ಕನ್ನಡಪ್ರಭ ವಾರ್ತೆ ಹೊನ್ನಾವರ
ಶರಾವತಿ ಪಂಪ್ಡ್ ಸ್ಟೊರೇಜ್ ಯೋಜನೆ ಬೇಡ. ಸೋಲಾರ್ ಮತ್ತಿತರ ಆಧುನಿಕ ಮಾದರಿಯಲ್ಲಿ ವಿದ್ಯುತ್ ಉತ್ಪಾದಿಸಲಿ. ಸಾವಿರಾರು ಕೋಟಿ ಯೋಜನೆಯಿಂದ ಸುಂದರ ಪರಿಸರ ವಿನಾಶವಾಗಲಿದೆ. 30 ಪರಿಸರವಾದಿಗಳು ಒಟ್ಟುಗೂಡಿ ಸರ್ಕಾರಕ್ಕೆ ಮನವಿ ಮಾಡಲಿದ್ದೇವೆ. ಯೋಜನೆಯ ಜಾರಿಯಿಂದ ಉಂಟಾಗುವ ಅನಾಹುತವನ್ನು ವಿವರಿಸುತ್ತೇವೆ ಎಂದು ನಟ ಚೇತನ ಅಹಿಂಸಾ ಹೇಳಿದರು.ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸರಕಾರ ಡೆವಲಮೆಂಟ್ ಮಾಡೆಲ್ ಎಂದು ದೊಡ್ಡ ಕಟ್ಟಡ ನಿರ್ಮಿಸಿ ಉಳ್ಳವರಿಗೆ ಲಾಭ ಮಾಡಿಕೊಡುತ್ತಿದೆ. ಟೊಂಕಾ ವಾಣಿಜ್ಯ ಬಂದರು ಯೋಜನೆ ಜಾರಿ ಮಾಡಲು ಮುದಾಗಿದೆ. ಸಾರ್ವಜನಿಕರು, ಮೀನುಗಾರರ ಬದುಕಿನ ಬಗ್ಗೆ ಕಾಳಜಿ ಇಲ್ಲ. ಹೊನ್ನಾವರ, ಬಿಡದಿ, ಮೇಕೆದಾಟು ಯೋಜನೆ ಜಾರಿಯಿಂದ ವಿನಾಶಕಾರಿಯಾಗಲಿದೆ ಎಂದರು.ಈಗಾಗಲೇ ಬಂದರು ಕಾಮಗಾರಿ ಆರಂಭವಾಗಿದೆ. ಮೀನುಗಾರಿಕೆಯ ಸುಂದರ ವಾತಾವರಣ ಹಾಳು ಮಾಡಬಾರದು. ಈ ಹಿಂದೆ ಡಿ.ಕೆ. ಶಿವಕುಮಾರ ಅವರು ಸ್ಥಳಕ್ಕೆ ಬಂದು ಅಧಿಕಾರಕ್ಕೆ ಬಂದರೆ ಮೀನುಗಾರರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಮನೆ ತೆರವುಗೊಳಿಸುವುದು ಬೇಡ, ನಿಮ್ಮ ಜೊತೆ ನಾನಿದ್ದೇನೆ ಎಂದು ಭರವಸೆ ನೀಡಿದರು. ಈಗ ಅವರೇ ಮುಖ್ಯಮಂತ್ರಿ ಆಗಿದ್ದಾರೆ. ನುಡಿದಂತೆ ನಡೆಯಬೇಕಿದೆ. ವಿನಾಶಕಾರಿ ಬಂದರು ಯೋಜನೆ ಕೈಬಿಡುವಂತೆ ಮತ್ತೊಮ್ಮೆ ಆಗ್ರಹಿಸುವುದಾಗಿ ತಿಳಿಸಿದರು.
ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಜಿಲ್ಲೆಗೆ ಅನ್ಯಾಯವಾಗಿದ್ದು, ಕರಾವಳಿಗೆ ನ್ಯಾಯ ಸಿಗಲಿಲ್ಲ. ಮಹಿಳೆಯರಿಗೂ ಸ್ಥಾನ ಸಿಕ್ಕಿಲ್ಲ. ಬೆಂಗಳೂರಿಗೆ ಮಾತ್ರ ಹೆಚ್ಚಿನ ಸ್ಥಾನ ದೊರೆತಿದೆ. ರಾಜ್ಯದಲ್ಲಿ ಪ್ರಾದೇಶಿಕವಾರು ಹಂಚಿಕೆ ಆಗಿಲ್ಲ. ಜನವಿರೋಧಿ ನಿಲುವು, ವ್ಯಾಪಾರ, ವ್ಯವಹಾರದಲ್ಲಿ ತೊಡಗಿರುವವರಿಗೆ ಸಚಿವ ಸ್ಥಾನ ದೊರೆತಿದೆ. ಕರ್ನಾಟಕ ಕಟ್ಟುವವರನ್ನು ಮೂಲೆಗುಂಪು ಮಾಡಲಾಗಿದೆ. ಇಂತಹ ನಿಲುವಿನಿಂದ ದೂರ ಇದ್ದು, ಪಕ್ಷ ಕಟ್ಟಿ ಕರಾವಳಿ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಯವರನ್ನು ಸೇರಿಸಿಕೊಂಡು ಮಾದರಿ ರಾಜ್ಯ ಮಾಡುವ ಚಿಂತನೆ ನಡೆಸುತ್ತೇವೆ ಎಂದರು.ರಾಜ್ಯದಲ್ಲಿ ಚಳವಳಿಗಾರರು, ಹೋರಾಟಗಾರರು, ಸಾಮಾಜಿಕ ಚಿಂತಕರು, ಉತ್ತಮ ಸಮಾಜ ಕಟ್ಟಲು ನಿಸ್ವಾರ್ಥ ಸೇವೆ ಮಾಡುವರನ್ನು ಗುರುತಿಸಿ ಪಕ್ಷ ಕಟ್ಟುತ್ತೇವೆ. ಜಾತಿ ತಾರತಮ್ಯ, ಲಿಂಗ ಅಸಮಾನತೆ, ರಾಜ್ಯದ ಸಮಗ್ರ ಅಭಿವೃದ್ದಿಗೆ ಶ್ರಮಿಸುವುದಾಗಿ ತಿಳಿಸಿದರು.