ಘೋಷಣೆ ಬೆಟ್ಟದಷ್ಟು, ಈಡೇರಿದ್ದು ಬೆರಳೆಣಿಕೆಯಷ್ಟು

| Published : Mar 06 2025, 12:30 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ವಿಜಯಪುರ ಜಿಲ್ಲೆಗೆ ಘೋಷಣೆಯಾಗಿದ್ದ ಹಲವು ಯೋಜನೆಗಳು ಕೇವಲ ಕಡತಕ್ಕಷ್ಟೇ ಸೀಮಿತ ಎಂಬಂತಾಗಿವೆ. ಅವುಗಳಲ್ಲಿ ಕಳೆದ ಬಜೆಟ್‌ನಲ್ಲಿ ಹೊಸ ಯೋಜನೆಗಳು, ಹಳೆಯ ಯೋಜನೆಗಳ ಪೂರ್ಣಗೊಳಿಸುವಿಕೆ ಸೇರಿದಂತೆ ಜಿಲ್ಲೆಗೆ ಹತ್ತಾರು ಯೋಜನೆಗಳನ್ನು ಘೋಷಿಸಲಾಗಿತ್ತು. ಘೋಷಣೆಯಾದ ಬೆಟ್ಟದಷ್ಟು ಯೋಜನೆಗಳಲ್ಲಿ ಈಡೇರಿದ್ದು ಮಾತ್ರ ಬೆರಳೆಣಿಕೆಯಷ್ಟು. ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಅಭಿವೃದ್ಧಿಯ ಯೋಜನೆಗಳೇ ಕುಸಿತ ಕಂಡಿವೆ. ಘೋಷಣೆಯಾಗಿದ್ದ ಸಾಕಷ್ಟು ಯೋಜನೆಗಳಿಗೆ ಸಮರ್ಪಕ ಅನುದಾನ ಬಾರದ್ದರಿಂದ ಬಹುತೇಕ ಯೋಜನೆಗಳು ಕಡತದಲ್ಲೇ ಉಳಿದುಕೊಂಡಿವೆ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

ವಿಜಯಪುರ ಜಿಲ್ಲೆಗೆ ಘೋಷಣೆಯಾಗಿದ್ದ ಹಲವು ಯೋಜನೆಗಳು ಕೇವಲ ಕಡತಕ್ಕಷ್ಟೇ ಸೀಮಿತ ಎಂಬಂತಾಗಿವೆ. ಅವುಗಳಲ್ಲಿ ಕಳೆದ ಬಜೆಟ್‌ನಲ್ಲಿ ಹೊಸ ಯೋಜನೆಗಳು, ಹಳೆಯ ಯೋಜನೆಗಳ ಪೂರ್ಣಗೊಳಿಸುವಿಕೆ ಸೇರಿದಂತೆ ಜಿಲ್ಲೆಗೆ ಹತ್ತಾರು ಯೋಜನೆಗಳನ್ನು ಘೋಷಿಸಲಾಗಿತ್ತು. ಘೋಷಣೆಯಾದ ಬೆಟ್ಟದಷ್ಟು ಯೋಜನೆಗಳಲ್ಲಿ ಈಡೇರಿದ್ದು ಮಾತ್ರ ಬೆರಳೆಣಿಕೆಯಷ್ಟು. ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಅಭಿವೃದ್ಧಿಯ ಯೋಜನೆಗಳೇ ಕುಸಿತ ಕಂಡಿವೆ. ಘೋಷಣೆಯಾಗಿದ್ದ ಸಾಕಷ್ಟು ಯೋಜನೆಗಳಿಗೆ ಸಮರ್ಪಕ ಅನುದಾನ ಬಾರದ್ದರಿಂದ ಬಹುತೇಕ ಯೋಜನೆಗಳು ಕಡತದಲ್ಲೇ ಉಳಿದುಕೊಂಡಿವೆ.

2024ರ ಬೆಜೆಟ್‌ನಲ್ಲಿ ಘೋಷಣೆ, ಅವುಗಳ ಕಾರ್ಯರೂಪ:ತೋಟಗಾರಿಕೆ ಬೆಳೆಗಳಿಗೆ ಉತ್ತೇಜನ ನೀಡಲು ಆಲಮೇಲದಲ್ಲಿ ತೋಟಗಾರಿಕಾ ಕಾಲೇಜು ಸ್ಥಾಪನೆ ಮಾಡಲಾಗಿದೆ. ಆದರೆ ಅದಕ್ಕೆ ಬೇಕಾದಷ್ಟು ಅನುದಾನ ಸಿಗದ ಹಿನ್ನೆಲೆ ಬಾಗಲಕೋಟೆ ತೋಟಗಾರಿಕಾ ವಿವಿಯಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ. ಬುರಣಾಪುರದಲ್ಲಿ ₹350 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣ ಪೂರ್ಣಗೊಳಿಸಲು ಹೆಚ್ಚುವರಿ ₹ 94 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಕಾಮಗಾರಿ ಬಹುತೇಕ ಪೂರ್ಣಗೊಂಡರೂ ಲೋಹದ ಹಕ್ಕಿಗಳ ಹಾರಾಟ ಇನ್ನೂ ಶುರುವಾಗಿಲ್ಲ.

- ತಾಲೂಕಿನ ಇಟ್ಟಂಗಿಹಾಳದಲ್ಲಿ ಫುಡ್ ಪ್ರೊಸೆಸಿಂಗ್ ಯುನಿಟ್‌ ಹಾಗೂ ಫುಡ್ ಪಾರ್ಕ್ ನಿರ್ಮಾಣದ ಘೋಷಣೆಯಾಗಿತ್ತು. ಆದರೆ ಅಲ್ಲಿ ಕಾಮಗಾರಿಗಳು ಆರಂಭವಾಗಿಲ್ಲ. ಮೀನುಗಾರಿಕೆ ಉತ್ತೇಜನಕ್ಕಾಗಿ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ಮೀನುಗಾರಿಕೆ ಕೇಂದ್ರ ಸ್ಥಾಪನೆಗೆ ಉದ್ದೇಶಿಸಲಾಗಿತ್ತು. ಅದು ಸಹ ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ರೈತರಿಗೆ ಅನುಕೂಲವಾಗಲೆಂದು ಬಸವನ ಬಾಗೇವಾಡಿಯಲ್ಲಿ ₹50 ಕೋಟಿ ವೆಚ್ಚದಲ್ಲಿ ಶೀತಲಗೃಹ ಸ್ಥಾಪನೆಗೆ ಉದ್ದೇಶಿಸಲಾಗಿದ್ದು, ಕೋಲ್ಡ್ ಸ್ಟೋರೇಜ್ ಸ್ಥಾಪನೆ ಕನಸು ಹಾಗೇ ಉಳಿದಿದೆ.

-ಬಸವನ ಬಾಗೇವಾಡಿ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲಾಗಿದೆ. ಆದರೆ ಅದರ ಪ್ರತ್ಯೇಕ ಕಾರ್ಯಚಟುವಟಿಕೆಗಳು ಆರಂಭವೇ ಆಗಿಲ್ಲ. ಇನ್ನೂ ಸಹ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲೇ ಕೆಲಸಗಳು ನಡೆಯುತ್ತಿವೆ.

-ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆಗಳು, ಭೂಸ್ವಾಧೀನ ಪ್ರಕ್ರಿಯೆ, ಸಂತ್ರಸ್ಥರಿಗೆ ಪರಿಹಾರ, ಹೊರ್ತಿ-ರೇವಣಸಿದ್ಧೇಶ್ವರ, ಬೂದಿಹಾಳ-ಪೀರಾಪುರ ಹಾಗೂ ಚಿಮ್ಮಲಗಿ ಏತ ನೀರಾವರಿ ಯೋಜನೆಗಳು ಪೂರ್ಣಗೊಳಿಸುವ ಭರವಸೆ ನೀಡಿತ್ತು. ಆದರೆ ಅನುದಾನದ ಕೊರತೆಯಿಂದ ಕಾಮಗಾರಿ ನಿಧಾನವಾಗಿ ಸಾಗುತ್ತಿವೆ. ಇದರಿಂದ ಸಂತ್ರಸ್ಥರು, ಬಾಧಿತರು ಇನ್ನೂ ಗೋಳಾಡುತ್ತಲೇ ಇದ್ದಾರೆ.

-ರಾಜ್ಯದ ಏಕೈಕ ಮಹಿಳಾ ವಿವಿಯಾದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಶಿವಯೋಗಿ ಸಿದ್ಧರಾಮೇಶ್ವರರ ಪೀಠ ಸ್ಥಾಪನೆ ಘೋಷಣೆಯಾಗಿತ್ತು. ತೀವ್ರ ಅಸ್ವಸ್ಥತೆಯಿಂದ ಬಳಲುವ ರೋಗಿಗಳಿಗಾಗಿ ₹187 ಕೋಟಿ ವೆಚ್ಚದಲ್ಲಿ ಆಧುನಿಕ ಕ್ರಿಟಿಕಲ್ ಕೇರ್ ಬ್ಲಾಕ್ ಸ್ಥಾಪನೆಗೆ ಯೋಜನೆ ರೂಪಿಸಲಾಗಿತ್ತು. ಆದರೆ, ಒಂದು ರೂಪಾಯಿಯೂ ಬಿಡುಗಡೆಯಾಗಿಲ್ಲ.

-ವಿಜಯಪುರದಲ್ಲಿ ಪುರಾತನ ನೀರು ಸರಬರಾಜು ವ್ಯವಸ್ಥೆಯನ್ನು ₹ 15ಕೋಟಿ ಅನುದಾನದಲ್ಲಿ ಪುನಶ್ಚೇತನಗೊಳಿಸಲು ಯೋಜನೆ ರೂಪಿಸಲಾಗಿತ್ತು. ಅದರ ಕಾಮಗಾರಿಗಳು ಚಾಲ್ತಿಯಲ್ಲಿವೆ.

ಕಳೆದ ಬಜೆಟ್‌ನಲ್ಲಿ 10ಕ್ಕೂ ಅಧಿಕ ಯೋಜನೆಗಳನ್ನು ಘೋಷಿಸಲಾಗಿದ್ದು, ಅದ್ಯಾವುದು ಕಾರ್ಯರೂಪಕ್ಕೆ ಬಾರದ ಹಿನ್ನೆಲೆ ಜಿಲ್ಲೆಯ ಜನರು ನಿರಾಶರಾಗಿದ್ದಾರೆ. ರಾಜ್ಯದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಸರ್ಕಾರ ಜಿಲ್ಲೆಗೆ ಕೊಟ್ಟ ಕೊಡುಗೆಗಳು ಕಡತದಲ್ಲೇ ಉಳಿದಿವೆ. ಜಿಲ್ಲೆಯ ಇಬ್ಬರು ಪ್ರಭಾವಿ ಸಚಿವರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ ಇಚ್ಚಾಶಕ್ತಿ ವಹಿಸಿದ್ದರೆ ಘೋಷಣೆಗಳಲ್ಲಿ ಅರ್ಧದಷ್ಟಾದರೂ ಯೋಜನೆಗಳನ್ನು ಜಾರಿಗೊಳಿಸಬಹುದಿತ್ತು ಎನ್ನುವುದು ಜಿಲ್ಲೆಯ ಜನರ ಅಂಬೋಣ.ಕೋಟ್:

ಕಾಂಗ್ರೆಸ್ ಸರ್ಕಾರದ ಬಜೆಟ್ ಘೋಷಣೆಗಳು ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ, ಕೇವಲ ಕಡತದಲ್ಲೇ ಉಳಿದಿವೆ. ಇವರದ್ದು ಹೆಸರಿಗೆ ಮಾತ್ರ ಬಜೆಟ್ ಮಂಡನೆ. ಈಗಾಗಲೇ ಬಜೆಟ್‌ನಲ್ಲಿ ಘೋಷಿಸಿರುವ ಹೊಸ ಯೋಜನೆಗಳ ಸ್ಥಿತಿಗತಿ ಕುರಿತು ಶ್ವೇತಪತ್ರ ಹೊರಡಿಸಬೇಕು. ಗ್ಯಾರಂಟಿಗೆ ಹೊಂದಿಸಲು ಹಣವಿಲ್ಲದೆ ಇಡಿ ರಾಜ್ಯದ ಜನರಿಗೆ ಸುಳ್ಳು ಆಶ್ವಾಸನೆಗಳನ್ನು ಕೊಡುತ್ತ, ವಂಚಿಸುತ್ತಿದ್ದಾರೆ. ಕಳೆದ ಬಾರಿ ಘೋಷಣೆಯಾಗಿರುವ ಜಿಲ್ಲೆಯ ಯೋಜನೆಗಳಲ್ಲಿ ಒಂದೂ ಇಡೇರಿಸಿಲ್ಲ. ಇನ್ನು ಜಿಲ್ಲೆಯಲ್ಲಿ ಇಬ್ಬರು ಸಚಿವರಿದ್ದರೂ ಇವರಿಂದ ಯಾವುದೇ ಕೊಡುಗೆ ಇಲ್ಲ..ಉಮೇಶ ಕಾರಜೊಳ, ಬಿಜೆಪಿ ಎಸ್ಸಿಮೋರ್ಚಾ ರಾಜ್ಯ ಉಪಾಧ್ಯಕ್ಷ.

ಕೋಟ್:ಅಧಿಕಾರಕ್ಕೆ ಬರುವ ಮೊದಲು ಕೊಟ್ಟಿದ್ದ ಐದು ಗ್ಯಾರಂಟಿಗಳನ್ನು ಇಡೇರಿಸುವ ಮೂಲಕ ನುಡಿದಂತೆ ನಡೆದ ಸರ್ಕಾರ ನಮ್ಮದು. ಕಳೆದ ಬಜೆಟ್ ನಲ್ಲಿ ಘೋಷಿಸಿದ್ದ ಬಹುತೇಕ ಯೋಜನೆಗಳಿಗೆ ಹಣ ಬಿಡುಗಡೆಯಾಗಿದೆ. ಕೆಲವೊಂದು ಮಾತ್ರ ಉಳಿದುಕೊಂಡಿದ್ದು, ಅವುಗಳಿಗೂ ಕಾಯಕಲ್ಪ ಸಿಗಲಿದೆ. ಜೊತೆಗೆ ಸಚಿವ ಎಂ.ಬಿ.ಪಾಟೀಲರು ಕೈಗಾರಿಕಾ ಸಚಿವರಾಗಿರುವುದರಿಂದ ಈ ಬಾರಿಯೂ ಬಜೆಟ್‌ನಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಜಿಲ್ಲೆಗೆ ಭರ್ಜರಿ ಕೊಡುಗೆ ಸಿಗುವ ನಿರೀಕ್ಷೆಯಿದೆ.

ಸೈಯದ್ ಜಮೀರ ಅಹಮ್ಮದ ಬಕ್ಷಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ.