ವೀರಶೈವ ಮುಖಂಡರಲ್ಲಿ ಒಗ್ಗಟ್ಟಿಲ್ಲ -ಶಾಸಕ ಪಾಟೀಲ್

| Published : Jun 30 2025, 12:34 AM IST

ಸಾರಾಂಶ

ವೀರಶೈವ ಸಮಾಜದ ನಾಯಕರನ್ನು ನೋಡಿದರೆ ನಮ್ಮನ್ನು ಬಿಟ್ಟು ಯಾರು ಈ ರಾಜ್ಯದಲ್ಲಿ ಆಡಳಿತ ಮಾಡಲಿಕ್ಕೆ ಸಾಧ್ಯ ಆಗಬಾರದು. ಆದರೆ ನಮ್ಮಲ್ಲಿ ಒಗ್ಗಟ್ಟಿಲ್ಲ ಎಂದು ಕರ್ನಾಟಕ ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ವಿಷಾಧಿಸಿದರು.

ಗಜೇಂದ್ರಗಡ: ವೀರಶೈವ ಸಮಾಜದ ನಾಯಕರನ್ನು ನೋಡಿದರೆ ನಮ್ಮನ್ನು ಬಿಟ್ಟು ಯಾರು ಈ ರಾಜ್ಯದಲ್ಲಿ ಆಡಳಿತ ಮಾಡಲಿಕ್ಕೆ ಸಾಧ್ಯ ಆಗಬಾರದು. ಆದರೆ ನಮ್ಮಲ್ಲಿ ಒಗ್ಗಟ್ಟಿಲ್ಲ ಎಂದು ಕರ್ನಾಟಕ ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ವಿಷಾಧಿಸಿದರು.

ಪಟ್ಟಣದ ಮೈಸೂರು ಮಠದಲ್ಲಿ ಭಾನುವಾರ ಗಜೇಂದ್ರಗಡ-ಉಣಚಗೇರಿ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ೧೩ನೇ ವರ್ಷದ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.ದೇಶ, ರಾಜ್ಯದ ರಾಜಕೀಯ ವ್ಯವಸ್ಥೆಯಲ್ಲಿ ಪ್ರಧಾನಿ ಮೋದಿ ಹಾಗೂ ಸಿಎಂ ಸಿದ್ದರಾಮಯ್ಯ ಅವರು ಜಾತಿಗಣತಿ ಮಾಡುವ ವ್ಯವಸ್ಥೆಯಲ್ಲಿದ್ದಾರೆ. ನಾಗಮೋಹನ ವರದಿ ಪ್ರಕಾರ ಕೇಳಿದಾಗ ಬಹಳ ಖೇದ ಅನಿಸಿದೆ. ರಾಜ್ಯದಲ್ಲಿ ೧.೭೦ ಕೋಟಿ ಇರುವ ವೀರಶೈವ ಲಿಂಗಾಯತರು ೭೦ ಲಕ್ಷಕ್ಕೆ ನಾವು ಬಂದು ನಿಂತಿದ್ದೇವೆ. ಇದರಲ್ಲಿ ನಮ್ಮದು ತಪ್ಪಿರಬಹುದು. ಸಮಾಜ ಇಂತಹ ಸಭೆಗಳನ್ನು ಮಾಡುವಾಗ ಚಿಂತನೆಯನ್ನು ಮಾಡುವುದು ಅವಶ್ಯ. ವೀರಶೈವ ಸಮಾಜದ ನಾಯಕರನ್ನು ನೋಡಿದರೆ ನಮ್ಮನ್ನು ಬಿಟ್ಟು ಯಾರು ರಾಜ್ಯದಲ್ಲಿ ಆಡಳಿತ ಮಾಡಲಿಕ್ಕೆ ಸಾಧ್ಯ ಆಗಬಾರದು. ಆದರೆ ನಮ್ಮಲ್ಲಿ ಒಗ್ಗಟ್ಟಿಲ್ಲ ಎಂದ ಅವರು, ಶ್ರೀಗಳು ನಮಗೆ ಮಾರ್ಗದರ್ಶನ ಮಾಡಬೇಕು. ನಾವೆಲ್ಲ ಒಂದಾಗಬೇಕಿದೆ. ನಾನು ಎಲ್ಲಿ, ಹೋದಲ್ಲಿ ಜಗದ್ಗುರುಗಳು ಇರುತ್ತಾರೆಯೋ ಅಲ್ಲಿ ಗುರು ವಿರಕ್ತರು ಮೊದಲು ಒಂದಾಗಿರಿ ಎಂದು ಮಾತನಾಡುತ್ತೇನೆ. ನಾವು ಸಮಾಜದ ಎಲ್ಲರೂ ಕೂಡಿ ಒಂದಾಗಿ, ಗಣತಿಯಲ್ಲಿ ನಾವು ಏನು ಬರೆಸಬೇಕು ಎನ್ನುವ ನಿರ್ಣಯಕ್ಕೆ ಮಾರ್ಗದರ್ಶನ ಮಾಡಿ ವ್ಯವಸ್ಥೆಯನ್ನು ಮಾಡಬೇಕಿದೆ ಎಂದರು.ಸಮಾಜದ ಅಧ್ಯಕ್ಷ ಯು.ಎಫ್. ಮೆಣಸಗಿ, ಮುಖಂಡರಾದ ಬಿ.ಎಸ್. ಶೀಲವಂತರ, ವೀರಣ್ಣ ಶೆಟ್ಟರ, ಡಾ.ಬಿ.ವಿ. ಕಂಬಳ್ಯಾಳ ಹಾಗೂ ಅಂದಪ್ಪ ಜವಳಿ ಮಾತನಾಡಿದರು. ಈ ವೇಳೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ನಡೆಯಿತು.

ಕುದರಿಮೋತಿ ಮೈಸೂರು ಸಂಸ್ಥಾನ ಮಠದ ವಿಜಯಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗೌರವಾಧ್ಯಕ್ಷ ಡಾ. ಬಿ.ವಿ. ಕಂಬಳ್ಯಾಳ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಎ.ಸಿ. ಮುನವಳ್ಳಿ, ಬಿ.ಎ. ಬೆಲ್ಲದ, ಎಂ.ಜಿ. ಸಂಗಳದ, ಎಸ್.ಎಸ್. ವಾಲಿ, ಮಹಿಳಾ ಘಟಕದ ಗೌರವಾಧ್ಯಕ್ಷೆ ಸುವರ್ಣಾ ನಂದಿಹಾಳ, ಅಧ್ಯಕ್ಷೆ ಕೀರ್ತಿ ಕೊಟಗಿ, ಯುವ ಘಟಕ ಅಧ್ಯಕ್ಷ ಅವಿನಾಶ ಕೊಟಗಿ, ಅಂದಪ್ಪ ಸಂಕನೂರ, ಭರತ ನೂಲ್ವಿ, ಮಂಜುನಾಥ ಅಂಗಡಿ, ಮುತ್ತಣ್ಣ ಚಟ್ಟೇರ, ಮಹಾಂತೇಶ ಅರಳಿ, ಮಹಾಂತೇಶ ಮಳಗಿ, ಹುಚ್ಚಪ್ಪ ಹಾವೇರಿ, ಮಹಾಂತೇಶ ಪಟ್ಟಣಶೆಟ್ಟರ, ಸಿದ್ದು ಬಳಿಗೇರ, ಶರಣಪ್ಪ ರಂಜಣಗಿ ಸೇರಿ ಇತರರು ಇದ್ದರು.

ಗಜೇಂದ್ರಗಡದ ಬಣಜಿಗ ಸಮಾಜದ ಹಿರಿಯರು ಹಿಂದಿನಿಂದಲೂ ನನಗೆ ರಾಜಕೀಯವಾಗಿ ಮಾರ್ಗದರ್ಶನ ಮಾಡಿದ್ದರಿಂದ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯವಾಗಿದೆ. ನನ್ನ ಮೇಲೆ ಹೆಚ್ಚಿನ ಜವಾಬ್ದಾರಿಯಿದ್ದು, ಸಮಾಜದ ಅಭಿವೃದ್ಧಿಗೆ ಮೊದಲ ಹಂತದಲ್ಲಿ ೨೫ ಲಕ್ಷ ಬಿಡುಗಡೆ ಮಾಡುವೆ ಎಂದು ಶಾಸಕ ಜಿ.ಎಸ್‌. ಪಾಟೀಲ ಹೇಳಿದರು.