ಸಾರಾಂಶ
ಚಳ್ಳಕೆರೆ ನಗರದ ಗಾಯಿತ್ರಿ ಕಲ್ಯಾಣ ಮಂಟಪದಲ್ಲಿ ಬ್ರಹ್ಮಚೈತನ್ಯ ಮಂಡಳಿಯ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರವರನ್ನು ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಸಮಸ್ತ ಮಾನವ ಕುಲದ ಒಳಿತಿಗಾಗಿ, ನಾಡಿನ ಜನರ ಕಷ್ಟಸುಖಗಳಿಗೆ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಪರಿಹಾರ ನೀಡುವ ಗುರುಪರಂಪರೆ ಇಂದಿಗೂ ನಮ್ಮಲ್ಲಿ ಮುಂದುವರೆದಿದೆ. ಪ್ರತಿ ಹಂತದಲ್ಲೂ ನಾವು ಸಮಸ್ಯೆಯನ್ನು ಎದುರಿಸುವಾಗ ಭಗವಂತನ ಜತೆಗೆ ಗುರುಗಳಿಗೂ ಸಹ ಮೊರೆಹಿಡುತ್ತೇವೆ. ನಾವು ಎಲ್ಲರೂ ಇಂದಿಗೂ ಭಗವಂತನಿಗೆ ಕೊಡುವ ಸಮಾನತೆಯನ್ನು ಗುರುಪರಂಪರೆಗೂ ನೀಡಿದ್ದೇವೆಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ ತಿಳಿಸಿದರು.ನಗರದ ಗಾಯಿತ್ರಿ ಕಲ್ಯಾಣ ಮಂಟಪದಲ್ಲಿ ಬ್ರಹ್ಮ ಚೈತನ್ಯ ಮಂಡಳಿಯ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ದತ್ತಾವಧೂತ ಶ್ರೀಗಳ ಆಶೀರ್ವಾದ ಪಡೆದು ಮಾತನಾಡಿದರು.
ರಾಜ್ಯದ ಹೆಬ್ಬಳಿ ಪೀಠದ ಗುರು ಪರಂಪರೆಗೆ ಉತ್ತಮ ಇತಿಹಾಸವಿದೆ. ಧಾರ್ಮಿಕ ವಿಚಾರಧಾರೆಗಳಲ್ಲಿ ನಿರಂತರ ಸಮಾಜಕ್ಕೆ ಜಾಗೃತಿ ಮೂಡಿಸುವ ಕಾರ್ಯವನ್ನು ಹೆಬ್ಬಳಿ ಪೀಠದ ಶ್ರೀಗಳು ಮಾಡುತ್ತಾ ಬಂದಿದ್ದಾರೆ. ಚಳ್ಳಕೆರೆಗೆ ಆಗಮಿಸಿ ಇಲ್ಲಿನ ಭಕ್ತರಿಗೂ ಸಹ ದರ್ಶನ ನೀಡಿ, ಎಲ್ಲರ ಕಷ್ಟಕಾರ್ಪಣ್ಯಗಳನ್ನು ದೂರಮಾಡುವಂತೆ ದೇವರಲ್ಲಿ ಪ್ರಾರ್ಥಿಸಿರುವುದು ಸಂತಸ ತಂದಿದೆ ಎಂದರು.ದತ್ತಾವಧೂತ ಶ್ರೀಗಳ ಸಚಿವ ಡಿ.ಸುಧಾಕರಗೆ ಶಾಲುಹೊದಿಸಿ ಸನ್ಮಾನಿಸಿ ಸರ್ಕಾರಗಳು ಜನರ ನಾಡಿಮಿಡಿತ ಅರಿತು ಕಾರ್ಯನಿರ್ವಹಿಸಬೇಕಿದೆ. ಸಮಾಜದ ಎಲ್ಲಾ ವರ್ಗಗಳ ಹಿತವನ್ನು ಕಾಪಾಡುವ ಜವಾಬ್ದಾರಿ ಸರ್ಕಾರ ಮೇಲಿದೆ. ನಾಡಿನ ಮಠಮಂದಿರಗಳ ಸ್ವಾಮೀಜಿಗಳು ಸಹ ಭಕ್ತರ ಹಿತವನ್ನು ಬಯಸುತ್ತಾರೆ. ನಮ್ಮ ಇಂದಿನ ಕಾರ್ಯಕ್ರಮಕ್ಕೆ ಸಚಿವ ಡಿ.ಸುಧಾಕರ ಆಗಮಿಸಿ ಧಾರ್ಮಿಕ ವಿಚಾರಧಾರೆಗಳ ಬಗ್ಗೆ ಅರ್ಧಗರ್ಭಿತವಾಗಿ ವರ್ಣಿಸಿದ್ಧಾರೆ. ಮುಂದಿನ ದಿನಗಳಲ್ಲೂ ಸಹ ಇಂತಹ ಕಾರ್ಯಕ್ರಮಗಳು ಮುಂದುವರೆಯಬೇಕು ಎಂದರು. ಕಾರ್ಯಕ್ರಮದಲ್ಲಿ ಬ್ರಹ್ಮಚೈತನ್ಯಮಂಡಳಿಯ ಸುಭ್ರಮಣ್ಯ, ನಾಗಭೂಷಣ್, ಎನ್.ಗೋಪಿನಾಥ, ಗಂಗಾಧರಶೆಟ್ಟಿ, ಡಿ.ಜಿ.ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.