ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿವೆ: ಡಾ. ಶರಣಬಸಪ್ಪ ಕೋಲ್ಕಾರ

| Published : Sep 29 2024, 01:49 AM IST

ಸಾರಾಂಶ

ಜಿಲ್ಲೆಯಲ್ಲಿ ಪ್ರಾಗೈತಿಕ ಇತಿಹಾಸದಿಂದ ಹಿಡಿದು, ಪುರಾಣಕಾಲದ ಚರಿತ್ರೆ, ಸ್ಥಳ ಪುರಾಣದಂತಹ ಮಹತ್ವದ ಹಿನ್ನೆಲೆ ಹೊಂದಿರುವ ಅನೇಕ ಸ್ಥಳಗಳು ಜಿಲ್ಲೆಯಲ್ಲಿವೆ.

ಚಾರಣದ ಮೂಲಕ ಪ್ರವಾಸಿ ಜಾಗೃತಿ ಕಾರ್ಯಕ್ರಮದಲ್ಲಿ ಸಂಶೋಧಕ

ಕನ್ನಡಪ್ರಭ ವಾರ್ತೆ ಕೊಪ್ಪಳ

ಜಿಲ್ಲೆಯಲ್ಲಿ ಪ್ರಾಗೈತಿಕ ಇತಿಹಾಸದಿಂದ ಹಿಡಿದು, ಪುರಾಣಕಾಲದ ಚರಿತ್ರೆ, ಸ್ಥಳ ಪುರಾಣದಂತಹ ಮಹತ್ವದ ಹಿನ್ನೆಲೆ ಹೊಂದಿರುವ ಅನೇಕ ಸ್ಥಳಗಳು ಜಿಲ್ಲೆಯಲ್ಲಿವೆ. ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳು ಇಲ್ಲಿವೆ ಎಂದು ಸಂಶೋಧಕ ಡಾ. ಶರಣಪ್ಪ ಕೋಲ್ಕಾರ ಹೇಳಿದ್ದಾರೆ.

ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಕೊಪ್ಪಳ ಚಾರಣದ ಬಳಗ, ಗಂಗಾವತಿ ಕಿಷ್ಕಂದ ಯುವ ಚಾರಣ ಬಳಗ, ಪರಿಸರ ಸೇವಾ ಟ್ರಸ್ಟ್ ಗಂಗಾವತಿ ಹಾಗೂ ಗಂಗಾವತಿ ಚಾರಣ ಬಳಗ ಇವುಗಳ ಸಹಯೋಗದೊಂದಿಗೆ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ಪ್ರವಾಸೋದ್ಯಮ ಮತ್ತು ಶಾಂತಿ ಸಂದೇಶದಡಿಯಲ್ಲಿ ನಗರದ ಶ್ರೀ ಮಳೆಮಲ್ಲೇಶ್ವರ ದೇವಸ್ಥಾನದ ಬೆಟ್ಟದ ಮೇಲಿರುವ ಪ್ರಾಚೀನ ದಿನ್ನೆ ಮತ್ತು ಕಮಲ ಸರೋವರದಿಂದ ಗವಿಮಠ ಪರಿಸರದ ಅಶೋಕನ ಶಿಲಾಶಾಸನವರೆಗೆ ಚಾರಣದ ಮೂಲಕ ಪ್ರವಾಸಿ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರವಾಸೋದ್ಯಮವು ಇಂದು ಉದ್ಯಮವಾಗಿ ಬೆಳವಣಿಗೆ ಸಾಧಿಸಿದೆ. ದೇಶದ ತಲಾ ಆದಾಯಕ್ಕೆ ಪ್ರವಾಸೋದ್ಯಮದ ಕೊಡುಗೆ ಗಮನಾರ್ಹವಾಗಿದೆ. ಕೆಲವು ದೇಶಗಳಿಗೆ ಪ್ರವಾಸೊದ್ಯಮವೇ ರಾಷ್ಟ್ರೀಯ ಆದಾಯವಾಗಿದೆ. ಈ ಹಿನ್ನೆಲೆ ಭವ್ಯಪರಂಪರೆಯ ತಾಣವಾದ ಭಾರತ ದೇಶದಲ್ಲಿ ಪ್ರವಾಸೋದ್ಯಮದ ಬೆಳವಣಿಗೆಗೆ ವಿಫುಲ ಅವಕಾಶಗಳಿವೆ. ಅದರಂತೆ ಬಹುಪ್ರಾಚೀನ ಇತಿಹಾಸ ಹಾಗೂ ಪರಂಪರೆಯ ನೆಲೆವೀಡಾದ ಕೊಪ್ಪಳ ಪ್ರವಾಸೋದ್ಯಮದ ಬೆಳವಣಿಗೆಗೆ ಭರವಸೆದಾಯಕ ಜಿಲ್ಲೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ವಿಶ್ವ ಪ್ರವಾಸೋದ್ಯಮ ದಿನವನ್ನು ಮೊದಲ ಬಾರಿಗೆ 1980ರಲ್ಲಿ ಆಚರಿಸಲಾಯಿತು. ಸೆ. 27ರಂದು ಈ ದಿನವನ್ನು ಆಚರಿಸಲು ಕಾರಣ 1970 ಲ್ಲಿ ವಿಶ್ವಸಂಸ್ಥೆಯ ಪ್ರವಾಸೋದ್ಯಮ ಸಂಸ್ಥೆಯು ಶಾಸನಗಳನ್ನು ಈ ದಿನದಂದು ಅಂಗೀಕರಿಸಲಾಯಿತು. ಈ ನೆನಪಿಗಾಗಿ ಪ್ರತಿವರ್ಷ ಸೆ. 27 ರಂದು ವಿಶ್ವ ಪ್ರವಾಸೋದ್ಯಮ ದಿನ ಆಚರಿಸಲಾಗುತ್ತದೆ ಎಂದು ಹೇಳಿದರು.

ಬಳಿಕ ಸಂಶೊಧಕರು ಗವಿಮಠ ಪರಿಸರದ ಅಶೋಕನ ಶಿಲಾಶಾಸನ ಹಾಗೂ ಶ್ರೀ ಮಳೆಮಲ್ಲೇಶ್ವರ ದೇವಸ್ಥಾನದ ಬೆಟ್ಟದ ಮೇಲಿರುವ ಪ್ರಾಚೀನದಿನ್ನೆ ಮತ್ತು ಕಮಲ ಸರೋವರದ ಬಗ್ಗೆ ವಿಶೇಷ ಉಪನ್ಯಾಸ ನೀಡಿ, ಈ ವರ್ಷ ಪ್ರವಾಸ ಮತ್ತು ಶಾಂತಿ ಎಂಬ ಧ್ಯೇಯದ ಅಡಿಯಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲಾಗುತ್ತಿದೆ. ಜಾಗತಿಕ ಸಂಘರ್ಷಕ್ಕೆ ದೇಶ, ಭಾಷೆಗಳ ಗಡಿ ಮೀರಿದ ಪ್ರವಾಸಿ ಚಟುವಟಿಕೆ ಶಾಂತಿಯನ್ನು ಮೂಡಿಸಲು ನೆರವಾಗುತ್ತಿದೆ ಎಂದು ಅವರು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿದೇರ್ಶಕ ಡಿ. ನಾಗರಾಜ ಇಲಾಖೆಯ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಸಿದರು.

ಚಾರಣದ ಮೂಲಕ ವೀಕ್ಷಣೆ:ಗವಿಮಠ ಪರಿಸರದ ಅಶೋಕನ ಶಿಲಾಶಾಸನ ಹಾಗೂ ಶ್ರೀ ಮಳೆಮಲ್ಲೇಶ್ವರ ದೇವಸ್ಥಾನದ ಬೆಟ್ಟದ ಮೇಲಿರುವ ಪ್ರಾಚೀನದಿನ್ನೆ ಮತ್ತು ಕಮಲ ಸರೋವರವನ್ನು ಚಾರಣದ ಮೂಲಕ ವೀಕ್ಷಿಸಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ಮೊರಬನಹಳ್ಳಿ, ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಕೃಷ್ಣಮೂರ್ತಿ ದೇಸಾಯಿ, ಉಪನ್ಯಾಸಕ ಡಾ. ಸಿದ್ದಲಿಂಗಪ್ಪ ಕೊಟ್ನೆಕಲ್, ಗಂಗಾವತಿ ಚಾರಣ ಬಳಗದ ಡಾ. ಶಿವಕುಮಾರ ಮಾಲೀಪಾಟೀಲ್, ಕೊಪ್ಪಳ ಚಾರಣ ಬಳಗದ ಡಾ. ಸುಂಕದ, ಗಂಗಾವತಿ ಕಿಷ್ಕಂದ ಯುವ ಚಾರಣ ಬಳಗದ ಅರ್ಜುನ್ ಹಾಗೂ ಸದಸ್ಯರು, ಪರಿಸರ ಸೇವಾ ಟ್ರಸ್ಟ್ ಗಂಗಾವತಿಯ ಮಂಜುನಾಥ ಗುಡ್ಲಾನೂರ, ಶ್ರೀ ಮಳೆಮಲ್ಲೇಶ್ವರ ದೇವಸ್ಥಾನದ ಸಮಿತಿಯ ಅಧ್ಯಕ್ಷ ಗವಿಸಿದ್ದಯ್ಯ ಪ್ರವಾಸೋದ್ಯಮ ಇಲಾಖೆಯ ಸಿಬ್ಬಂದಿ ಸೇರಿದಂತೆ ಪ್ರವಾಸಿ ಮಾರ್ಗದರ್ಶಿಗಳು ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.