ಬಸವೇಶ್ವರ ಪುತ್ಥಳಿ ಬಗ್ಗೆ ಯಾವುದೇ ಗೊಂದಲ ಬೇಡ

| Published : Aug 30 2024, 01:00 AM IST

ಸಾರಾಂಶ

ನಗರದ ಜಿಲ್ಲಾಡಳಿತ ಭವನದ ಮುಂದೆ ಬಸವೇಶ್ವರರ ಪುತ್ಥಳಿ ಸ್ಥಾಪನೆಗೆ ಯಾವುದೇ ಗೊಂದಲಬೇಡ. ಇದಕ್ಕೆ ಎಲ್ಲರ ಸಮ್ಮತಿ ಇದ್ದು, ಯಾವುದೇ ಕಾನೂನು ತೊಡಕುಗಳು ಬರುವುದಿಲ್ಲ ಎಂದು ಸಂವಿಧಾನ ಹಕ್ಕುಗಳ ಸಂರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಅರಕಲವಾಡಿ ನಾಗೇಂದ್ರ ಹೇಳಿದರು.

ಚಾಮರಾಜನಗರ: ನಗರದ ಜಿಲ್ಲಾಡಳಿತ ಭವನದ ಮುಂದೆ ಬಸವೇಶ್ವರರ ಪುತ್ಥಳಿ ಸ್ಥಾಪನೆಗೆ ಯಾವುದೇ ಗೊಂದಲಬೇಡ. ಇದಕ್ಕೆ ಎಲ್ಲರ ಸಮ್ಮತಿ ಇದ್ದು, ಯಾವುದೇ ಕಾನೂನು ತೊಡಕುಗಳು ಬರುವುದಿಲ್ಲ ಎಂದು ಸಂವಿಧಾನ ಹಕ್ಕುಗಳ ಸಂರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಅರಕಲವಾಡಿ ನಾಗೇಂದ್ರ ಹೇಳಿದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬುದ್ಧ, ಬಸವ, ಅಂಬೇಡ್ಕರ್‌ ಚಿಂತನೆಗಳು ಒಂದೇ ಆಗಿರುವುದರಿಂದ ಡಾ.ಬಿ.ಆರ್.ಅಂಬೇಡ್ಕರ್‌ ಪುತ್ಥಳಿಯ ಎದುರು ಬಸವೇಶ್ವರ ಪುತ್ಥಳಿ ಸ್ಥಾಪನೆಯಿಂದ ಯಾವುದೇ ಸಂಘರ್ಷವಾಗುವುದಿಲ್ಲ ಎಂದರು.ಪುತ್ಥಳಿ ವಿಚಾರದಲ್ಲಿ ರಾಜಪ್ರಭುತ್ವ, ಪ್ರಜಾಪ್ರಭುತ್ವ ಎಂಬ ಗೊಂದಲವೇ ಇಲ್ಲ. ಪ್ರಜಾಪ್ರಭುತ್ಬಕ್ಕೆ ನಾಂದಿ ಹಾಡಿದವರೇ ಬಸವಣ್ಣನವರು, 12ನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪಿಸಿ ಎಲ್ಲಾ ಶೋಷಿತ ಸಮಾಜವನ್ನು ಒಂದೆಡೆ ಸೇರಿಸಿ, ಮೌಢ್ಯಗಳನ್ನು ಧಿಕ್ಕರಿಸಿ, ಸಮಾನತೆಯ ಸಮಾಜಕ್ಕಾಗಿ ಶ್ರಮಿಸಿದವರು. ಅಂತಹ ಮಾನವತಾವಾದಿ ಬಸವಣ್ಣನವರ ಪುತ್ಥಳಿ ಸ್ಥಾಪನೆಗೆ ಗೊಂದಲ ಮೂಡಿಸುವುದು ಸರಿಯಲ್ಲ ಎಂದು ಹೇಳಿದರು. ಮಂಡ್ಯ ಸಿ.ಎಂ.ಕೃಷ್ಣ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್‌ ಪುತ್ಥಳಿ ಎದುರು ಬಸವೇಶ್ವರ ಪುತ್ಥಳಿ ನಿರ್ಮಾಣ ಮಾಡಿದರೆ ಸಂಘರ್ಷಕ್ಕೆ ಎಡೆಮಾಡಿ ಕೊಡುತ್ತದೆ ಎಂದಿದ್ದಾರೆ, ಜಿಲ್ಲೆಯ ಜನರು ಅನ್ಯೂನ್ಯತೆಯಿಂದ ಬುದ್ಧ, ಬಸವ, ಅಂಬೇಡ್ಕರ್‌ ಅವರ ತತ್ವಾದರ್ಶಗಳನ್ನು ಪಾಲಿಸುತ್ತಿದ್ದು ಈ ಪ್ರತಿಮೆ ಸ್ಥಾಪನೆಯಿಂದ ಮಹಾನ್‌ ನಾಯಕರ ಗೌರವ ಹೆಚ್ಚಾಗುತ್ತದೆ ಎಂದು ತಿಳಿಸಿದರು.ಕೃಷ್ಣ ಅವರು ಹೇಳಿದಂತೆ ಅಲ್ಲಿ ಸ್ಥಾಪನೆಯಾಗುತ್ತಿರುವುದು ಕತ್ತಿ, ಗುರಾಣಿ ಹಿಡಿದ ಬಸವೇಶ್ವರರ ಪುತ್ಥಳಿಯಲ್ಲ. ಅಶ್ವಾರೂಢ ಆಶೀರ್ವಾದ ಮಾಡುತ್ತಿರುವ ವಿನ್ಯಾಸದ ಪ್ರತಿಮೆ. ಇದು ಈಗಾಗಲೇ ಮಹಾರಾಷ್ಟ್ರದಲ್ಲಿ ಅಂತಿಮ ಹಂತದಲ್ಲಿದೆ ಎಂದು ತಿಳಿಸಿದರು.ಕೋರ್ಟ್ ಆದೇಶಕ್ಕೂ ಇದಕ್ಕೂ ಸಂಬಂಧವಿಲ್ಲ, ಕೋರ್ಟ್ ಆದೇಶ 2012ರಲ್ಲಿ ಆಗಿರುವುದು, ಇದು 2011ರ ಬಸವೇಶ್ವರ ಜಯಂತಿ ಆಚರಣೆ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಿ, ಎಲ್ಲ ಸಮಾಜದ ಮುಖಂಡರು ಸಮ್ಮತಿ ವ್ಯಕ್ತಪಡಿಸಿದ್ದಾರೆ. ಮೇ 5 ರಂದು ಶ್ರೀಬಸವೇಶ್ವರ ಪುತ್ಥಳಿ ಶಿಲಾನ್ಯಾಸವನ್ನು ಅಂದಿನ ಅಬಕಾರಿ ಇಲಾಖೆ ಸಚಿವ ರೇಣುಕಾಚಾರ್ಯ ನೆರವೇರಿಸಿದ್ದಾರೆ ಎಂದರು.ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಶ್ರೀಬಸವೇಶ್ವರ ಪುತ್ಥಳಿ ಸ್ಥಾಪನೆಗೆ ₹45 ಲಕ್ಷಗಳಿಗೆ ಅಂದಾಜು ಪಟ್ಟಿಯಾಗಿ ಈಗಾಗಲೇ ಸರ್ಕಾರ ಅನುದಾನ ಬಿಡುಗಡೆ ಮಾಡಿ ಅಶ್ವಾರೂಢ ಆಶೀರ್ವಾದ ಮಾಡುತ್ತಿರುವ ವಿನ್ಯಾಸದ ಪ್ರತಿಮೆಯನ್ನು ಸ್ಥಾಪನೆ ಮಾಡಲಾಗುತ್ತದೆ. ಇದರಿಂದ ಯಾವುದೇ ಕೋರ್ಟ್ ಆದೇಶ ಉಲ್ಲಂಘನೆಯಾಗಿಲ್ಲ ಎಂದು ಹೇಳಿದರು. 6ನೇ ಶತಮಾನದ ಬುದ್ಧ, 12ನೇ ಶತಮಾನದ ಬಸವಣ್ಣನವರ ಚಿಂತನೆಗಳನ್ನು 20ನೇ ಶತಮಾನದ ಡಾ.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಅಳವಡಿಸಿ ಜಾರಿಗೊಳಿಸಿದ್ದಾರೆ, ಇಂತಹ ಮಹಾನ್ ನಾಯಕರ ವಿಚಾರದಲ್ಲಿ ಯಾವುದೇ ಗೊಂದಲ ಸೃಷ್ಟಿಸುವುದು ಬೇಡ. ಇವರು ಇಡೀ ಜಗತ್ತಿಗೆ ಸಮಾನತೆಯ ಸಂದೇಶ ಸಾರಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಸಂಚಾಲಕರಾದ ವಕೀಲ ರಾಜೇಂದ್ರ, ಮೂಡಳ್ಳಿ ಮೂರ್ತಿ, ಹಂಗಳ ಸಿದ್ದಯ್ಯ, ಅರಕಲವಾಡಿ ಮಹದೇವ, ಪುಟ್ಟಸ್ವಾಮಿ, ರಾಮಸಮುದ್ರ ಶಿವಣ್ಣ ಇದ್ದರು.