ಸಾರಾಂಶ
ದಾಬಸ್ಪೇಟೆ: ದಾಬಸ್ಪೇಟೆ ಪಟ್ಟಣದಲ್ಲಿ ಮನೆ ಹಾಗೂ ಅಂಗಡಿ ಸೇರಿ ತ್ಯಾಮಗೊಂಡ್ಲು ಹೋಬಳಿಯ ದೇವಾಲಯದಲ್ಲಿ ಕಳ್ಳರು ದರೋಡೆ ಮಾಡಿ ಪರಾರಿಯಾಗಿದ್ದಾರೆ.
ಮನೆಯಲ್ಲಿ ಕಳ್ಳತನ:ದಾಬಸ್ಪೇಟೆ ಪಟ್ಟಣದ ಹೊನ್ನಮ್ಮ ಲೇ ಔಟ್ ನಲ್ಲಿ ವಾಸವಾಗಿರುವ ದೇವರಾಜು ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ಬಾಗಿಲನ್ನು ಕಬ್ಬಿಣ ರಾಡಿನಿಂದ ಮೀಟಿ, ಮನೆಯ ರೂಮಿನ ಬೀರುವಿನಲ್ಲಿಟ್ಟಿದ್ದ ಎರಡು ನೆಕ್ಲೇಸ್, 50 ಗ್ರಾಂ ಕಿವಿ ಓಲೆ, 10 ಗ್ರಾಂನ ಒಂದು ಜೊತೆ ಚಿನ್ನದ ಬಳೆ, 30 ಗ್ರಾಂನ ಉಂಗುರ, 5 ಗ್ರಾಂನ ಮಕ್ಕಳ ಉಂಗುರ, 2.5 ಗ್ರಾಂನ ಬ್ರಾಸ್ಲೇಟ್, 11 ಗ್ರಾಂನ ಕತ್ತಿನಸರ, 7 ಗ್ರಾಂನ ಸುಮಾರು 125 ಗ್ರಾಂ ಚಿನ್ನದ ಒಡವೆಗಳು ಸೇರಿ 10000 ನಗದು ಹಣ, 13000 ಬೆಲೆ ಬಾಳುವ ಮೊಬೈಲ್ ನ್ನೂ ಕದ್ದು ಪರಾರಿಯಾಗಿದ್ದಾರೆ.
ಅಂಗಡಿಯಲ್ಲಿ ಕಳ್ಳತನ:ಪಟ್ಟಣದ ಶಿವಗಂಗೆ ವೃತ್ತದಲ್ಲಿರುವ ಪ್ರಾವೀಜನ್ ಸ್ಟೋರ್ ನ ಬೀಗ ಒಡೆದು ಒಳನುಗ್ಗಿರುವ ಕಳ್ಳರು, ಅಂಗಡಿಯಲ್ಲಿದ್ದ ಸಿಗರೇಟ್, ದ್ರಾಕ್ಷಿ, ಗೋಡಂಬಿ ಸೇರಿ ದಿನಸಿ ಪದಾರ್ಥಗಳನ್ನು ಕದ್ದು ಪರಾರಿಯಾಗಿದ್ದಾರೆ.
ದೇಗುಲಕ್ಕೆ ನುಗ್ಗಿ ನಗದು ಕಳವು:ತ್ಯಾಮಗೊಂಡ್ಲು ಹೋಬಳಿಯ ಬಿದಲೂರು ಗ್ರಾಮದಲ್ಲಿರುವ ಗಂಗಮ್ಮ ದೇವಿ ದೇವಾಲಯಕ್ಕೆ ನುಗ್ಗಿರುವ ಮೂವರು ಕಳ್ಳರು, ದೇಗುಲದ ಹುಂಡಿ ಒಡೆದು ಸುಮಾರು 1.20 ಲಕ್ಷ ರು. ನಗದು, ದೇವಿಗೆ ಧರಿಸಿದ್ದ 4.5 ಗ್ರಾಂ ಚಿನ್ನ ತಾಳಿಯನ್ನು ಕದ್ದು ಪರಾರಿಯಾಗಿದ್ದಾರೆ. ಕೆಲವು ಮನೆಗಳ ಬಳಿ ಓಡಾಡಿ ನಂತರ ಗಂಗಮ್ಮನ ದೇವಾಲಯದ ಬಾಗಿಲ ಬೀಗ ಮುರಿದು ಒಳ ನುಗ್ಗಿ, ಕಳ್ಳತನ ಮಾಡಿದ್ದಾರೆ. ಈ ದೇವಾಲಯದಲ್ಲಿ 4-5 ವರ್ಷಗಳಿಂದ ಐದು ಬಾರಿ ಹುಂಡಿ ಕಳ್ಳತನವಾಗಿದೆ. ಕಳ್ಳತನಕ್ಕೆ ಸಂಬಂಧಿಸಿ ದಾಬಸ್ಪೇಟೆ ಹಾಗೂ ತ್ಯಾಮಗೊಂಡ್ಲು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.