ಸಾರಾಂಶ
ಕನ್ನಡಪ್ರಭ ವಾರ್ತೆ, ಉಡುಪಿ
ಉಡುಪಿ ರಂಗಭೂಮಿ ಸಂಸ್ಥೆಯಯ 2025ರ ವಾರ್ಷಿಕ ಪ್ರಶಸ್ತಿಗೆ ಈ ಬಾರಿ ಹಿರಿಯ ವೈದ್ಯ, ಸಂಘಟಕ ಡಾ. ಭಾಸ್ಕರಾನಂದಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ.1965ರಲ್ಲಿ ಆರಂಭವಾದ ರಾಜ್ಯದ ಹಿರಿಯ ಹವ್ಯಾಸಿ ನಾಟಕ ಹಾಗೂ ಸಾಂಸ್ಕೃತಿಕ ಸಂಸ್ಥೆಯಾದ ರಂಗಭೂಮಿ (ರಿ.) ಉಡುಪಿ ಸಂಸ್ಥೆ 1967ರಿಂದ, ವಿವಿಧ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆಯನ್ನು ಮಾಡಿದ ಹಲವಾರು ಗಣ್ಯರಿಗೆ ಬಿರುದಿನೊಂದಿಗೆ ಗೌರವಿಸುತ್ತಾ ಬಂದಿದೆ.
ಖ್ಯಾತ ವೈದ್ಯರು, ನಾಟಕಕಾರರು ಹಾಗೂ ಯಕ್ಷಗಾನ ಮತ್ತು ನಾಟಕ ರಂಗದ ಹಿರಿಯ ಕಲಾವಿದರು, ಸಂಘಟಕರಾದ ಡಾ. ಭಾಸ್ಕರಾನಂದಕುಮಾರ್ ಅವರನ್ನು ಈ ಬಾರಿ ‘ರಂಗಭೂಮಿ ಪ್ರಶಸ್ತಿ 2025’ ನೀಡಿ ಗೌರವಿಸಲಾಗುವುದು.ಫೆ. 2 ರಂದು ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯುವ ಈ ಸಮಾರಂಭದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಹೆಯ ಸಹಕುಲಾಧಿಪತಿ ಡಾ. ಎಚ್ .ಎಸ್. ಬಲ್ಲಾಳ್, ಮಂಗಳೂರಿನ ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಎಂ.ಬಿ. ಪುರಾಣಿಕ್, ಉಡುಪಿಯ ಯಕ್ಷಗಾನ ಕೇಂದ್ರದ ಸಲಹಾ ಸಮಿತಿಯ ಅಧ್ಯಕ್ಷ ಪಳ್ಳಿ ಕಿಶನ್ ಹೆಗ್ಡೆ, ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ್, ಉಡುಪಿ ಕೋ-ಆಪರೇಟಿವ್ ಟೌನ್ ಬ್ಯಾಂಕ್ ಅಧ್ಯಕ್ಷ ಹೆಚ್. ಜಯಪ್ರಕಾಶ್ ಕೆದ್ಲಾಯ ಮತ್ತು ಇನ್ನೂ ಹಲವಾರು ಗಣ್ಯರ ಸಮಕ್ಷಮದಲ್ಲಿ ಸನ್ಮಾನಿಸಲಾಗುವುದು ಎಂದು ರಂಗಭೂಮಿ ಉಡುಪಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.