ಮಾದಿಗರಿಗೆ ಜಾತಿ ಹೆಸರು ಹೇಳಲು ಮುಜುಗರ ಸಲ್ಲ: ಭಾಸ್ಕರ ಪ್ರಸಾದ

| Published : Apr 19 2025, 12:41 AM IST

ಮಾದಿಗರಿಗೆ ಜಾತಿ ಹೆಸರು ಹೇಳಲು ಮುಜುಗರ ಸಲ್ಲ: ಭಾಸ್ಕರ ಪ್ರಸಾದ
Share this Article
  • FB
  • TW
  • Linkdin
  • Email

ಸಾರಾಂಶ

ಒಳ ಮಿಸಲಾತಿ ಹೋರಾಟ ಸಮಿತಿ ವತಿಯಿಂದ ರಟ್ಟೀಹಳ್ಳಿ ಪಟ್ಟಣದ ಪ್ರಾಥಮಿಕ ಶಾಲಾ ಆವರಣದಲ್ಲಿ ಜಿಲ್ಲಾ ಮಟ್ಟದ ಬೃಹತ್ ಒಳ ಮೀಸಲಾತಿ ಹೋರಾಟ ಮತ್ತು ಜನಜಾಗೃತಿ ಸಮಾವೇಶ ನಡೆಯಿತು.

ರಟ್ಟೀಹಳ್ಳಿ: ಮಾದಿಗ ಸಮುದಾಯದ ಜನ ತಮ್ಮ ಜಾತಿ ಹೆಸರು ಹೇಳಿಕೊಳ್ಳಲು ಮುಜುಗರ ಪಟ್ಟಿಕೊಳ್ಳುತ್ತಿರುವುದು ಸರಿಯಲ್ಲ ಎಂದು ರಾಜ್ಯ ಒಳ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಆರ್. ಭಾಸ್ಕರ ಪ್ರಸಾದ ಹೇಳಿದರು.

ಒಳ ಮಿಸಲಾತಿ ಹೋರಾಟ ಸಮಿತಿ ವತಿಯಿಂದ ಪಟ್ಟಣದ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಜಿಲ್ಲಾ ಮಟ್ಟದ ಬೃಹತ್ ಒಳ ಮೀಸಲಾತಿ ಹೋರಾಟ ಮತ್ತು ಜನಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಮಾದಿಗ ಎಂದು ಹೇಳಿಕೊಳ್ಳಲಾಗದ ಕೆಟ್ಟ ಪರಿಸ್ಥಿತಿ ಸಮಾಜದಲ್ಲಿ ನಿರ್ಮಾಣವಾಗಿದೆ. ಸಮಾಜ ಬಾಂಧವರು ಕೀಳರಿಮೆ ಬಿಟ್ಟು ಎದೆತಟ್ಟಿ ಹೇಳಿಕೊಳ್ಳಬೇಕು. ಮಾದಿಗ ಸಮಾಜ ಎಂಬುದು ನಮ್ಮೆಲ್ಲರ ಘನತೆ, ಸ್ವಾಭಿಮಾನ. ಆದ್ದರಿಂದ ಎಲ್ಲ ಸಮಾಜದ ಜನರ ಜತೆ ಬೆರೆತು ಸಹಬಾಳ್ವೆ ನಡೆಸೋಣ ಎಂದರು.

ನಾವು ಜಾತಿವಾದಿಗಳಲ್ಲ, ನಮ್ಮ ಜಾತಿಯ ಸ್ವಾಭಿಮಾನ ಗಟ್ಟಿಗೊಳಿಸುವ ಕಾರ್ಯ ಮಾಡಲಾಗುತ್ತಿದೆ. ನಮಗೆ ಸಿಗಬೇಕಾದ ಒಳ ಮೀಸಲಾತಿ ಹಕ್ಕು ಪಡೆದು ಮುಂದಿನ ಯುವ ಪೀಳಿಗೆಯ ಉದ್ಧಾರಕ್ಕಾಗಿ ನಮ್ಮ ಹೋರಾಟ ಎಂದರು. ಬಡ್ತಿ ನೇಮಕಾತಿ ಆದೇಶ ತಡೆಯದಿದ್ದರೆ ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಸಿದರು.

ಪ್ರಭುರಾಜ ಕೊಡ್ಲಿ ಮಾತನಾಡಿ, ಒಳಮೀಸಲಾತಿಗಾಗಿ ಬಿ.ಆರ್. ಭಾಸ್ಕರ ಪ್ರಸಾದ ನೇತೃತ್ವದಲ್ಲಿ ರಾಜ್ಯಾದ್ಯಂತ ಕ್ರಾಂತಿಕಾರಿ ಒಳಮೀಸಲಾತಿ ಹೋರಾಟದ ರಥಯಾತ್ರೆ ಹಮ್ಮಿಕೊಂಡಿದ್ದೇವೆ. ನಮ್ಮ ಹೋರಾಟಕ್ಕೆ ಕೆಲವರು ಜಾತಿಯ ಬಣ್ಣ, ರಾಜಕೀಯ ಪ್ರೇರಿತ ಎಂದು ಬಿಂಬಿಸಲು ಹೊರಟಿದ್ದು, ಜೂ. 9ರಂದು ಬೆಂಗಳೂರಿನಲ್ಲಿ ನಡೆಯುವ ಬೃಹತ್ ಹೋರಾಟದಲ್ಲಿ ಒಳ ಮೀಸಲಾತಿ ಪಡೆದು, ಹೋರಾಟದ ಬಗ್ಗೆ ಕೀಳಾಗಿ ಮಾತನಾಡುವವರಿಗೆ ತಕ್ಕ ಉತ್ತರ ನೀಡಲಾಗುವುದು ಎಂದರು.

ಕಾರ್ಯಕ್ರಮಕ್ಕೂ ಮುನ್ನ ಮುಂಜಾನೆ 10 ಗಂಟೆಗೆ ಐಬಿ ಸರ್ಕಲ್‍ನಿಂದ ನೂರಾರು ಮಹಿಳೆಯರಿಂದ ಪೂರ್ಣ ಕುಂಭ ಹಾಗೂ ಕ್ರಾಂತಿಕಾರಿ ಒಳ ಮೀಸಲಾತಿ ಹೋರಾಟದ ರಥಯಾತ್ರೆ ಆರಂಭವಾಗಿ ಭಗತ್‍ಸಿಂಗ ವೃತ್ತ, ಮಹಾಲಕ್ಷ್ಮೀ ಸರ್ಕಲ್, ಸಂಗೊಳ್ಳಿ ರಾಯಣ್ಣ ವೃತ್ತ, ಹಳೇ ಬಸ್‌ ಸ್ಟ್ಯಾಂಡ್‌ ಸರ್ಕಲ್ ಮೂಲಕ ಕಾರ್ಯಕ್ರಮದ ವೇದಿಕೆ ತಲುಪಿತು.

ತಾಲೂಕು ಒಳ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಹನುಮಂತಪ್ಪ ಗಾಜೇರ ಅಧ್ಯಕ್ಷತೆ ವಹಿಸಿದ್ದರು. ಕೆ.ಆರ್. ಉಮೇಶ, ಮಾಲತೇಶ ಹುಲಭಿಕೊಂಡ, ಮಾಸೂರ ಗ್ರಾಪಂ ಅಧ್ಯಕ್ಷೆ ಪ್ರಮೀಳಾ ಮೇಗಳಮನಿ, ದೇವರಾಜ ನಾಗಣ್ಣನವರ, ಶಂಭಣ್ಣ ಗೂಳಪ್ಪನವರ, ರುದ್ರಗೌಡ ಪಾಟೀಲ್, ಮಲ್ಲೇಶ ಮೆಣಸಿನಾಳ, ಡಾ. ಪಿ. ನಾಗೇಂದ್ರ, ಕುಮಾರ ದ್ಯಾವಣ್ಣನವರ, ಆನಂದ ಎಂ.ಎಂ. ಇದ್ದರು.