ಕನಕಗಿರಿ: ತಾಲೂಕು ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಿ ನೀರು ಪೂರೈಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಹಸೀಲ್ದಾರ ವಿಶ್ವನಾಥ ಮುರುಡಿ ಸೂಚಿಸಿದರು.

ಅವರು ಬುಧವಾರ ತಾಪಂ ಸಭಾಂಗಣದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಹಮ್ಮಿಕೊಂಡಿದ್ದ ಪಿಡಿಒಗಳ ಸಭೆಯಲ್ಲಿ ಮಾತನಾಡಿದರು.

ತಾಲೂಕಿನ ನವಲಿ,ಸಂಕನಾಳ, ಚಿಕ್ಕಡಂಕನಕಲ್ ಸೇರಿದಂತೆ ನಾನಾ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದು ಕಂಡು ಬಂದಿದೆ.ತಾಲೂಕು ವ್ಯಾಪ್ತಿಯ ಪೈಕಿ ಯಥೇಚ್ಛವಾಗಿ ಇರುವ ನೀರಿನ ಸಮಸ್ಯೆ ನೀಗಿಸಲು ಮುಂದಾಗಬೇಕು. ಸ್ಥಳೀಯವಾಗಿ ಬೊರವೆಲ್ ಹೊಂದಿರುವವರನ್ನು ದಾನರೂಪದಲ್ಲಿ ಪಡೆದು ನೀರು ಪೂರೈಸುವಂತಾಗಬೇಕು. ಬೊರವೆಲ್ ಇಲ್ಲ ಎಂದಾದಲ್ಲಿ ಬಾಡಿಗೆ ಪಡೆದು ನೀರು ಸರಬರಾಜು ಮಾಡಬೇಕು. ಎಲ್ಲೆಲ್ಲಿ ನೀರಿನ ಸಮಸ್ಯೆ ಎಂಬುದನ್ನು ಪಂಚಾಯತ ಮಟ್ಟದ ಅಧಿಕಾರಿಗಳು ಗುರುತಿಸಿ ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದರು.

ನಂತರ ತಾಪಂ ಕಾರ್ಯ ನಿರ್ವಾಹಕಾಧಿಕಾರಿ ರಾಜಶೇಖರ ಮಾತನಾಡಿ, ಯಾವ ಗ್ರಾಮದಲ್ಲಿ ತೀವ್ರ ನೀರಿನ ಸಮಸ್ಯೆ ಇದೆ ಎಂಬುದನ್ನು ತಕ್ಷಣಕ್ಕೆ ತಾಪಂಗೆ ವರದಿ ಸಲ್ಲಿಸಬೇಕು. ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣ,ಪೈಪಲೈನ್ ಕಾಮಗಾರಿಗಳಿಗೆ ಹಾಗೂ ಒಎಚ್ಟಿ ಟ್ಯಾಂಕಗಳ ದುರಸ್ಥಿಗೆ ಅಂದಾಜು ಪಟ್ಟಿ ತ್ವರಿತವಾಗಿ ಸಲ್ಲಿಸಬೇಕು. ನೀರಿನ ಸಮಸ್ಯೆ ಕ್ರಮವಹಿಸದೆ ಬೇಜವಾಬ್ದಾರಿ ತೋರಿದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಗ್ರೇಡ್-2 ತಹಸೀಲ್ದಾರ ಮಹಾಂತಗೌಡ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಬಸವರಾಜ ಸಂಕನಾಳ, ಕೊಟ್ರಯ್ಯಸ್ವಾಮಿ ಯರಡೋಣ, ಲಕ್ಷ್ಮಣ್, ಹನುಮಂತಪ್ಪ, ಯು.ಮಲ್ಲಿಕಾರ್ಜುನ, ಪವನ್ ಸೇರಿದಂತೆ ಕಂದಾಯ ನೀರಿಕ್ಷಕರು, ಗ್ರಾಮ ಆಡಳಿತಾಧಿಕಾರಿಗಳು ಇದ್ದರು. ಅ