ಸಾರಾಂಶ
ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ರಾಜ್ಯದ ಜನತೆಗೆ ಯಾವುದೇ ಭದ್ರತೆ ಇಲ್ಲ ಎಂದು ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ ಆರೋಪಿಸಿದರು.ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ ವಿರುದ್ಧ ಪೊನ್ನಂಪೇಟೆ ತಾಲೂಕು ಆಡಳಿತ ಕಚೇರಿಯಲ್ಲಿ ವಿರಾಜಪೇಟೆ ಬಿಜೆಪಿ ಮಂಡಲ ನಡೆಸಿದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು. ರಾಜ್ಯ ಸರ್ಕಾರಕ್ಕೆ ಸಾಮಾನ್ಯ ಜನರ ಬಗ್ಗೆ ಯಾವುದೇ ಕಾಳಜಿ ಇಲ್ಲ. ಅವರ ಜೀವದ ಬಗ್ಗೆ ಒಂದಿಷ್ಟು ಗೌರವವಿಲ್ಲ. ಹೀಗಾಗಿ ಐಪಿಎಲ್ ಪಂದ್ಯಾಟದ ವಿಜೇತ ಸಂಭ್ರಮದಲ್ಲಿ 11 ಯುವಕರು ಜೀವ ಕಳೆದುಕೊಳ್ಳಬೇಕಾದಂತ ಪರಿಸ್ಥಿತಿ ಎದುರಾಯಿತು. ಸರ್ಕಾರದ ಭದ್ರತೆಯ ವೈಫಲ್ಯ ಮತ್ತು ಬೇಜವಾಬ್ದಾರಿತನವೇ ಈ ಘಟನೆಗೆ ಮೂಲ ಕಾರಣ ಎಂದು ಹೇಳಿದರು. ನೈತಿಕ ಹೊಣೆ ಹೊತ್ತು ರಾಜ್ಯದ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ರಾಜಿನಾಮೆ ನೀಡುವ ಮೂಲಕ ಈ ಘಟನೆಯಿಂದ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು. ಸರ್ಕಾರಕ್ಕೆ ಮುಂದಿನ ಚುನಾವಣೆಗೆ ಮತದಾರರನ್ನು ಸೆಳೆಯುವ ಆಸಕ್ತಿಯಷ್ಟೇ ಉಳಿದುಕೊಂಡಿದೆ. ಹೀಗಾಗಿಯೇ ಐಪಿಎಲ್ ಪಂದ್ಯಾಟದ ವಿಜಯ ಸಂಭ್ರಮವನ್ನು ಆಚರಿಸಲು ಮುಂದಾಗಿದೆ.ಯಾವುದೇ ಸೂಕ್ಷ್ಮ ವ್ಯವಸ್ಥೆಗಳನ್ನ ಮಾಡಿಕೊಳ್ಳದೆ ಏಕಾಏಕಿ ನಿರ್ಧಾರ ತೆಗೆದುಕೊಂಡ ಫಲವಾಗಿ ಕಪ್ಪು ಚುಕ್ಕಿ ರಾಜ್ಯಕ್ಕೆ ಅಂಟಿಕೊಂಡಿದೆ. ಆದರೆ, ಅಮಾಯಕ ಅಧಿಕಾರಿಗಳ ತಲೆದಂಡ ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದ ಅವರು ಇಂತಹ ಸರ್ಕಾರದ ನಡೆಯಿಂದ ಮುಜುಗರ ಪಟ್ಟುಕೊಳ್ಳಬೇಕಾದ ಅವಸ್ಥೆ ಬಂದಿದೆ. ರಾಜ್ಯ ಸರ್ಕಾರಕ್ಕೆ ತನ್ನ ತಪ್ಪಿನ ಅರಿವಿದ್ದರೆ, ಈ ಬಗ್ಗೆ ಜನತೆಯಲ್ಲಿ ನಿಜವಾಗಿ ಕ್ಷಮೆ ಕೇಳುವುದಾದರೆ ಅವರು ರಾಜಿನಾಮೆಗಳನ್ನು ನೀಡಲಿ ಎಂದು ಒತ್ತಾಯಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಜಿಲ್ಲಾ ಭಾರತೀಯ ಜನತಾ ಪಾರ್ಟಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಬಿಜೆಪಿಯ ಇತರ ಪ್ರಮುಖರೊಂದಿಗೆ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ನಂತರ, ತಹಸಿಲ್ದಾರ್ ಮೋಹನ್ ಕುಮಾರ್ ಅವರಿಗೆ ರಾಜ್ಯ ಸರ್ಕಾರದ ವೈಫಲ್ಯ ಆಡಳಿತದ ಬಗ್ಗೆ, ಅಸಮಾಧಾನ ವ್ಯಕ್ತಪಡಿಸಿ ಅಮಾಯಕ ಅಧಿಕಾರಿಗಳ ಅಮಾನತ್ತನ್ನು ಖಂಡಿಸಿ ಮನವಿ ಪತ್ರ ಸಲ್ಲಿಸಿ ಪ್ರತಿಭಟನೆ ನಡೆಸಿದರು. ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಮಾಚಿಮಾಂಡ ಸುವಿನ್ ಗಣಪತಿ ಮುಂದಾಳತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಕುಟ್ಟಂಡ ಅಜಿತ್ ಕರಂಬಯ್ಯ, ಮುದ್ದಿಯಡ ಮಂಜು ಗಣಪತಿ, ಮತ್ರಂಡ ಕಬೀರ್ ದಾಸ್, ಮಾಪಂಗಡ ಯಮುನಾ ಚಂಗಪ್ಪ, ಎಂ.ಎಂ ರವೀಂದ್ರ, ಸೇರಿದಂತೆ ಶಕ್ತಿ ಕೇಂದ್ರ ಪ್ರಮುಖರು, ಬೂತ್ ಅಧ್ಯಕ್ಷರು, ಸದಸ್ಯರು ಇದ್ದರು.