ವಿವಿಧ ಹಂತಗಳಲ್ಲಿ ರಂಗಭೂಮಿ ವಿಕಸನ: ಡಾ. ಲಕ್ಷ್ಮಣದಾಸ್

| Published : Oct 22 2025, 01:03 AM IST

ಸಾರಾಂಶ

ಇದು ಸಾಮಾಜಿಕ ಸಂದೇಶಗಳನ್ನು ನೀಡುವಲ್ಲಿ, ಕಲೆ ಮತ್ತು ಮನರಂಜನೆಯನ್ನು ಪ್ರರ್ಶಿೀಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಕನ್ನಡಪ್ರಭ ವಾರ್ತೆ ತುಮಕೂರುರಂಗಭೂಮಿ ಬೆಳವಣಿಗೆ ಪ್ರಾಚೀನ ಗ್ರೀಸ್‌ನಿಂದ ಆರಂಭವಾಗಿ, ಜಾನಪದ ಮತ್ತು ವೃತ್ತಿಪರ ರಂಗಭೂಮಿಯ ಮೂಲಕ ವಿವಿಧ ಹಂತಗಳಲ್ಲಿ ವಿಕಸನಗೊಂಡಿದೆ ಎಂದು ಕಥಾ ಕೀರ್ತನಕಾರ ಡಾ. ಲಕ್ಷ್ಮಣದಾಸ್ ಅಭಿಪ್ರಾಯಪಟ್ಟರುಅವರು ಕರ್ನಾಟಕ ನಾಟಕ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಝೆನ್ ಟೀಮ್ ಸಹಯೋಗದಲ್ಲಿ ತುಮಕೂರಿನ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಜಿಲ್ಲಾ ನಾಟಕೋತ್ಸವದ ಅಂಗವಾಗಿ ನೀನಾಸಂ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.ಇದು ಸಾಮಾಜಿಕ ಸಂದೇಶಗಳನ್ನು ನೀಡುವಲ್ಲಿ, ಕಲೆ ಮತ್ತು ಮನರಂಜನೆಯನ್ನು ಪ್ರರ್ಶಿೀಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇಂದು ರಂಗಭೂಮಿಯು ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ವಿಕಸನಗೊಳ್ಳುತ್ತಿದ್ದು, ಯುವಜನರ ಪ್ರವೇಶದಿಂದಾಗಿ ಹೊಸ ರೂಪ ಪಡೆಯುತ್ತಿದೆ ಎಂದರು.ಪ್ರಾಚೀನ ರಂಗಭೂಮಿ, ಜಾನಪದ, ವೃತ್ತಿಪರ ರಂಗಭೂಮಿ, ಹವ್ಯಾಸಿ ರಂಗಭೂಮಿ, ಸಂಗೀತ ನಾಟಕ ಮಂಡಳಿ ಹಾಗೂ ಸಮಕಾಲೀನ ರಂಗಭೂಮಿಯವರೆಗೂ ಹಲವಾರು ವಿಕಸನ ಹಂತ ತಲುಪಿದೆ ಎಂದರು.ತುಮಕೂರಿನಲ್ಲಿ ನಾಟಕ ಅಕಾಡೆಮಿ, ಝೆನ್ ಟೀಮ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆಯುತ್ತಿರುವ ನಾಟಕ ಉತ್ತಮ ಸಂದೇಶ ನೀಡುವಲ್ಲಿ ಯಶಸ್ವಿಯಾಗಿದೆ. ಪೌರಾಣಿಕ ರಂಗಭೂಮಿಗೆ ತುಮಕೂರು ತನ್ನದೇ ಕೊಡುಗೆ ನೀಡಿದೆ. ಜೊತೆ ಜೊತೆಯಲ್ಲಿ ಪ್ರಯೋಗಾತ್ಮಕ ನಾಟಕಗಳು ಕೂಡ ಸಾಕಷ್ಟು ನಡೆಯುತ್ತಿರುವುದು ಉತ್ತಮ ಬೆಳವಣಿಗೆ ಎಂದರು.ಹೊಸ ಕಾಲದ ನಿರ್ದೇಶಕರು ವಿಭಿನ್ನ ಕಥಾ ವಸ್ತುಗಳ ಮೂಲಕ ಸಮಕಾಲೀನ ಸಮಸ್ಯೆಗಳಿಗೆ ರಂಗಭೂಮಿ ಮೂಲಕ ಸ್ಪಂದನೆ ನೀಡುತ್ತಿರುವುದು ವಿಶೇಷ. ಹಲವಾರು ವಿಭಿನ್ನ ಪ್ರಯೋಗಗಳಿಗೆ ತುಮಕೂರು ಸಾಕ್ಷಿಯಾಗಿದ್ದು ಹೊಸ ಹೊಸ ತಂಡಗಳು ಬರುತ್ತಿರುವುದು ಸ್ವಾಗತಾರ್ಹ ಎಂದರು.ಈಗಾಗಲೇ ಕರ್ನಾಟಕ ನಾಟಕ ಅಕಾಡೆಮಿ ಜಿಲ್ಲೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಹಲವಾರು ರಚನಾತ್ಮಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಈಗಾಗಲೇ ಗುಬ್ಬಿಯಲ್ಲಿ ನರಸಿಂಹರಾಜು ನಾಟಕೋತ್ಸವ, ಸಿದ್ಧಗಂಗಾ ಮಠದಲ್ಲಿ ಶರಣ ನಾಟಕೋತ್ಸವ ಆಯೋಜಿಸಿದೆ. ಅಲ್ಲದೇ ಮೊರಾರ್ಜಿ ಶಾಲೆ ಮಕ್ಕಳಿಗೆ ರಂಗ ಶಿಬಿರ ನಡೆಸಿದೆ. ಈಗ ತುಮಕೂರಿನಲ್ಲಿ ಝೆನ್ ಟೀಮ್, ಕರ್ನಾಟಕ ನಾಟಕ ಅಕಾಡೆಮಿ ಸಹಯೋಗದೊಂದಿಗೆ ಜಿಲ್ಲಾ ನಾಟಕೋತ್ಸವ ಆಯೋಜಿಸುತ್ತಿದೆ ಎಂದರು.ತುಮಕೂರಿನಲ್ಲಿ ರಾಷ್ಟ್ರೀಯ ನಾಟಕ ಶಾಲೆ, ನೀನಾಸಂ, ಸಾಣೆಹಳ್ಳಿ ಶಿವಸಂಚಾರ, ಆಟಮಾಟ ಸೇರಿದಂತೆ ಹತ್ತು ಹಲವಾರು ರಂಗ ತಂಡಗಳನ್ನು ಕರೆಸಿ ನಾಟಕ ಪ್ರದರ್ಶಿಸಲಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ ಮಾತನಾಡಿ, ತುಮಕೂರಿನಲ್ಲಿ ಹಲವಾರು ವರ್ಷಗಳಿಂದ ನೀನಾಸಂ ನಾಟಕಗಳನ್ನು ಪ್ರದರ್ಶಿಸಲಾಗುತ್ತಿದೆ. ಕರ್ನಾಟಕ ನಾಟಕ ಅಕಾಡೆಮಿ ವತಿಯಿಂದ ಝೆನ್ ಟೀಮ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ವಿಭಿನ್ನ ಕಥಾವಸ್ತುವುಳ್ಳ ನಾಟಕಗಳನ್ನು ಪ್ರದರ್ಶಿಸುತ್ತಿರುವುದು ಸ್ವಾಗತಾರ್ಹ ಎಂದರು.ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ರವೀಂದ್ರ ಸಿರಿವರ ಮಾತನಾಡಿ ಕರ್ನಾಟಕ ನಾಟಕ ಅಕಾಡೆಮಿ ನಿರಂತರವಾಗಿ ರಂಗಭೂಮಿ ಕಟ್ಟುವ ಕೆಲಸ ಮಾಡುತ್ತಿದೆ. ಈಗಾಗಲೇ ವಿಭಾಗೀಯ ನಾಟಕಗಳು, ಜಿಲ್ಲಾ ನಾಟಕೋತ್ಸವಗಳು, ರಂಗ ಶಿಬಿರಗಳು, ಕಾಲೇಜು ರಂಗೋತ್ಸವಗಳನ್ನು ಯಶಸ್ವಿಯಾಗಿ ಮಾಡಿಕೊಂಡು ಬಂದಿದೆ. ಅಲ್ಲದೇ ಕಳೆದ ವರ್ಷ ರಾಷ್ಟ್ರೀಯ ನಾಟಕಗಳನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು. ಮುಂಬರುವ ಫೆಬ್ರವರಿ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ರಾಷ್ಟ್ರೀಯ ನಾಟಕೋತ್ಸವ ಮಾಡಲಾಗುವುದು ಎಂದರು.ವೇದಿಕೆಯಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾದ ಉಗಮ ಶ್ರೀನಿವಾಸ್, ಮಮತಾ ಅರಸೀಕೆರೆ ಇದ್ದರು. ವೇದಿಕೆ ಕಾರ್ಯಕ್ರಮದ ಬಳಿಕ ಬಾನು ಮುಷ್ತಾಕ್ ಅವರ ಸಣ್ಣ ಕಥೆಯನ್ನಾಧರಿಸಿದ ಹೃದಯ ತೀರ್ಪು ನಾಟಕ ಪ್ರದರ್ಶಿಸಲಾಯಿತು.