ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮತ್ತು ಕೂಲಿ ಕಾರ್ಮಿಕರಿಗೆ ಅನುಕೂಲವಾಗುವಂತೆ ಮಲೆನಾಡು ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಬಸ್ಸುಗಳ ಸಂಚಾರಕ್ಕೆ ಅನುವು ಮಾಡುವಂತೆ ಶಾಸಕ ಆರಗ ಜ್ಞಾನೇಂದ್ರ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.ನಗರ ಹೋಬಳಿಯಿಂದ ತೀರ್ಥಹಳ್ಳಿ ಶಾಲಾ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ನಗರ ಹೋಬಳಿಯ ರ್ಯಾವೆಯಿಂದ ತೀರ್ಥಹಳ್ಳಿ ಮಾರ್ಗವಾಗಿ ಶಿವಮೊಗ್ಗಕ್ಕೆ ಹೋಗುವ ರಾಜ್ಯ ರಸ್ತೆ ಸಾರಿಗೆಯಿಂದ ಹೊಸದಾಗಿ ಆರಂಭಿಸಲಾದ ಬಸ್ಸಿಗೆ ಸೋಮವಾರ ಪಟ್ಟಣದಲ್ಲಿ ಚಾಲನೆ ನೀಡಿ ಮಾತನಾಡಿ, ಮಲೆನಾಡಿನ ಈ ಭಾಗದಲ್ಲಿ ಅತೀ ಕಡಿಮೆ ಸರ್ಕಾರಿ ಬಸ್ಸುಗಳು ಸಂಚರಿಸುತ್ತಿದ್ದು ಮಹಿಳೆಯರು ಗ್ಯಾರಂಟಿ ಸೌಲಭ್ಯದಿಂದ ವಂಚಿತರಾಗಿದ್ದಾರೆ. ವಿದ್ಯಾರ್ಥಿನಿಯರು ಹಾಗೂ ಕೂಲಿ ಕಾರ್ಮಿಕ ಮಹಿಳೆಯರು ರಾಜ್ಯ ಸರ್ಕಾರ ಮಹಿಳೆಯರಿಗೆ ನೀಡಿರುವ ಗ್ಯಾರಂಟಿ ಯೋಜನೆಯ ಸೌಲಭ್ಯವನ್ನು ಬಳಸಿಕೊಳ್ಳುವ ಸಲುವಾಗಿ ಸರ್ಕಾರಿ ಬಸ್ಸುಗಳ ಸಂಚಾರವನ್ನು ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕಿದೆ ಎಂದರು.
ಪಟ್ಟಣದಲ್ಲಿರುವ ಎರಡು ಸರ್ಕಾರಿ ಪ್ರೌಡಶಾಲೆಗಳಿಗೆ ನಗರ ಹೋಬಳಿಯ ಭಾಗದಿಂದ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಈ ವಿದ್ಯಾರ್ಥಿಗಳಿಗೆ ಬಸ್ಸಿನ ಸೌಕರ್ಯ ಇಲ್ಲದ ಕಾರಣ ಇಂದಿನಿಂದ ಆರಂಭಗೊಂಡಿರುವ ಬಸ್ಸಿನ ಸಂಚಾರದಿಂದ ಅನುಕೂಲವಾಗಲಿದೆ. ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವುದು ಕಷ್ಟಸಾಧ್ಯ ಎಂದು ಹೇಳಿದರು.ಮಲೆನಾಡು ಕರಾವಳಿ ಸಂಪರ್ಕದ ಹುಲಿಕಲ್ ಘಾಟಿ ಕುಸಿತಕ್ಕೆ ಕಾಮಗಾರಿ ಆರಂಭಿಸಲು ಮೂರು ತಿಂಗಳ ಅಡಚಣೆಯಾಗಿರುವುದು ಮುಖ್ಯ ಕಾರಣವಾಗಿದೆ. ಗುತ್ತಿಗೆದಾರರು ಮತ್ತು ಅಧಿಕಾರಿಗಳಿಗೆ ದೂರು ದಾಖಲಿಸುವ ಬೆದರಿಕೆ ಹಾಕಿರುವ ಪರಿಣಾಮ ಅಭಿವೃದ್ಧಿಗೆ ಹಿನ್ನಡೆಯಾಗುವುದರ ಜೊತೆಗೆ ದೊಡ್ಡ ಅನಾಹುತವೇ ನಡೆಯುವಂತಾಯ್ತು ಎಂದೂ ವಿಷಾದ ವ್ಯಕ್ತಪಡಿಸಿದರು.
ಈ ಮಾರ್ಗ ಸರ್ವಋತು ಹೆದ್ದಾರಿಯಾಗಿದ್ದು 5.50 ಕೋಟಿ ರು. ವೆಚ್ಚದಲ್ಲಿ ಕಾಮಗಾರಿ ನಡೆದಿದ್ದು ಇನ್ನೂ ಒಂದು ಕೋಟಿ ವೆಚ್ಚದ ಕೆಲಸ ಆಗಬೇಕಿದೆ. ಈಚೆಗೆ ನಡೆದ ಘಾಟಿ ಕುಸಿತದಿಂದಾಗಿ ಅಸ್ತವ್ಯಸ್ತಗೊಂಡಿದ್ದ ಸಂಚಾರ ವ್ಯವಸ್ಥೆಯಿಂದ ವ್ಯಾಪಾರ ವ್ಯವಹಾರಗಳಿಗೆ ತೀವ್ರ ಹಿನ್ನಡೆಯಾಗಿತ್ತು ಎಂದು ಹೇಳಿದರು.
------------------------
ಫೋಟೋ 27 ಟಿಟಿಎಚ್ 01: ತೀರ್ಥಹಳ್ಳಿ ಮಾರ್ಗವಾಗಿ ಶಿವಮೊಗ್ಗಕ್ಕೆ ಹೋಗುವ ರಾಜ್ಯ ರಸ್ತೆ ಸಾರಿಗೆ ಬಸ್ಸಿಗೆ ಶಾಸಕ ಆರಗ ಜ್ಞಾನೇಂದ್ರ ಚಾಲನೆ ನೀಡಿದರು.