ಚಿಕ್ಕಮಗಳೂರುಗರ್ಭಕೋಶದ ಕ್ಯಾನ್ಸರ್ ನಿಯಂತ್ರಣಕ್ಕೆ ಹೊಸದಾಗಿ ಲಸಿಕೆ ಕಂಡು ಹಿಡಿಯಲಾಗಿದೆ. ವೈದ್ಯರ ಸಲಹೆ ಪಡೆದು 9 ರಿಂದ 12 ವರ್ಷದೊಳಗಿನ ಹೆಣ್ಣು ಮಕ್ಕಳು ಈ ಲಸಿಕೆ ಪಡೆಯುವುದರಿಂದ ಜೀವನ ಪೂರ್ತಿ ಗರ್ಭಕೋಶದ ಕ್ಯಾನ್ಸರ್ ಆಗುವ ಸಾಧ್ಯತೆ ತುಂಬಾ ಕಡಿಮೆ ಎಂದು ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಚಂದ್ರಶೇಖರ ಸಾಲಿಮಠ್ ತಿಳಿಸಿದರು.

ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ನಡೆದ ಕ್ಯಾನ್ಸರ್ ತಪಾಸಣಾ ಶಿಬಿರ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಗರ್ಭಕೋಶದ ಕ್ಯಾನ್ಸರ್ ನಿಯಂತ್ರಣಕ್ಕೆ ಹೊಸದಾಗಿ ಲಸಿಕೆ ಕಂಡು ಹಿಡಿಯಲಾಗಿದೆ. ವೈದ್ಯರ ಸಲಹೆ ಪಡೆದು 9 ರಿಂದ 12 ವರ್ಷದೊಳಗಿನ ಹೆಣ್ಣು ಮಕ್ಕಳು ಈ ಲಸಿಕೆ ಪಡೆಯುವುದರಿಂದ ಜೀವನ ಪೂರ್ತಿ ಗರ್ಭಕೋಶದ ಕ್ಯಾನ್ಸರ್ ಆಗುವ ಸಾಧ್ಯತೆ ತುಂಬಾ ಕಡಿಮೆ ಎಂದು ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಚಂದ್ರಶೇಖರ ಸಾಲಿಮಠ್ ತಿಳಿಸಿದರು.

ಅಖಿಲ ಭಾರತ ತೇರಾಪಂಥ್ ಮಹಿಳಾ ಮಂಡಳದ ಜಿಲ್ಲಾ ಘಟಕದಿಂದ ನಗರದ ತೇರಾಪಂಥ್ ಸಭಾ ಭವನದಲ್ಲಿ ಬುಧವಾರ ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ನಡೆದ ಕ್ಯಾನ್ಸರ್ ತಪಾಸಣಾ ಶಿಬಿರದಲ್ಲಿ ಮಾತನಾಡಿ ಕೇವಲ ಎರಡು ಡೋಸ್ ಲಸಿಕೆ ಪಡೆದರೆ ಸಾಕಾಗುತ್ತದೆ. ಅಕಸ್ಮಾತ್ 9ರಿಂದ 12 ವರ್ಷದೊಳಗೆ ಲಸಿಕೆ ಪಡೆಯಲಾಗದಿದ್ದರೆ ಅಂತಹ ಯಾವುದೇ ಯುವತಿಯರು 15 ವರ್ಷದ ನಂತರವೂ ಲಸಿಕೆ ಪಡೆಯ ಬಹುದು. ಆದರೆ ಅವರು ಹೆಚ್ಚುವರಿಯಾಗಿ 2 ಡೋಸ್ ಲಸಿಕೆ ಪಡೆಯಬೇಕಾಗುತ್ತದೆ. ಇದರಿಂದ ಸಾಕಷ್ಟು ಲಾಭಗಳಿವೆ. ಈ ವಿಚಾರವನ್ನು ಹೆಚ್ಚು ಮಹಿಳೆಯರು, ಯುವತಿಯರಿಗೆ ತಿಳಿಸಬೇಕು ಎಂದು ಹೇಳಿದರು.

ಕ್ಯಾನ್ಸರ್ ಎಂದರೆ ಹೊರಗಿನಿಂದ ದೇಹ ಸೇರಿಕೊಳ್ಳುವ ಕಾಯಿಲೆಯಲ್ಲ. ದೇಹದಲ್ಲೇ ಇರುವ ಜೀವಕೋಶಗಳೇ ದುಪ್ಪಟ್ಟಾಗಿ ದೇಹಕ್ಕೆ ತೊಂದರೆ ಕೊಡು ವಂತಹದ್ದಾಗಿದೆ. ಈ ಜೀವಕೋಶಗಳ ಸಾಮಾನ್ಯ ಸಮತೋಲನ ಯಾಕೆ ತಪ್ಪುತ್ತದೆ ಎನ್ನುವುದನ್ನು ವಿಜ್ಞಾನ ಇಷ್ಟೆಲ್ಲಾ ಮುಂದುವರಿದರೂ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಅದಕ್ಕೆ ಸಾಕಷ್ಟು ಕಾರಣಗಳಿವೆ ಎಂದರು.

ಅನುವಂಶೀಯವಾಗಿ ಕ್ಯಾನ್ಸರ್ ಕಾಯಿಲೆ ಹೆಚ್ಚು ಇತ್ತೀಚೆಗೆ 100ರಲ್ಲಿ 12 ಮಂದಿಗೆ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ಪ್ರತಿ ವರ್ಷ 60 ಸಾವಿರ ಗರ್ಭ ಕೋಶದ ಕ್ಯಾನ್ಸರ್ ಪತ್ತೆಯಾಗುತ್ತಿದೆ. ಇಷ್ಟು ದೊಡ್ಡ ಮಟ್ಟಿಗೆ ನಮ್ಮ ಜನಸಂಖ್ಯೆಯಲ್ಲಿ ಕಾನ್ಸರ್ ಸಮಸ್ಯೆ ಕಾಣಿಸಿಕೊಳ್ಳುತ್ತಿರುವುದರಿಂದ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದರು.

ಕ್ಯಾನ್ಸರ್ ಪ್ರಾರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ಪಡೆದರೆ ಸಂಪೂರ್ಣ ಗುಣಮುಖರಾಗಲು ಸಾಧ್ಯ. ಆದರೆ ಆರಂಭಿಕ ಹಂತದಲ್ಲಿ ಅದು ಗೊತ್ತಾಗದಿ ರುವುದು ಸಮಸ್ಯೆಗೆ ಕಾರಣವಾಗುತ್ತಿದೆ ಎಂದರು.

ತೇರಾಪಂಥ್ ಸಭಾ ಅಧ್ಯಕ್ಷ ಮಹೇಂದ್ರಡೋಶಿ ಮಾತನಾಡಿ, ಕ್ಯಾನ್ಸರ್‌ನಿಂದ ಮುಕ್ತರನ್ನಾಗಿಸುವ ಉದ್ದೇಶದಿಂದ ಮಹಿಳೆಯರ ಗರ್ಭ ಪರೀಕ್ಷೆ ಯನ್ನು ಮಾಡಲಾಗುತ್ತಿದ್ದು ಇದರಿಂದ ಕ್ಯಾನ್ಸರ್‌ನ ಆರಂಭಿಕ ಹಂತ ತಿಳಿದು ಚಿಕಿತ್ಸೆ ಪಡೆಯಲು ಅನುಕೂಲವಾಗುತ್ತದೆ ಎಂದರು.

ಮಹಿಳಾ ಘಟಕದ ಕಾರ್ಯದರ್ಶಿ ತಮನ್ನಾ ಮಾತನಾಡಿದರು. ಈವೇಳೆ ಡಾ. ಪಾಂಡುರಂಗ, ಡಾ, ಸೌಮ್ಯ, ತೇರಾಪಂಥ್ ಮಹಿಳಾ ಮಂಡಲ ಅಧ್ಯಕ್ಷೆ ಸಂತೋಷ್ ಗಾದಿಯಾ, ಉಪಾಧ್ಯಕ್ಷೆ ನರಿತಾ ಗಾದಿಯಾ, ಲಲಿತಾ ಡೋಸಿ, ಶೋಭಾ ಗಾದಿಯಾ, ದಿವ್ಯ ಗಾದಿಯಾ, ಲಲಿತಾ ಗಾದಿಯಾ, ಟ್ರಸ್ಟ್ ಅಧ್ಯಕ್ಷ ಅಶೋಕ್ ಡೋಸಿ, ತೇರಾಪಂಥ್ ಯುವ ಪರಿಷತ್ ಅಧ್ಯಕ್ಷ ನಿಖಿಲ್ ಗಾಧಿಯಾ, ಗೌತಮ್ ಆಚಾ ಉಪಸ್ಥಿತರಿದ್ದರು.