ಕನ್ನಡಪ್ರಭ ವಾರ್ತೆ ವಿಜಯಪುರ

ಬೇರೆ ಬೇರೆ ಧರ್ಮಕ್ಕೆ ಮತಾಂತರಗೊಂಡಿರುವ ಬಂಜಾರಾ ಸಮಾಜ ಬಾಂಧವರನ್ನು ಮರಳಿ ಸನಾತನ ಧರ್ಮಕ್ಕೆ ಕರೆತಂದು, ಹಿಂದೂ ಧರ್ಮವನ್ನು ಗಟ್ಟಿಗೊಳಿಸುವ ಕೆಲಸ ಮಾಡಲಾಗುವುದು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರ ಮತಕ್ಷೇತ್ರದ ವ್ಯಾಪ್ತಿಯ ತೊರವಿ ಗ್ರಾಮ ಪಂಚಾಯಿತಿಯ ತೊರವಿ ತಾಂಡಾ ನಂ.1ರಲ್ಲಿ ನಿರ್ಮಿಸಲಾದ ಓವರ್‌ಹೆಡ್ ಟ್ಯಾಂಕ್‌, ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ, ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಹಾಗೂ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಮತ್ತು ಸಮಾಜ ಕಲ್ಯಾಣ ಇಲಾಖೆಯಡಿ ನಿರ್ಮಿಸಲಾದ ಸೇವಾಲಾಲ್ ದೇವಸ್ಥಾನದ ಹತ್ತಿರ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.ಅಧಿಕಾರ ಇದ್ದಾಗ ಉಪಯೋಗ ಮಾಡಿಕೊಂಡು ಜನರಿಗಾಗಿ, ಧರ್ಮಕ್ಕಾಗಿ ಕೆಲಸ ಮಾಡಬೇಕು. ಅನೇಕರು ಪ್ರಧಾನಮಂತ್ರಿಗಳು, ಮುಖ್ಯಮಂತ್ರಿ, ಮಂತ್ರಿಗಳು ಆಗಿದ್ದಾರೆ. ಅವರಲ್ಲಿ ಕೆಲವರನ್ನು ಮಾತ್ರ ನೆನೆಯುತ್ತೇವೆ. ಕಾರಣ ಒಳ್ಳೆಯದನ್ನು ಮಾಡಿದವರನ್ನು ಜನ ಸ್ಮರಿಸುತ್ತಾರೆ. ನಾನು ಅಭಿವೃದ್ಧಿ ಕಾರ್ಯ ಮಾಡುತ್ತೇನೆ ಅಂತಲೇ ಇಡೀ ಬಂಜಾರಾ ಸಮಾಜ ಪ್ರತಿ ಚುನಾವಣೆಯಲ್ಲಿ ಒಗ್ಗಟ್ಟಾಗಿ ಮತ ನೀಡುತ್ತಾರೆ. ಅವರ ನಿರೀಕ್ಷೆಯಂತೆ ಅಭಿವೃದ್ಧಿ ಕಾರ್ಯಗಳನ್ನು ನಗರದಂತೆಯೇ ತಾಂಡಾಗಳಲ್ಲಿಯೂ ಮಾಡಿರುವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮೋಹನ ಮಹಾರಾಜ, ತುಳಸಿಂಗ ನಾಯಕ, ಗೋಪಾಲ ಮಹಾರಾಜ, ಚಂದು ಮಹಾರಾಜ, ಗಣಪತಿ ಪವಾರ, ಸೋಮು ಪೂಜಾರಿ, ತಹಸೀಲ್ದಾರ್‌ ಸುರೇಶ ಜಮಾದಾರ, ಪಿಡಿಒ ರಾಜಶ್ವರಿ ತುಂಗಳ, ದೇವರಾಜ ರಾಠೋಡ, ನೇಮು ರಾಠೋಡ, ಭಗವಂತ ರಾಠೋಡ, ಮಾನಸಿಂಗ ರಾಠೋಡ, ಶಿವಾಜಿ ಜಾಧವ, ಉಮೇಶ ರಾಠೋಡ, ಪ್ರಕಾಶ ಚವ್ಹಾಣ, ಶಂಕರ ಹೂಗಾರ, ಚಂದ್ರು ಚೌದರಿ ಇದ್ದರು.