ಸಾರಾಂಶ
ಭಾರತೀಯ ಸಂಸ್ಕೃತಿಯಲ್ಲಿ ಮಾಡುವ ಆಚರಣೆಗಳಿಗೆ ಜಗತ್ತಿನ ಹಿತಕಾಯುವ ಅರ್ಥ ಇರುತ್ತದೆ. ಹಾಗಾಗಿ ನಾವು, ನಮ್ಮದು ಎನ್ನುವ ಸ್ವಾರ್ಥತೆ ಇಲ್ಲ ಎಂದು ಜಡೆ ಹಿರೇಮಠ ಹಾಗೂ ಸೊರಬ ಕಾನುಕೇರಿ ಮಠದ ಘನಬಸವ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ನುಡಿದಿದ್ದಾರೆ.
ಕನ್ನಡಪ್ರಭ ವಾರ್ತೆ ಸೊರಬ
ಭಾರತೀಯ ಸಂಸ್ಕೃತಿಯಲ್ಲಿ ಮಾಡುವ ಆಚರಣೆಗಳಿಗೆ ಜಗತ್ತಿನ ಹಿತಕಾಯುವ ಅರ್ಥ ಇರುತ್ತದೆ. ಹಾಗಾಗಿ ನಾವು, ನಮ್ಮದು ಎನ್ನುವ ಸ್ವಾರ್ಥತೆ ಇಲ್ಲ. ಬದಲಾಗಿ ಜಗದ ಒಳಿತು ಭಾರತೀಯ ಸಂಸ್ಕೃತಿ ಮತ್ತು ಆಚರಣೆಯಲ್ಲಿ ಅಡಗಿದೆ ಎಂದು ಜಡೆ ಹಿರೇಮಠ ಹಾಗೂ ಸೊರಬ ಕಾನುಕೇರಿ ಮಠದ ಘನಬಸವ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ನುಡಿದರು.
ತಾಲೂಕಿನ ತೊರವಂದ ಗ್ರಾ.ಪಂ. ವ್ಯಾಪ್ತಿಯ ಉಜ್ಜಿನೀಪುರ ಗ್ರಾಮದಲ್ಲಿ ಸೋಮವಾರ ಶ್ರೀ ಬಸವೇಶ್ವರ ಸೇವಾ ಸಮಿತಿ ಹಾಗೂ ಸರ್ವ ಭಕ್ತರ ಸಹಕಾರದಿಂದ ನಿರ್ಮಿಸಿದ ಶ್ರೀ ಬಸವೇಶ್ವರ ಹಾಗೂ ಗಣಪತಿ ಹಾಗೂ ನಾಗದೇವರ ಆಲಯ ಪ್ರವೇಶ ಹಾಗೂ ದೇವರ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ ಧರ್ಮಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ನಾವು ಮಾಡುವ ಪ್ರತಿಯೊಂದು ಕ್ರಿಯೆಗೂ ಅರ್ಥ ಇರುತ್ತದೆ. ಅರ್ಥವನ್ನು ಅರಿತು ಕ್ರಿಯೆ ಮಾಡುವುದರಿಂದ ಆ ಕ್ರಿಯೆ ಇನ್ನೂ ಹೆಚ್ಚು ಅರ್ಥವನ್ನು ಪಡೆದುಕೊಳ್ಳುತ್ತದೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಯಾವೆಲ್ಲಾ ಆಚರಣೆಗಳನ್ನು ಮಾಡಿರುವರೋ ಆ ಎಲ್ಲ ಕಾರ್ಯಗಳ ಹಿಂದೆ ಒಂದು ಸದುದ್ದೇಶ ಇರುತ್ತದೆ. ಜಗತ್ತಿನ ಹಿತಕಾಯುವ ಅರ್ಥವಿರುತ್ತದೆ. ಆ ಅರ್ಥ ನಮಗೆ ಈಗ ಸಧ್ಯಕ್ಕೆ ಅರ್ಥವಾಗದಿರಬಹುದು. ಆದರೆ, ಅದನ್ನೇ ಕುರಿತು ಚಿಂತಿಸಿದಾಗ ಅದರ ಅರ್ಥವ್ಯಾಪ್ತಿ ಅರಿವಾಗುತ್ತದೆ. ನಮ್ಮ ಸಂಸ್ಕೃತಿ ನಮ್ಮ ಮುಂದಿನ ಪೀಳಿಗೆಗೆ ಉತ್ತಮ ರಹದಾರಿ ತೋರುತ್ತದೆ. ಇದು ನಮ್ಮ ಹಿಂದಿನವರ ಆಶಯವಾಗಿತ್ತು ಎಂದರು.
ಇಂದಿನ ಆಧುನಿಕ ಯುಗದಲ್ಲಿ ಯುವಜನತೆ ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳ ಬಗ್ಗೆ ಅಸಡ್ಡೆ ತೋರುತ್ತಿರುವುದು ದೇಶದ ಮಾತೃ ಸಂಸ್ಕೃತಿಗೆ ಮಾಡುತ್ತಿರುವ ಅಪಚಾರವಾಗಿದೆ. ದೇವರು ಎಂದರೆ ನಮ್ಮ ಅಂತರಂಗದ ಅರಿವನ್ನು ತೋರಲು ಇರುವ ಸಾಧನವಾಗಿದೆ. ಅಂತರಂಗದ ಅರಿವನ್ನು ಹೊಂದುವುದೇ ಮನುಷ್ಯ ಜನ್ಮದ ಗುರಿಯಾಗಬೇಕು ಎಂದರು.
ದೇವಾಲಯ ನಿರ್ಮಾಣ ಮಾಡುವಾಗಿನ ಭಕ್ತಿ ಅದನ್ನು ನಿರ್ಮಿಸಿದ ಮೇಲೂ ಇರಬೇಕು. ನಿತ್ಯವೂ ದೇವಾಲಯಕ್ಕೆ ಕಡ್ಡಾಯವಾಗಿ ಬರಬೇಕು. ಹತ್ತು ನಿಮಿಷಗಳವರೆಗೆ ಧ್ಯಾನ ಮಾಡಬೇಕು. ಆಗ ನಮ್ಮ ಸಂಸ್ಕೃತಿ ಉಳಿಯುತ್ತದೆ. ಮನಸ್ಸಿಗೆ ಶಾಂತಿ- ನೆಮ್ಮದಿ ದೊರೆಯುತ್ತದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಮೂಡಿ ಸಂಸ್ಥಾನ ಮಠದ ಸದಾಶಿವ ಮಹಾಸ್ವಾಮಿಗಳು ಮಾತನಾಡಿ, ಇಂತಹ ಕಾರ್ಯಗಳು ಮನಸ್ಸಿಗೆ ನೆಮ್ಮದಿ ಶಾಂತಿ ತರುತ್ತವೆ. ದೇವಾಲಯಗಳು ಮಕ್ಕಳಲ್ಲಿ ಸಂಸ್ಕಾರವನ್ನು ಮೂಡಿಸುತ್ತವೆ. ಇಷ್ಟು ಉತ್ತಮ ಸ್ಥಳದಲ್ಲಿ ದೇವಾಲಯ ನಿರ್ಮಿಸಿದ್ದಿರಿ. ಇದರ ಸದ್ಭಳಕೆ ಆಗಬೇಕು ಎಂದರು.
ವೇದಮೂರ್ತಿ ಚರಂತಯ್ಯ ಶಾಸ್ತ್ರಿ ಹಾಗೂ ಸಂಗಡಿಗರಿಂದ ಪ್ರತಿಷ್ಠಾಪನಾ ವಿಧಿವಿಧಾನಗಳು ನಡೆದವು. ಕಾರ್ಯಕ್ರಮದಲ್ಲಿ ಸಾಮೂಹಿಕ ಸತ್ಕರ್ಮಗಳಿಗಾಗಿ ಸಮುದಾಯ ಭವನಕ್ಕೆ ಭೂಮಿಪೂಜೆ ನಡೆಸಲಾಯಿತು. ದಾನಿಗಳನ್ನು ಸನ್ಮಾನಿಸಲಾಯಿತು.
ತಾಳಗುಪ್ಪದ ವಿದ್ವಾನ ಸಿದ್ಧವೀರ ಮಹಾಸ್ವಾಮಿಗಳು ಹಾಗೂ ಶಾಂತಪುರದ ಶಿವಾನಂದ ಶಿವಾಚಾರ್ಯರು ಸೇರಿದಂತೆ ದೇವಾಲಯ ಸಮಿತಿ ಸರ್ವ ಸದಸ್ಯರೂ ಹಾಗೂ ತೊರವಂದ ಗ್ರಾ.ಪಂ. ವ್ಯಾಪ್ತಿಯ ಸುತ್ತಮುತ್ತಲ ಗ್ರಾಮಸ್ಥರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ನಂತರ ಮಹಾಪ್ರಸಾದ ವಿತರಿಸಲಾಯಿತು.
- - - -೨೭ಕೆಪಿಸೊರಬ೦೧:
ಉಜ್ಜಿನೀಪುರದಲ್ಲಿ ನಡೆದ ಧರ್ಮಸಭೆಯನ್ನು ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು.