ಕನ್ನಡದ ಪ್ರತಿ ಪದಕ್ಕೂ ಪದವಿ ತಂದುಕೊಟ್ಟವರು ಬೇಂದ್ರೆ: ದೇವರಾಜ ಹುಣಸಿಕಟ್ಟಿ

| Published : Feb 19 2024, 01:30 AM IST

ಕನ್ನಡದ ಪ್ರತಿ ಪದಕ್ಕೂ ಪದವಿ ತಂದುಕೊಟ್ಟವರು ಬೇಂದ್ರೆ: ದೇವರಾಜ ಹುಣಸಿಕಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡದ ಪ್ರತಿ ಪದಕ್ಕೂ ಪದವಿ ತಂದುಕೊಟ್ಟವರು ಬೇಂದ್ರೆ.

ಬೇಂದ್ರೆ ಬದುಕು ಬರಹ ಕಾರ್ಯಕ್ರಮದಲ್ಲಿ ಸಾಹಿತಿ

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ಕನ್ನಡದ ಪ್ರತಿ ಪದಕ್ಕೂ ಪದವಿ ತಂದುಕೊಟ್ಟವರು ಬೇಂದ್ರೆ ಎಂದು ಸಾಹಿತಿ ದೇವರಾಜ ಹುಣಸಿಕಟ್ಟಿ ಹೇಳಿದರು.

ತಾಲೂಕಿನ ಮೆಡ್ಲೇರಿ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಗ್ರಾಮ ಘಟಕದ ವತಿಯಿಂದ ಶ್ರೀ ಬೀರೇಶ್ವರ ಪ್ರೌಢಶಾಲೆಯಲ್ಲಿ ಏರ್ಪಡಿಸಲಾಗಿದ್ದ ಬೇಂದ್ರೆ ಬದುಕು ಬರಹ ಕಾರ್ಯಕ್ರಮದಲ್ಲಿ ಮಾತನಾಡಿದರು. ನುಡಿ ಎಂಬ ದೇವತೆಗೆ ಗುಡಿಕಟ್ಟಿ ಮಾತನ್ನೇ ಮಾತೆ ಮಾಡಿದ ಪುಣ್ಯವಂತರು. ಮನೆಯ ಭಾಷೆ ಮರಾಠಿಯಾದರೂ ಕನ್ನಡವನ್ನು ತನು ಮನದ ಕಣ ಕಣದೊಳಗೆ ತುಂಬಿ ಬರೆದವರು ಬೇಂದ್ರೆಯವರು. ಅಂಬಿಕಾತನಯದತ್ತ ಎಂಬ ಕಾವ್ಯ ನಾಮದಿಂದ ಜನಜನಿತವಾದ ಕವಿ. ನೋವನ್ನು ಉಂಡು, ಬೆಂದು ಬೇಂದ್ರೆ ಕವಿಯಾಗಿ ರೂಪಗೊಂಡವರು. ನರ ಬಲಿ ಎಂಬ ಕವಿತೆ ಬರೆದು ಬ್ರಿಟಿಷ್ ಸರ್ಕಾರದ ಕೋಪಕ್ಕೆ ತುತ್ತಾಗಿ ಜೈಲು ವಾಸ ಅನುಭವಿಸಿದ್ದಲ್ಲದೆ ಉದ್ಯೋಗ ಕೂಡ ಕಳೆದುಕೊಂಡವರು. ಜೈಲಿನಲ್ಲಿರುವಾಗಲೇ ನಾನು ಬಡವಿ ಆತ ಬಡವ ಒಲವೇ ನಮ್ಮ ಬದುಕು ಮುಂತಾದ ಪ್ರಸಿದ್ಧ ಕವಿತೆ ಬರೆದರು. ಅವರ ವಿವಾಹದ ನಂತರವು ಬದುಕುಕೊಟ್ಟ ನೋವು ಸಣ್ಣದಾಗಿರಲಿಲ್ಲ. ಹುಟ್ಟಿದ 9 ಮಕ್ಕಳಲ್ಲಿ ಕಣ್ಣ್ಎದುರಿಗೆ 6 ಮಕ್ಕಳು ತೀರಿಕೊಂಡ ಆಘಾತ ತಡೆದುಕೊಂಡ ರೌದ್ರ ಹೃದಯದವರು. ಅವರು 27 ಕವನ ಸಂಕಲನ, 10 ನಾಟಕಗಳು, ಅನೇಕ ವಿಮರ್ಶೆಯ ಬರಹಗಳನ್ನು ಕನ್ನಡಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದರು.

ಶ್ರೀ ಬೀರೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಬಿ. ಜಿ. ತಾಯಮ್ಮನವರ ಕಾರ್ಯಕ್ರಮ ಉದ್ಘಾಟಿಸಿದರು. ಡಾ. ಚಂದ್ರಕಾಂತ ಆರ್.ಬಿ. ಹಾಗೂ ನಾಗೇಶ ಚಿನ್ನಿಕಟ್ಟಿ ಮುಖ್ಯ ಅತಿಥಿಗಳಾಗಿದ್ದರು. ಕಸಾಪ ಗ್ರಾಮ ಘಟಕದ ಅಧ್ಯಕ್ಷ ಮಾರುತಿ ತಳವಾರ ಅಧ್ಯಕ್ಷತೆ ವಹಿಸಿದ್ದರು.

ಅನ್ನಪೂರ್ಣ ಚವ್ಹಾಣ, ಎಲ್.ಸಿ. ಮಾಚೇನಹಳ್ಳಿ, ರಮೇಶ ಅರ್ಕಾಚಾರಿ, ವೆಂಕಟೇಶ ಹೊಸಮನಿ, ಡಿ.ಎನ್. ಬೇವಿನಹಳ್ಳಿ ಉಪಸ್ಥಿತರಿದ್ದರು.