಇದ್ದ ಇನ್ಸ್ಪೆಕ್ಟರ್ ಸುಮಾರಾಣಿ ಮತ್ತು ಸಿಡಿಪಿಓ ವಿದ್ಯಾವತಿ ಅವರಿಗೆ ಕೂಡಲೆ ಸಮಸ್ಯೆ ಬಗೆಹರಿಸಿ ವರದಿ ನೀಡಬೇಕು ಎಂದು ಖಡಕ್ ಸೂಚನೆ ನೀಡಿದರು.
ಈ ವೇಳೆ ಹಲವು ದೂರುಗಳು ಸ್ವೀಕೃತವಾಗಿದ್ದವು. ಸ್ಥಳದಲ್ಲಿ ಇಲ್ಲದ ಅಧಿಕಾರಿಗಳಿಗೆ ಮೊಬೈಲ್ ಮೂಲಕ ವಿಚಾರ ತಿಳಿಸಿ ಸಮಸ್ಯೆಗಳನ್ನು ಬಗಹರಿಸುವಂತೆ ತಾಕೀತು ಮಾಡಿದರು.