ಸಾರಾಂಶ
ಮಠಕ್ಕೆ ಬರುವಾಗ ನಾವು ನಮ್ಮ ಪ್ರಾಪಂಚಿಕ ವ್ಯವಹಾರಗಳನ್ನು ಮನೆಯಲ್ಲಿಯೆ ಬಿಟ್ಟು ಬರಬೇಕು
ನರೇಗಲ್ಲ: ಈ ಜಗತ್ತಿನ ಗೂಢವನ್ನು ಅರ್ಥ ಮಾಡಿಕೊಳ್ಳು ಮನುಷ್ಯನಿಗೆ ಇನ್ನೂ ಸಾಧ್ಯವಾಗಿಲ್ಲ. ಎಂದಿಗೆ ಸಾಧ್ಯವಾಗುತ್ತದೆ ಅದು ಗೊತ್ತಿಲ್ಲ. ಆದರೂ ನಾವು ನನಗೆಲ್ಲ ಗೊತ್ತು, ನಾನು ಬಹಳಷ್ಟು ತಿಳಿದುಕೊಂಡಿದ್ದೇನೆ ಎಂದು ಹಾರಾಡುತ್ತೇವೆ. ಈ ಜಗತ್ತಿನಲ್ಲಿ ಎಲ್ಲವನ್ನೂ ತಿಳಿದವರು ಬಹಳಷ್ಟಿಲ್ಲ ಎಂದು ಹಾಲಕರೆಯೆ ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.
ಸಮೀಪದ ಕೋಡಿಕೊಪ್ಪದ ಶ್ರೀ ವೀರಪ್ಪಜ್ಜನವರ ಪುಣ್ಯಾರಾಧನೆ ಶತಮಾನೋತ್ಸವದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಮಠಕ್ಕೆ ಬರುವಾಗ ನಾವು ನಮ್ಮ ಪ್ರಾಪಂಚಿಕ ವ್ಯವಹಾರಗಳನ್ನು ಮನೆಯಲ್ಲಿಯೆ ಬಿಟ್ಟು ಬರಬೇಕು. ಧ್ಯಾನಾಸಕ್ತರಾಗಿ ಕುಳಿತು ಭಗವಂತನ ಸ್ಮರಣೆ ಮಾಡಬೇಕು. ಅದರಲ್ಲೂ ವೀರಪ್ಪಜ್ಜನವರಂತಹ ಹಠಯೋಗಿಯ ಮಠಕ್ಕೆ ಬಂದಾಗ ನಮ್ಮ ಮೈ ಮನಸ್ಸುಗಳೆರಡು ಅಜ್ಜನವರ ಕಡೆಯೆ ಕೇಂದ್ರೀಕೃತವಾಗಿರಬೇಕು. ಲೌಕಿಕದ ಭವಬಂಧನಗಳನ್ನು ಮೀರಿದಾಗ ಮಾತ್ರ ನಾವು ಅಧ್ಯಾತ್ಮದಲ್ಲಿ ಏನಾದರೂ ಸಾಧಿಸಲು ಸಾಧ್ಯ ಎಂದರು.ಭೈರನಹಟ್ಟಿಯ ಶಾಂತಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ಬಾಲ್ಯದ ದಿನಗಳಿಂದಲೂ ತಮಗೂ ವೀರಪ್ಪಜ್ಜನವರ ಮಠಕ್ಕೂ ಇರುವ ಅವಿನಾಭಾವ ಸಂಬಂಧವನ್ನು ನೆನೆಸಿಕೊಂಡರು. ವೀರಪ್ಪಜ್ಜನವರಂತಹ ಮಹಾಮಹಿಮ ಈ ಕ್ಷೇತ್ರದಲ್ಲಿ ಅಭೂತಪೂರ್ವವಾದ ಸಾಧನೆಯನ್ನೇ ಮಾಡಿದ್ದಾರೆ ಎಂದರು.
ಅಬ್ಬಿಗೇರಿಯ ಶ್ರೀ ವೀರಭದ್ರ ಶಿವಾಚಾರ್ಯರು ಮಾತನಾಡಿ, ಅಜ್ಜನವರ ಜಾತ್ರೆಯ ಸೊಗಸನ್ನು ಸವಿದವರಿಗಷ್ಟೆ ಅಜ್ಜನವರ ಲೀಲಾ ಮಹಿಮೆ ಎಂತಹುದು ಎಂಬುದು ಗೊತ್ತು. ಅಜ್ಜನ ಆಶೀರ್ವಾದ ದೊರೆತರೆ ಜೀವನದಲ್ಲಿ ಉನ್ನತಿ ಸಾಧ್ಯ ಎಂದರು.ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಶ್ರೀ ವೀರಪ್ಪಜ್ಜನವರ ಬಗ್ಗೆ ಇನ್ನೂ ಸಂಶೋಧನೆ ನಡೆಯಬೇಕು. ಇನ್ನೂ ಹೆಚ್ಚಿನ ಮಾಹಿತಿಯನ್ನು ನೀಡಲು ಸಂಶೋಧಕರು ಮುಂದಾಗಬೇಕು. ಶ್ರೀ ವೀರಪ್ಪಜ್ಜನವರನ್ನು ಇನ್ನಷ್ಟು ತಿಳಿಯಲು ಇಲ್ಲೊಂದು ಸಂಶೋಧನಾ ಕೇಂದ್ರವಾಗಬೇಕು ಎಂದರು.
ಚಂದನ ಶಾಲೆಯ ಅಧ್ಯಕ್ಷ ಟಿ. ಈಶ್ವರ ಮಾತನಾಡಿದರು. ಪಪಂ ಅಧ್ಯಕ್ಷ ಫಕೀರಪ್ಪ ಮಳ್ಳಿ, ಟ್ರಸ್ಟ್ ಕಮಿಟಿ ಅಧ್ಯಕ್ಷ ಡಾ. ಎಂ.ಸಿ. ಚಪ್ಪನ್ನಮಠ, ಡಾ. ಕೆ.ಬಿ. ಧನ್ನೂರ ಉಪಸ್ಥಿತರಿದ್ದರು. ಡಾ. ವಿಶ್ವನಾಥ ಸ್ವಾಮೀಜಿ ಅವರು, ಶ್ರೀ ವೀರಪ್ಪಜ್ಜನವರ ಅನೇಕ ಲೀಲೆಗಳನ್ನು ಜೀವನ ದರ್ಶನ ಪ್ರವಚನದಲ್ಲಿ ಹೇಳಿದರು. ಗಾಯಕಿ ರಾಜಶ್ರೀ ಅರುಣ ಕುಲಕರ್ಣಿ ಪ್ರಾರ್ಥಿಸಿದರು. ಶಿವನಗೌಡ ಪಾಟೀಲ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಸಂಗಮೇಶ ಹೂಲಗೇರಿ ಹಾಗೂ ಡಾ. ಕಲ್ಲಯ್ಯ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು.