ಸಂಕ್ರಾತಿ ಬಳಿಕ ಪಿಎಂ ಬದಲಾವಣೆ ಆಗುತ್ತಾರೆ

| Published : Jan 07 2025, 12:16 AM IST

ಸಾರಾಂಶ

ಶಿವಮೊಗ್ಗ: ಮಕರ ಸಂಕ್ರಾಂತಿ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಬದಲಾವಣೆ ಆಗುತ್ತಾರೆ ಎಂಬ ಬಿಜೆಪಿ ನಾಯಕರು ಹೇಳಬಹುದು. ಆದರೆ, ಮಕರ ಸಂಕ್ರಾತಿ ನಂತರ ಪ್ರಧಾನಮಂತ್ರಿ ಬದಲಾವಣೆ ಆಗುತ್ತಾರೆ ಎಂಬ ಮಾಹಿತಿ ಇದೆ ಎಂದು ಸಚಿವ ಸಂತೋಷ್‌ ಲಾಡ್‌ ಲೇವಡಿ ಮಾಡಿದರು.

ಶಿವಮೊಗ್ಗ: ಮಕರ ಸಂಕ್ರಾಂತಿ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಬದಲಾವಣೆ ಆಗುತ್ತಾರೆ ಎಂಬ ಬಿಜೆಪಿ ನಾಯಕರು ಹೇಳಬಹುದು. ಆದರೆ, ಮಕರ ಸಂಕ್ರಾತಿ ನಂತರ ಪ್ರಧಾನಮಂತ್ರಿ ಬದಲಾವಣೆ ಆಗುತ್ತಾರೆ ಎಂಬ ಮಾಹಿತಿ ಇದೆ ಎಂದು ಸಚಿವ ಸಂತೋಷ್‌ ಲಾಡ್‌ ಲೇವಡಿ ಮಾಡಿದರು.

ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಹೇಳಲಿ ಬಿಡಿ. ನಾನು ಕೂಡ ಮಕರ ಸಂಕ್ರಾಂತಿಗೆ ಮೋದಿ ಬದಲಾವಣೆ ಆಗುತ್ತಾರೆ ಎಂದು ಹೇಳುವೆ. ಇಂತಹ ಹೇಳಿಕೆಗಳಿಗೆಲ್ಲಾ ಅರ್ಥವಿರುತ್ತದೆಯೇ ಎಂದು ಮರು ಪ್ರಶ್ನೆ ಮಾಡಿದರು.ಬಸ್ ಪ್ರಯಾಣ ದರ ಏರಿಕೆಗೆ ಸಂಬಂಧಿಸಿದಂತೆ ಬಿಜೆಪಿ ಆರೋಪದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, 2020ರಲ್ಲಿ ಬಿಜೆಪಿ ಸರ್ಕಾರ ಬಸ್ ಪ್ರಯಾಣ ದರವನ್ನು ಶೇ.15 ರಷ್ಟು ಹೆಚ್ಚಿಸಿತ್ತು. ಈಗ ನಾವು ಅಷ್ಟೇ ಹೆಚ್ಚಿಸಿದ್ದೇವೆ. ಇದು ಹೇಗೆ ಹೆಚ್ಚಳ ಆಗುತ್ತದೆ. ಅವರೂ ಹೆಚ್ಚಳ ಮಾಡಿದರೆ ನ್ಯಾಯ. ನಾವು ಹೆಚ್ಚಳ ಮಾಡಿದರೆ ಅನ್ಯಾಯವೇ? ಶಕ್ತಿ ಯೋಜನೆಗೂ ಬಸ್ ದರ ಏರಿಕೆಗೂ ಸಂಬಂಧವೇ ಇಲ್ಲ ಎಂದರು.ಬೇರೆ ಯಾವುದೇ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲಿ ಹೆಚ್ಚು ಬಸ್‌ಗಳಿವೆ. ಅಲ್ಲದೇ, ಬಸ್ ಪ್ರಯಾಣದರ ಏರಿಕೆಗೆ ಪೆಟ್ರೋಲ್, ಡೀಸೆಲ್ ದರ ಏರಿಕೆಯೂ ಕಾರಣವಾಗುತ್ತದೆ. ಕೇಂದ್ರ ಸರ್ಕಾರ ಮನಸ್ಸು ಮಾಡಿದರೆ ಲೀಟರ್ ಗೆ 40 ರು.ಗೆ ನೀಡಬಹುದಲ್ಲವೇ? ಏಕೆ ನೀಡುತ್ತಿಲ್ಲ. ಯಾವುದೇ ದರ ಏರಿಕೆಗೆ ಕೇಂದ್ರವೇ ಕಾರಣ ಎಂದು ದೂರಿದರು.ಕರ್ನಾಟಕದ ಆರ್ಥಿಕ ಸ್ಥಿತಿ ಉತ್ತಮವೇ ಆಗಿದೆ. ಪ್ರಧಾನಿ ಮೋದಿ ಅವರು ಮುಖ್ಯಮಂತ್ರಿಯಾಗಿ ಆಳಿದ ಗುಜರಾತ್ ರಾಜ್ಯದ ಕಥೆ ಇವತ್ತು ಏನಾಗಿದೆ. ಜಿಡಿಪಿಯಲ್ಲಿ ಕರ್ನಾಟಕ ಮೊದಲನೇ ಸ್ಥಾನ ಪಡೆದಿದೆ. ಇಂದು ನಿರುದ್ಯೋಗ ಸಮಸ್ಯೆ ಹೆಚ್ಚಿದೆ. ಡಾಲರ್ ಬೆಲೆ ಏರಿದೆ. ಭಾರತದ ಸಾಲ ಸ್ವಾತಂತ್ರ್ಯ ಬಂದ ಇತಿಹಾಸದಲ್ಲಿಯೇ ಅತಿ ಹೆಚ್ಚು ಮೋದಿ ಸರ್ಕಾರದಲ್ಲಿ ಆಗಿದೆ. 55 ಲಕ್ಷ ಕೋಟಿ ರು. ಇದ್ದ ಸಾಲ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ 200 ಲಕ್ಷ ಕೋಟಿ ರು. ದಾಟಿದೆ. ಬರೀ ಮಾತನಾಡುವುದಲ್ಲ, ಬಿಜೆಪಿಯವರು ಅಂಕಿ ಅಂಶಗಳ ಜೊತೆ ನನ್ನೊಂದಿಗೆ ಮಾತನಾಡಲಿ ಎಂದು ಸವಾಲು ಹಾಕಿದರು.ಗುತ್ತಿಗೆದಾರ ಸಚಿನ್ ಪಾಂಚಾಲ್ ಆತ್ಮಹತ್ಯೆ ಪ್ರಕರಣವನ್ನು ಬಿಜೆಪಿಯವರು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಪ್ರಿಯಾಂಕ್ ಖರ್ಗೆಯವರ ಹೆಸರು ಇದೆ ಎಂದು ಹೇಳುತ್ತಾರೆ. ಡೆತ್ ನೋಟ್‌ನಲ್ಲಿ ಅವರ ಹೆಸರು ಎಲ್ಲಿದೆ? ಯಾರಾದರೂ ನೋಡಿದ್ದಾರೆಯೇ? ಈಗಾಗಲೇ ಡೆತ್‌ನೋಟ್‌ನಲ್ಲಿ ಇರುವವರ ಹೆಸರುಗಳನ್ನು ಆಧರಿಸಿ ಕ್ರಮ ಕೈಗೊಳ್ಳಲಾಗಿದೆ ಎಂದರು.ನಕಲಿ ಕಾರ್ಡ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಾರ್ಡ್‌ಗಳನ್ನು ಕೊಡುವ ಏಜೆನ್ಸಿಗಳೇ ಹುಟ್ಟಿಕೊಂಡಿವೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ನಕಲಿ ಕಾರ್ಡ್‌ಗಳನ್ನು ಗುರುತಿಸಲು ಈಗಾಗಲೇ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಕಾರ್ಮಿಕರ ಕಾರ್ಡ್‌ಗಳ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ನಾನು ಗಮನಿಸಿದ್ದೇನೆ. ಈ ಬಗ್ಗೆ ದೂರುಗಳು ಕೂಡ ಬಂದಿವೆ. ಇದಕ್ಕಾಗಿ ಅಂಬೇಡ್ಕರ್ ಸೇವಾ ಕೇಂದ್ರವನ್ನು ತೆರೆಯಲಾಗುವುದು. ಸುಮಾರು 43 ಕೇಂದ್ರಗಳ ಮೂಲಕ ಸಂಚಾರಿ ವ್ಯಾನ್‌ಗಳ ಮೂಲಕವೇ ಕಟ್ಟಡ ನಿರ್ಮಾಣಗಳ ಸ್ಥಳಕ್ಕೇ ಹೋಗಿ ಪರಿಶೀಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಒಂದು ಪಕ್ಷ ಅಲ್ಲಿ ಕೆಲಸ ಮಾಡುವವರಿಗೆ ಕಾರ್ಡ್ ಇಲ್ಲದಿದ್ದರೆ ಕಾರ್ಡ್ ಕೊಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ. ನಕಲಿ ಕಾರ್ಡ್ ಮಾಡಿಕೊಡುವ ಏಜೆನ್ಸಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಏನೇ ಆದರೂ ಕಾರ್ಮಿಕರಿಗೆ ನೀಡುವ ಕಾರ್ಡ್‌ಗಳು ಸರ್ಕಾರದಲ್ಲಿ ನೋಂದಣಿಯಾಗಿರಲೇ ಬೇಕಾಗುತ್ತದೆ ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯೆ ಬಲ್ಕೀಷ್ ಬಾನು, ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ರಮೇಶ್, ಪ್ರಮುಖರಾದ ಎಸ್.ಟಿ.ಹಾಲಪ್ಪ, ಚಂದ್ರಭೂಪ್ಲ, ಎಸ್.ಟಿ.ಚಂದ್ರಶೇಖರ್, ಇಸ್ಮಾಯಿಲ್ ಖಾನ್, ಎಚ್.ಸಿ.ಯೋಗೀಶ್, ಕಲೀಂ ಪಾಷ, ಶಿವಕುಮಾರ್ ಮೊದಲಾದವರಿದ್ದರು.