ಮಹಾರಾಜರ ಆಳ್ವಿಕೆಯ ಅವಧಿಯಲ್ಲಿ ಮೈಸೂರು ಅಭಿವೃದ್ಧಿಗೆ ಸಾಕಷ್ಟು ಮಂದಿ ಶ್ರಮಿಸಿದ್ದಾರೆ. ಇದರಲ್ಲಿ ದಿವಾನರ ಪಾತ್ರ ಪ್ರಮುಖವಾಗಿದ್ದರೂ, ಎಲೆಮರೆ ಕಾಯಿಯಂತೆ ಕೆಲಸ ಮಾಡಿದ ಅನೇಕಾರು ಮಂದಿ ಇದ್ದಾರೆ. ಆದರೆ ನಮಗೆ ಗೋಚರಿಸುವುದು ಮಹಾರಾಜರು, ದಿವಾನರಾಗಿದ್ದ ಪೂರ್ಣಯ್ಯ, ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್‌ ಮೊದಲಾದವರು ಮಾತ್ರ.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರಿನ ಅಭಿವೃದ್ಧಿಯಲ್ಲಿ ಎಲೆಮರೆ ಕಾಯಿಯಂತೆ ದುಡಿದ ಅನೇಕರ ಪರಿಶ್ರಮವಿದೆ ಎಂದು ಜೆಎಸ್‌ಎಸ್‌ ಮಹಾ ವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜೆ. ಬೆಟಸೂರಮಠ ಅಭಿಪ್ರಾಯಪಟ್ಟರು.

ನಗರದ ರೋಟರಿ ಸಭಾಂಗಣದಲ್ಲಿ ಮೈಸೂರು ಬುಕ್‌ ಕ್ಲಬ್ಸ್‌ ಚಾರಿಟಬಲ್‌ ಟ್ರಸ್ಟ್‌, ಕನ್ನಡ ಓದುಗರ ಒಕ್ಕೂಟದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಗೌರಿಸತ್ಯ ಅವರ ಮೈಸೂರಿನ ಅಸಾಮಾನ್ಯರು ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಮಹಾರಾಜರ ಆಳ್ವಿಕೆಯ ಅವಧಿಯಲ್ಲಿ ಮೈಸೂರು ಅಭಿವೃದ್ಧಿಗೆ ಸಾಕಷ್ಟು ಮಂದಿ ಶ್ರಮಿಸಿದ್ದಾರೆ. ಇದರಲ್ಲಿ ದಿವಾನರ ಪಾತ್ರ ಪ್ರಮುಖವಾಗಿದ್ದರೂ, ಎಲೆಮರೆ ಕಾಯಿಯಂತೆ ಕೆಲಸ ಮಾಡಿದ ಅನೇಕಾರು ಮಂದಿ ಇದ್ದಾರೆ. ಆದರೆ ನಮಗೆ ಗೋಚರಿಸುವುದು ಮಹಾರಾಜರು, ದಿವಾನರಾಗಿದ್ದ ಪೂರ್ಣಯ್ಯ, ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್‌ ಮೊದಲಾದವರು ಮಾತ್ರ ಎಂದರು.

ಗೌರಿ ಸತ್ಯ ಅವರ ಮೈಸೂರಿನ ಅಸಾಮಾನ್ಯರು ಕೃತಿಯಲ್ಲಿ ಪ್ರತಿಯೊಬ್ಬರ ಬಗ್ಗೆಯೂ ಬರೆದಿದ್ದಾರೆ. ಮೈಸೂರಿನ ಅಭಿವೃದ್ಧಿಯಲ್ಲಿ ಸಾಕಷ್ಟು ಮಂದಿ ಎಲೆಮರೆ ಕಾಯಿಯಂತೆ ದುಡಿದಿದ್ದಾರೆ. ಸುಮಾರು 50 ಮಂದಿಯ ಕುರಿತ ಲೇಖನಗಳಿದ್ದು, ಯಾವುದೇ ಪ್ರತಿಫಲಾಪೇಕ್ಷೆ, ಪ್ರಚಾರ ಇಲ್ಲದೆ ಕೆಲಸ ಮಾಡಿದವರ ಬಗ್ಗೆಯೂ ಇದರಲ್ಲಿ ಉಲ್ಲೇಖವಿದೆ ಎಂದರು.

ಅವರ ಹುಟ್ಟು, ಬೆಳವಣಿಗೆ ಸಹಿತವಾದ ಲೇಖನವಿದೆ. ಇದೊಂದು ಸಂಶೋಧನಾ ಗ್ರಂಥವಿದ್ದಂತೆ. ವಿವಿಧ ಗ್ರಂಥಗಳಿಂದ ಮತ್ತು ಅನೇಕ ಮಹನೀಯರಿಂದ ಮಾಹಿತಿ ಕಲೆ ಹಾಕಿ ಈ ಕೃತಿ ರಚಿಸಿದ್ದಾರೆ. ಅನೇಕಾರು ಮಂದಿ ಹಮಾಲ್ದಾರರ ಬಗ್ಗೆ, ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಿದವರು, ಎಂಜಿನಿಯರ್‌ ಗಳು, ವೈದ್ಯರು, ಜೈಲು ಅಧಿಕಾರಿಗಳ ಬಗ್ಗೆಯೂ ಇದರಲ್ಲಿ ಉಲ್ಲೇಖವಿದೆ ಎಂದರು.

ಮೈಸೂರು ಬುಕ್‌ಕ್ಲಬ್‌ ಚಾರಿಟೇಬಲ್‌ ಟ್ರಸ್ಟ್‌ ನ ಸಂಸ್ಥಾಪಕ ಅಧ್ಯಕ್ಷೆ ಶುಭ ಸಂಜಯ್‌ ಅರಸ್‌ ಕೃತಿ ಸ್ವೀಕರಿಸಿದರು. ಗಮಕಿ ಮತ್ತು ಪ್ರಾಧ್ಯಾಪಕಿ ಡಾ. ಜ್ಯೋತಿ ಶಂಕರ್‌ ಕೃತಿ ಕುರಿತು ಮಾತನಾಡಿದರು. ಲೇಖಕ ಹಾಗೂ ಹಿರಿಯ ಪತ್ರಕರ್ತ ಗೌರಿ ಸತ್ಯ ಇದ್ದರು.