ಕಾರ್ಗಿಲ್ ಯುದ್ಧದಲ್ಲಿ ಪ್ರಾಣತ್ಯಾಗ ಮಾಡಿದ ಯೋಧರ ತ್ಯಾಗವನ್ನು ಯುವ ಪೀಳಿಗೆ ಅರ್ಥಮಾಡಿಕೊಳ್ಳಬೇಕು. ಸತ್ಪ್ರಜೆಗಳಾಗಿ ದೇಶ ಕಟ್ಟಿ ಸದೃಢ ಭಾರತ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ನಿವೃತ್ತ ಮೇಜರ್ ಕುಶ್ವಂತ್ ಕೋಳಿಬೈಲು ಕರೆ ನೀಡಿದರು.

ಮಡಿಕೇರಿ: ಕಾರ್ಗಿಲ್ ಯುದ್ಧದಲ್ಲಿ ಪ್ರಾಣತ್ಯಾಗ ಮಾಡಿದ ಯೋಧರ ತ್ಯಾಗವನ್ನು ಯುವ ಪೀಳಿಗೆ ಅರ್ಥಮಾಡಿಕೊಳ್ಳಬೇಕು. ಸತ್ಪ್ರಜೆಗಳಾಗಿ ದೇಶ ಕಟ್ಟಿ ಸದೃಢ ಭಾರತ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ನಿವೃತ್ತ ಮೇಜರ್ ಕುಶ್ವಂತ್ ಕೋಳಿಬೈಲು ಕರೆ ನೀಡಿದರು. ನಗರದ ಯುದ್ಧ ಸ್ಮಾರಕದಲ್ಲಿ ಭಜರಂಗ ದಳ ಹಾಗೂ ಹಿಂದೂ ಜಾಗರಣಾ ವೇದಿಕೆ ಆಯೋಜಿಸಿದ್ದ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಗಿಲ್‌ನಂತಹ ಕಠಿಣ ಪ್ರದೇಶದಲ್ಲಿ ಹೋರಾಡಿ ಶತ್ರುಮುಕ್ತಗೊಳಿಸಿದ ಯೋಧರ ಸಾಧನೆಯನ್ನು ಶಾಲಾ ಕಾಲೇಜುಗಳಲ್ಲಿ ಪಾಠ ಮಾಡಬೇಕು. ಕೊಡಗು ಯೋಧ ಪರಂಪರೆಯ ನಾಡಾಗಿದ್ದು, ಈ ಪರಂಪರೆಯನ್ನು ಮುಂದುವರಿಸುವ ಜವಾಬ್ದಾರಿ ಯುವಕರ ಮೇಲಿದೆ ಎಂದರು.

ದಿಕ್ಸೂಚಿ ಭಾಷಣ ಮಾಡಿದ ಸಾಮಾಜಿಕ ಕಾರ್ಯಕರ್ತ ಧನಂಜಯ ಅಗೋಳಿಕಜೆ ಮಾತನಾಡಿ, ಭಾರತೀಯ ಯೋಧರು ಜೀವ ಪಣಕ್ಕಿಟ್ಟು ಗಡಿ ಕಾಯುತ್ತಿದ್ದಾರೆ. ಅವರಿಂದಲೇ ನಾವು ನೆಮ್ಮದಿಯಾಗಿ ಬದುಕುತ್ತಿದ್ದೇವೆ. ಸೈನಿಕರ ತ್ಯಾಗವನ್ನು ನೆನೆದರೆ ಹೋರಾಟದ ನೆಪದಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡುವ, ದೇಶವಿರೋಧಿ ಘೋಷಣೆ ಕೂಗುವ ಮನಸ್ಸು ಬರುವುದಿಲ್ಲ. ಕಾರ್ಗಿಲ್‌ನಲ್ಲಿ 527 ಯೋಧರು ಹುತಾತ್ಮರಾಗಿದ್ದಾರೆ. ಅವರ ಸಾಧನೆಯನ್ನು ಶಾಲೆಗಳಲ್ಲಿ ಪಾಠ ಮಾಡಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಹಿಂದೂ ಜಾಗರಣಾ ವೇದಿಕೆ ಪ್ರಾಂತ ಸದಸ್ಯ ಕುಕ್ಕೇರ ಅಜಿತ್, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಪುದಿಯೊಕ್ಕಡ ರಮೇಶ್, ಭಜರಂಗದಳ ಜಿಲ್ಲಾ ಸಂಯೋಜಕ ವಿನಯ್, ನಗರಸಭಾ ಉಪಾಧ್ಯಕ್ಷ ಮಹೇಶ್ ಜೈನಿ, ಬಿಜೆಪಿ ನಗರಾಧ್ಯಕ್ಷ ಉಮೇಶ್ ಸುಬ್ರಮಣಿ, ಸಮಾಜ ಸೇವಕರಾದ ಪ್ರಸನ್ನ ಎಡಿಕೇರಿ ಸೇರಿದಂತೆ ನಿವೃತ್ತ ಯೋಧರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.