- ವಿಶ್ವದ ಸಮಸ್ಯೆಗೆ ಮಾರ್ಗದರ್ಶನ ನೀಡುವ ಶಕ್ತಿ ಭಾರತಕ್ಕಿದೆ: ರಘುನಂದನ್‌ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ವಿಶ್ವದ ಸಾಕಷ್ಟು ಜ್ವಲಂತ ಸಮಸ್ಯೆಗಳಿಗೆ ಮಾರ್ಗದರ್ಶನ ನೀಡುವ ಅದ್ಭುತ ಸಾಮರ್ಥ್ಯ ಭಾರತಕ್ಕಿದ್ದು, ಕಾಲಕಾಲಕ್ಕೆ ಉಂಟಾಗುವ, ಎದುರಾಗುವ ಸಮಸ್ಯೆಗಳಿಗೆ ಉತ್ತರ ಕೊಡಲು ಹಿಂದೂ ಸಮಾಜವೂ ಸಿದ್ಧವಾಗಬೇಕು ಎಂದು ಪ್ರಜ್ಞಾ ಪ್ರವಾಹದ ಅಖಿಲ ಭಾರತ ಟೋಳಿ ಸದಸ್ಯ ರಘುನಂದನ್ ತಿಳಿಸಿದರು.

ನಗರದ ದಾವಣಗೆರೆ- ಹರಿಹರ ಅರ್ಬನ್ ಬ್ಯಾಂಕ್‌ ಸಮುದಾಯ ಭವನದಲ್ಲಿ ಶನಿವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ಧಿ ವರ್ಷಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಪ್ರಮುಖ ನಾಗರೀಕರ ಗೋಷ್ಠಿಯಲ್ಲಿ ಮುಖ್ಯ ವಕ್ತಾರರಾಗಿ ಅವರು ಮಾತನಾಡಿದರು.

ಹಿಂದೂ ರಾಷ್ಟ್ರವಾಗಿದ್ದ ಭಾರತವು ಹಿಂದೊಮ್ಮೆ ವಿಶ್ವ ಗುರುವಾಗಿದ್ದನ್ನು ಮರೆಯುವಂತಿಲ್ಲ. ಜಗತ್ತಿನ ನಾನಾ ಸಮಸ್ಯೆಗೆ ಮಾರ್ಗದರ್ಶನ ನೀಡುವ ಶಕ್ತಿ ಇಂದಿಗೂ ಭಾರತಕ್ಕಿದೆ. ಸಮಸ್ಯೆಗಳ ನಡುವೆಯೂ ಜಗತ್ತು ಭಾರತೀಯತೆಯನ್ನು ಮೆಚ್ಚಿಕೊಳ್ಳುವ ಪರಿಸ್ಥಿತಿ ಇದೆ. ದೇಶದಲ್ಲಿ ಮತಾಂತರ, ಜಿಹಾದಿ ಭಯೋತ್ಪಾದನೆ, ಜಾತಿ ಸಂಘರ್ಷ, ಭ್ರಷ್ಟಾಚಾರ ಹೀಗೆ ಹಲವಾರು ಸಮಸ್ಯೆಗಳೂ ಇವೆ. ದೇಶದಲ್ಲಿ ಟೀಕೆ ಮಾಡುವವರಿಗೇನೂ ಕೊರತೆಯೇ ಇಲ್ಲ. ಆದರೆ, ಸಮಾಜದ ದೋಷ, ತಪ್ಪುಗಳನ್ನು ಗುರುತಿಸಿ ಸರಿಪಡಿಸುವ ಪ್ರಬುದ್ಧರ ಅಗತ್ಯವೂ ಇದೆ. ಅದಕ್ಕಾಗಿ ವೈಚಾರಿಕ ಸ್ಪಷ್ಟತೆ, ವ್ಯವಾಹಾರಿಕ ಸಕ್ರಿಯತೆ ಬೇಕು ಎಂದು ಅವರು ಹೇಳಿದರು.


ಧರ್ಮವು ಯಾವುದೇ ಪೂಜಾ ಪದ್ಧತಿಗೆ ಸೀಮಿತವಲ್ಲ. ನಾವು ಒಂದು ಪುಸ್ತಕದ ರಿಲಿಜನ್ ಜನರಲ್ಲ, ಧರ್ಮದ ಜನರಾಗಿದ್ದೇವೆ. ಆಚಾರ- ವಿಚಾರಗಳ ಭಿನ್ನತೆ ನಡುವೆಯೂ ಶಾಶ್ವತ ಮೌಲ್ಯಗಳನ್ನು ಹೊಂದಿರುವ ಸಮಗ್ರ ಜೀವನ ಪದ್ಧತಿಯೇ ಹಿಂದೂ ಧರ್ಮವಾಗಿದೆ. ನಮ್ಮದು ಸಾವಿಲ್ಲದ ಸನಾತನ ಪರಂಪರೆಯಾಗಿದೆ. ಎಲ್ಲರನ್ನೂ ನಮ್ಮವರನ್ನಾಗಿ ನೋಡುವುದು ಹಿಂದೂ ಸಮಾಜ. ಎಲ್ಲರನ್ನೂ ಜೋಡಿಸುವ ಬಂಧುತ್ವವೇ ಹಿಂದುತ್ವ ಎಂದು ಅವರು ತಿಳಿಸಿದರು.

ನಗರ ವಾಸಿಗಳಷ್ಟೇ ಬುದ್ಧಿವಂತರೆಂಬುದು ಪಾಶ್ವಾತ್ಯರ ಕಲ್ಪನೆ. ಸ್ವತಃ ಧರ್ಮ ಮಾರ್ಗದಲ್ಲಿ ನಡೆದು, ಇನ್ನೊಬ್ಬರಿಗೆ ಮಾರ್ಗದರ್ಶನ ಮಾಡುವವರೇ ಪ್ರಬುದ್ಧರು. ಅಂತಹ ಪ್ರಬುದ್ಧ ಸಮಾಜದಿಂದ ಹಿಂದೂ ಸಂಸ್ಕೃತಿ ಉಳಿಸುವ ಹಾಗೂ ಧರ್ಮವನ್ನು ಬೆಳೆಸುವ ಕೆಲಸವಾಗಬೇಕು ಎಂದು ರಘುನಂದನ್‌ ತಿಳಿಸಿದರು.

ಆರೆಸ್ಸೆಸ್ ಜಿಲ್ಲಾ ಸಂಘ ಚಾಲಕ ಟಿ.ಎಸ್.ಜಯರುದ್ರೇಶ ವೇದಿಕೆಯಲ್ಲಿದ್ದರು.

- - -

-13ಕೆಡಿವಿಜಿ9: ಕಾರ್ಯಕ್ರಮದಲ್ಲಿ ರಘುನಂದನ್ ಮಾತನಾಡಿದರು. ಆರೆಸ್ಸೆಸ್ ಸಂಘ ಚಾಲಕ ಟಿ.ಎಸ್.ಜಯರುದ್ರೇಶ ಇದ್ದರು.