ಸಾರಾಂಶ
ಧಾರವಾಡ: ಯೋಗವು ವಿಶ್ವಕ್ಕೆ ಭಾರತ ನೀಡಿದ ಬಹು ದೊಡ್ಡ ಕೊಡುಗೆ. ಮನುಷ್ಯನ ದೇಹ ತಂಪು ಹಾಗೂ ದೇಶ ಶಾಂತವಾಗಿದ್ದರೆ ಇಡೀ ವಿಶ್ವದಲ್ಲಿ ಶಾಂತಿ ಇರುತ್ತದೆ. ಯೋಗ ಪದದ ಅರ್ಥ, ನಮ್ಮ ದೇಹ ಮತ್ತು ಮನಸ್ಸನ್ನು ಒಟ್ಟುಗೂಡಿಸುವುದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ಇಲ್ಲಿಯ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಶನಿವಾರ ಜಿಲ್ಲಾಡಳಿತವು ಆಯುಷ್ ಇಲಾಖೆ ಹಾಗೂ ವಿವಿಧ ಯೋಗ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.ಯೋಗ ಎಂದರೆ ಕೂಡುವುದು. ಎಲ್ಲರನ್ನು ಸೇರಿಸುವುದಾಗಿದೆ. ವಿಶ್ವದಲ್ಲಿ ಚದುರಿರುವ ಮನಸ್ಸುಗಳನ್ನು ಒಂದೆಡೆ ಸೇರಿಸುವ ಶಕ್ತಿ ಯೋಗಕ್ಕಿದೆ. ಈ ವರ್ಷ ಯೋಗ ದಿನಾಚರಣೆಗೆ "ಒಂದು ದೇಶ: ಒಂದು ಆರೋಗ್ಯ " ಎಂಬ ಘೋಷ ವಾಕ್ಯ ನೀಡಿದ್ದಾರೆ. ವಿಶ್ವದ ಶಾಂತಿ, ಸಮಾನತೆ, ಸಮಾಧಾನಕ್ಕಾಗಿ ಎಲ್ಲರೂ ಶ್ರಮಿಸುತ್ತಿದ್ದಾರೆ. ಪ್ರತಿಯೊಬ್ಬ ವ್ಯಕ್ತಿ ಅನುಭವಿಸುವ ಸಮಾಧಾನ, ನೆಮ್ಮದಿಯೂ ವಿಶ್ವದ ಸಮಾಧಾನವಾಗಿದೆ. ಯೋಗ ಸಾಧನೆಯು ಶಾಂತಿ, ನೆಮ್ಮದಿಯನ್ನು ನಮಗೆ ತಂದುಕೊಡುತ್ತದೆ. ಈ ಘೋಷ ವಾಕ್ಯದ ಉದ್ದೇಶ ಇಡೀ ಜಗತ್ತಿನಲ್ಲಿ, ಜಾಗತಿಕ ಮಟ್ಟದಲ್ಲಿ ಶಾಂತಿ, ನೆಮ್ಮದಿ ನೆಲಸಲಿ. ಎಲ್ಲರೂ ಪರಸ್ಪರ ಆರೋಗ್ಯದಿಂದ ಇರಲಿ ಎಂದು ಅರ್ಥೈಸುತ್ತದೆ ಎಂದರು.
ಮನುಷ್ಯ ಆರೋಗ್ಯದಿಂದ ಇರಲು, ಯೋಗ ಮಾಡುವ ಅಭ್ಯಾಸ ಮುಖ್ಯವಾಗಿದೆ. ಪ್ರತಿದಿನ ಯೋಗ ಮಾಡುವುದನ್ನು ನಮ್ಮ ಜೀವನ ಶೈಲಿಯಾಗಿ ರೂಡಿಸಿಕೊಳ್ಳಬೇಕು. ನಿರಂತರ ಯೋಗ ಆರೋಗ್ಯವನ್ನು ಹೆಚ್ಚಿಸುತ್ತದೆ. ಯೋಗ ನಮ್ಮ ಜೀವನ ಶೈಲಿ ಆಗಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.ಜಿಪಂ ಸಿಇಓ ಭುವನೇಶ ಪಾಟೀಲ, ಎಸ್ಪಿ ಡಾ. ಗೋಪಾಲ ಬ್ಯಾಕೋಡ, ಐಎಎಸ್ ಪ್ರೊಬೇಷನರಿ ಅಧಿಕಾರಿ ರಿತಿಕಾ ವರ್ಮಾ, ಜಿಪಂ ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಂಗಪ್ಪ ಗಾಬಿ, ಡಿಎಚ್ಓ ಡಾ. ಎಸ್.ಎಂ. ಹೊನಕೇರಿ, ಆಯುಷ್ ಅಧಿಕಾರಿ ಡಾ. ಗಣೇಶ ಕಬಾಡೆ ಇದ್ದರು. ಯೋಗ ಶಿಕ್ಷಕ ಜಗದೀಶ ಮಳಗಿ ಯೋಗಾಭ್ಯಾಸ ಮಾಡಿಸಿದರು.
ಡಿಡಿಪಿಐ ಎಸ್.ಎಸ್. ಕೆಳದಿಮಠ, ತಹಸೀಲ್ದಾರ್ ಡಾ. ಡಿ.ಎಚ್. ಹೂಗಾರ, ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಫ್. ಸಿದ್ದನಗೌಡರ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.