ಶಿಕ್ಷಣ ಅರ್ಹತೆ ಜೊತೆಗೆ ವೃತ್ತಿ ಕೌಶಲವು ಇರಲಿ

| Published : Sep 28 2025, 02:01 AM IST

ಶಿಕ್ಷಣ ಅರ್ಹತೆ ಜೊತೆಗೆ ವೃತ್ತಿ ಕೌಶಲವು ಇರಲಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ: ಸ್ಪರ್ಧಾತ್ಮಕ ಯುಗದಲ್ಲಿ ಶೈಕ್ಷಣಿಕ ಅರ್ಹತೆ ಜೊತೆಗೆ ವಿವಿಧ ವೃತ್ತಿ ಕೌಶಲ್ಯ ಮೈಗೂಡಿಸಿಕೊಳ್ಳುವ ಅಗತ್ಯವಿದೆ ಎಂದು ಧಾರವಾಡ ಕೃಷಿ ವಿವಿ ಸಂಪನ್ಮೂಲ ವ್ಯಕ್ತಿ ಡಾ.ವೀಣಾ ಜಾಧವ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ: ಸ್ಪರ್ಧಾತ್ಮಕ ಯುಗದಲ್ಲಿ ಶೈಕ್ಷಣಿಕ ಅರ್ಹತೆ ಜೊತೆಗೆ ವಿವಿಧ ವೃತ್ತಿ ಕೌಶಲ್ಯ ಮೈಗೂಡಿಸಿಕೊಳ್ಳುವ ಅಗತ್ಯವಿದೆ ಎಂದು ಧಾರವಾಡ ಕೃಷಿ ವಿವಿ ಸಂಪನ್ಮೂಲ ವ್ಯಕ್ತಿ ಡಾ.ವೀಣಾ ಜಾಧವ ಹೇಳಿದರು.

ನಗರದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪೇಪರ್‌ ಮರು ಉತ್ಪಾದನಾ ಘಟಕದಿಂದ ಪ್ರಧಾನ ಮಂತ್ರಿ ರಾಷ್ಟ್ರೀಯ ಉಚ್ಚತರ ಅಭಿಯಾನ ಹಾಗೂ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಅನುದಾನದಡಿ ಪೇಪರ್‌ ಪುನರುತ್ಪಾದನಾ ತಂತ್ರಜ್ಞಾನ ಕುರಿತು ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು. ಕಾಗದ ಮರು ಉತ್ಪಾದನಾ ತಂತ್ರಜ್ಞಾನ ವೃತ್ತಿ ಕೌಶಲ್ಯಗಳಲ್ಲಿ ಒಂದು. ಪರಿಸರಕ್ಕೆ ಪೂರಕವಾಗಿರುವಂಥದ್ದು. ನಿರುಪಯುಕ್ತ ಕಾಗದಗಳನ್ನು ಬಳಸಿ ವಿವಿಧ ಉಪಯುಕ್ತ ವಸ್ತುಗಳನ್ನು ಸಿದ್ಧಪಡಿಸಲು ಸಾಧ್ಯ. ಅವುಗಳಿಂದ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬಹುದೆಂದು ತಿಳಿಸಿದರು.

ಧಾರವಾಡದ ಶ್ರೀ ಸಾಯಿ ಎಂಟರ್ಪ್ರೈಸಸ್ ಜ್ಯೋತಿ ಹಿರೇಮಠ ಮಾತನಾಡಿ, ಇಂದು ಮಹಿಳೆಯರಿಗೆ ಸ್ವಂತ ಉದ್ದಿಮೆಗಳನ್ನು ಆರಂಭಿಸಲು ಹಲವು ಅವಕಾಶಗಳಿವೆ. ಸರ್ಕಾರವು ಈ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ನಮ್ಮಲ್ಲಿ ವೃತ್ತಿ ಕೌಶಲ್ಯಗಳಿದ್ದರೆ, ಸ್ವಂತ ಉದ್ದಿಮೆಯನ್ನು ಆರಂಭಿಸಿ ಸ್ವಾವಲಂಬಿಯಾಗಿ ಬದುಕಬಹುದು. ಉದ್ಯೋಗಾವಕಾಶಗಳನ್ನು ಸೃಷ್ಟಿಸಬಹುದೆಂದು ಮಾಹಿತಿ ನೀಡಿದರು.

ವಿಶ್ವವಿದ್ಯಾನಿಲಯದ ಪೇಪರ್‌ ಪುನರುತ್ಪಾದನಾ ಘಟಕ ಸಿಬ್ಬಂದಿ ರಮೇಶ ಹಿರೇಮಠ ವಿದ್ಯಾರ್ಥಿನಿಯರಿಗೆ ತ್ಯಾಜ್ಯ ಕಾಗದಗಳಿಂದ ಕಡತಗಳನ್ನು ತಯಾರಿಸುವ ಕೌಶಲ್ಯದ ಕುರಿತು ಮಾಹಿತಿ ನೀಡಿದರು. ಕಡತ ನಿರ್ಮಾಣ ಪ್ರಕ್ರಿಯೆಯನ್ನು ತಿಳಿಸಿದರು. ಕಾರ್ಯಾಗಾರದಲ್ಲಿ ವಿದ್ಯಾರ್ಥಿನಿಯರಿಗೆ ನಿರುಪಯುಕ್ತ ಕಾಗದಗಳನ್ನು ಬಳಸಿ ತಯಾರಿಸಿದ ಕೈಚೀಲ, ಫೈಲ್ ಹಾಗೂ ಇತರ ಕರಕುಶಲ ಮಾದರಿಗಳನ್ನು ಪ್ರದರ್ಶಿಸಲಾಯಿತು. ಕೈಚೀಲ ತಯಾರಿಸುವ ಪ್ರಾಯೋಗಿಕ ತರಬೇತಿ ನೀಡಲಾಯಿತು.

ಕುಲಸಚಿವ ಶಂಕರಗೌಡ ಸೋಮನಾಳ ಕಾರ್ಯಾಗಾರ ಉದ್ಘಾಟಿಸಿದರು. ಮೌಲ್ಯಮಾಪನ ಕುಲಸಚಿವ ಪ್ರೊ.ಬಸವರಾಜ ಲಕ್ಕಣ್ಣವರ ಅತಿಥಿಗಳಾಗಿ ಭಾಗವಹಿಸಿದ್ದರು. ಪೇಪರ್‌ ಪುನರುತ್ಪಾದನಾ ಘಟಕದ ಸಂಯೋಜಕ ಡಾ.ಅಕ್ಷಯ ಯಾರ್ದಿ ಪ್ರಾಸ್ತಾವಿಕವಾಗಿ ಮಾತನಾಡಿದರು.