ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಹಿಂದೆ ಬೀಳುವ ಪ್ರಶ್ನೆ ಇಲ್ಲ: ಕೆ.ಎಸ್. ಆನಂದ್.

| Published : Jan 04 2024, 01:45 AM IST

ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಹಿಂದೆ ಬೀಳುವ ಪ್ರಶ್ನೆ ಇಲ್ಲ: ಕೆ.ಎಸ್. ಆನಂದ್.
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದಾಗಿನಿಂದ ಬಡವರ ಪರವಾಗಿ ಕಾರ್ಯನಿರ್ವಹಿಸುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರೀತಿಯಲ್ಲೂ ಹಿಂದೆ ಬೀಳುವ ಪ್ರಶ್ನೆ ಇಲ್ಲ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

- ಅಂಬೇಡ್ಕರ್ ಅಭಿವೃದ್ಧಿ ನಿಗಮದ ಗಂಗಾ ಕಲ್ಯಾಣ ಯೋಜನೆಗೆ ಬಿ.ಕೆ. ಹೊಸೂರಿನಿಂದ ಚಾಲನೆಕನ್ನಡಪ್ರಭ ವಾರ್ತೆ, ಬೀರೂರು

ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದಾಗಿನಿಂದ ಬಡವರ ಪರವಾಗಿ ಕಾರ್ಯನಿರ್ವಹಿಸುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರೀತಿಯಲ್ಲೂ ಹಿಂದೆ ಬೀಳುವ ಪ್ರಶ್ನೆ ಇಲ್ಲ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಬೀರೂರಿನ ಬಿ.ಕೆ.ಹೊಸೂರು ಗ್ರಾಮದ ಸಮೀಪ ಡಾ.ಅಂಬೇಡ್ಕರ್ ಅಭಿವೃದ್ದಿ ನಿಗಮದಿಂದ 2021-22, ಹಾಗೂ 23 ನೇ ಸಾಲಿನ ಗಂಗಾ ಕಲ್ಯಾಣ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳ ಜಮೀನಿನಲ್ಲಿ ಬುಧವಾರ ಕೊಳವೆ ಬಾವಿ ಕೊರೆಯಲು ಚಾಲನೆ ನೀಡಿ ಮಾತನಾಡಿದರು.

ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ನೀಡಿದ ಉಚಿತ ಪಂಚಯೋಜನೆಗಳ ಜೊತೆ ಇತ್ತೀಚೆಗೆ ಚಾಲನೆ ನೀಡಿದ ಯುವನಿಧಿ ಸೇರಿದಂತೆ ಸರ್ಕಾರಕ್ಕೆ ಸುಮಾರು 59 ಸಾವಿರ ಕೋಟಿ ರು. ವೆಚ್ಚವಾಗಿದ್ದರು ಸಹ ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಹಿಂದೆ ಬೀಳುವ ಪ್ರಶ್ನೆ ಇಲ್ಲ. ಹಿಂದಿನ ಸರ್ಕಾರಕ್ಕಿಂತ ಹೆಚ್ಚು ನಮ್ಮ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಗೆ ಹಣ ನೀಡಲು ಸಿದ್ದರಾಮಯ್ಯ ಧೃಡಸಂಕಲ್ಪ ಮಾಡಿದ್ದಾರೆ ಎಂದರು.

ಈ ಹಿಂದೆ ಬಡ ರೈತರು ಸರ್ಕಾರದ ನೀರಾವರಿ ಸವಲತ್ತು ಪಡೆಯಲು ಅಂಬೇಡ್ಕರ್‌, ವೀರಶೈವ, ಬೋವಿ, ಉಪ್ಪಾರ ನಿಗಮ ಸೇರಿದಂತೆ ಮತ್ತಿತರ ನಿಗಮಗಳಿಗೆ ಗಂಗಕಲ್ಯಾಣ ಯೋಜನೆ ಪಡೆಯಲು ಅತಿ ಹೆಚ್ಚು ಅರ್ಜಿ ಸಲ್ಲಿಸಿದ್ದರು. ಆದರೆ ಹಿಂದಿನ ಬಿಜೆಪಿ ಸರ್ಕಾರ ಈ ಎಲ್ಲ ನಿಗಮಗಳಿಗೆ ಯಾವುದೇ ಅನುದಾನ ಬಿಡುಗಡೆ ಮಾಡದ ಪರಿಣಾಮ ಇವುಗಳಿಗೆ ಚಾಲನೆ ನೀಡಲು ಸಾಧ್ಯವಾಗಿರಲಿಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾ ಕ್ಷಣ ಜನರಲ್ಲಿ ಆಸೆ ಸೃಷ್ಠಿಯಾಗಿದೆ. ಇದು ಬಡವರ ಪರ ಸರ್ಕಾರವಾದ ಕಾರಣ ಜನರು ಹೆಚ್ಚು ಅರ್ಜಿ ಸಲ್ಲಿಸಿ ನಮ್ಮನ್ನು ಆಯ್ಕೆ ಮಾಡಿ ಎಂದಿದ್ದಾರೆ. ಆದರೆ ನಿಗಮದಲ್ಲಿ ಇಂತಿಷ್ಟೆ ಫಲಾನುಭವಿಗಳು ಎಂದು ಸರ್ಕಾರ ನಿರ್ಧರಿಸಿರುವ ಕಾರಣ ರಾಜ್ಯದ ಎಲ್ಲಾ ಶಾಸಕರು ನಿಗಮಗಳಿಗೆ ಹೆಚ್ಚಿನ ಫಲಾನುಭವಿ ಗಳನ್ನು ಆಯ್ಕೆ ಮಾಡುವಂತೆ ಸಂಬಂದ ಪಟ್ಟ ಸಚಿವರಿಗೆ ಹಾಗೂ ಮುಖ್ಯಮಂತ್ರಿಗೆ ಒತ್ತಡ ಹಾಕಿರುವ ಪರಿಣಾಮ ಅವರು ಸಕರಾತ್ಮಕವಾಗಿ ಸ್ಪಂದಿಸಿ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಫಲಾನುಭವಿಗಳನ್ನು ಆಯ್ಕೆ ಮಾಡುವ ಭರವಸೆ ನೀಡಿದ್ದಾರೆ. ಆದರೆ ಹಿಂದೆ ಆಯ್ಕೆಯಾದ ಯಾವುದೇ ಪಕ್ಷದ ಫಲಾನುಭವಿಗಳನ್ನು ಬದಲಾವಣೆ ಮಾಡುವುದಿಲ್ಲ. ಹೊಸ ಅರ್ಜಿ ನೀಡಿದವರಿಗೂ ಸೌಲಭ್ಯ ಕೊಡಿಸುವ ಪ್ರಯತ್ನ ಮಾಡುತ್ತೇವೆ ಎಂದರು.

ದೇವರಾಜು ಅಭಿವೃದ್ಧಿ ನಿಗಮದಿಂದ ಈಗಾಗಲೇ 102 ಕೊಳವೆ ಬಾವಿ ಕೊರೆಯಲಾಗಿದೆ. ಬಹಳಷ್ಟು ರೈತರು ತಮ್ಮ ಜನೀನುಗಳಲ್ಲಿ ನೀರು ಹರಿದ ಪರಿಣಾಮ ಸಂತಸದಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬದಲಾವಣೆ ತರುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದು ಎಂದರು.

ಜಿಲ್ಲಾ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಸುನಿಲ್ ಮಾತನಾಡಿ. 2021-22 ಮತ್ತು 23 ನೇ ಸಾಲಿನಲ್ಲಿ ಪರಿಶಿಷ್ಠ ಜಾತಿ ನಿಗಮಗಳಡಿ ಒಟ್ಟು 32 ಫಲಾನುಭವಿಗಳಿಗೆ ಕೊಳವೆ ಬಾವಿ ಮಂಜೂರಾಗಿದ್ದು, ಒಟ್ಟು ಸರ್ಕಾರದಿಂದ 3.50 ಲಕ್ಷ ನೀಡುವ ಜೊತೆ ಉಚಿತ ಪಂಪ್‌ಸೆಟ್, ವಿದ್ಯುತ್ ಸಂಪರ್ಕ ನೀಡಲಾಗುವುದು ಎಂದರು.

ಫಲಾನುಭವಿ ಬಿ.ಕೆ.ಹೊಸೂರು ಸೋಮಶೇಖರ್ ಮಾತನಾಡಿ, ಕಡೂರು ಕ್ಷೇತ್ರದಲ್ಲಿ ಈ ಬಾರಿ ರೈತನ ಮಗನನ್ನು ಗೆಲ್ಲಿಸಿದಕ್ಕೆ ನಮ್ಮಂತ ಬಡವರಿಗೆ ಇಂತಹ ಯೋಜನೆಗಳನ್ನು ಪಡೆಯಲು ಸಹಾಯವಾಗಿದೆ. ಬರಪೀಡಿದ ಕಡೂರು ತಾಲೂಕಿನ ರೈತರು ಇಂತಹ ಯೋಜನೆಗಳ ಮೂಲಕ ಕೊಂಚ ನಿಟ್ಟುಸಿರು ಬಿಡು ವಂತಾಗಿದೆ ಎಂದರು.

ಪುರಸಭೆ ಸದಸ್ಯ ಬಿ.ಕೆ.ಶಶಿಧರ್, ಕಾಂಗ್ರೆಸ್‌ನ ರಾಧ, ಗುತ್ತಿಗೆದಾರ ಪಾರ್ವತಿ ಬೋರ್‌ವೆಲ್‌ನ ಹೊಗರೇಹಳ್ಳಿ ನವೀನ್, ಗ್ರಾಮಸ್ಥರಾದ ರಮೇಶ್, ಪ್ರಕಾಶ್, ಶ್ರೀನಿವಾಸ್, ರವಿಕುಮಾರ್, ಓಂಕಾರಮೂರ್ತಿ, ರಾಜಪ್ಪ, ಸೇರಿದಂತೆ ಮತ್ತಿತರರು ಇದ್ದರು.3 ಬೀರೂರು 1

ಬೀರೂರು ಸಮೀಪದ ಬಿ.ಕೆ.ಹೊಸೂರು ಗ್ರಾಮದ ಸಮೀಪದ ಡಾ.ಅಂಬೇಡ್ಕರ್ ಅಭಿವೃದ್ದಿ ನಿಗಮದಿಂದ 2021-22, ಹಾಗೂ 23 ನೇ ಸಾಲಿನ ಗಂಗಾ ಕಲ್ಯಾಣ ಯೋಜನೆಯಡಿ ಆಯ್ಕೆಯಾದ ಫಲಾನುಭವಿನಗಳ ಜಮೀನಿನಲ್ಲಿ ಬುಧವಾರ ಕೊಳವೆ ಬಾವಿ ಕೊರೆಯುವುದಕ್ಕೆ ಶಾಸಕ ಕೆ.ಎಸ್.ಆನಂದ್ ಚಾಲನೆ ನೀಡಿದರು .ಜಿಲ್ಲಾ ವ್ಯವಸ್ಥಾಪಕ ಸುನಿಲ್ ಇದ್ದರು.