ಮುಡಾ ಸಂಬಂಧ ಎಲ್ಲ ದಾಖಲೆ ನೋಡಿದ್ದೇನೆ - ಸಿದ್ದರಾಮಯ್ಯ ಜೈಲಿಗೆ ಹೋಗುವ ಪರಿಸ್ಥಿತಿ ಬರಲಿದೆ : ಶೆಟ್ಟರ್‌

| Published : Aug 20 2024, 01:03 AM IST / Updated: Aug 20 2024, 12:50 PM IST

Jagadish shettar
ಮುಡಾ ಸಂಬಂಧ ಎಲ್ಲ ದಾಖಲೆ ನೋಡಿದ್ದೇನೆ - ಸಿದ್ದರಾಮಯ್ಯ ಜೈಲಿಗೆ ಹೋಗುವ ಪರಿಸ್ಥಿತಿ ಬರಲಿದೆ : ಶೆಟ್ಟರ್‌
Share this Article
  • FB
  • TW
  • Linkdin
  • Email

ಸಾರಾಂಶ

  ಮುಡಾ ಪ್ರಕರಣ ಸಂಬಂಧ ಎಲ್ಲ ದಾಖಲೆ ನಾನು ನೋಡಿದ್ದೇನೆ. ಇದರಲ್ಲಿ ನಿಯಮ ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ. ಸಿಎಂ ಸಿದ್ದರಾಮಯ್ಯ ಅ‍ವರೇ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಸಿದ್ದರಾಮಯ್ಯ ಜೈಲಿಗೆ ಹೋಗುವ ಪರಿಸ್ಥಿತಿ ಬರಲಿದೆ. ಅವರಿಗೆ ಶಿಕ್ಷೆಯಾಗಲಿದೆ ಎಂದು ಸಂಸದ ಜಗದೀಶ ಶೆಟ್ಟರ್‌ ಹೇಳಿದರು.

 ಬೆಳಗಾವಿ :  ಮುಡಾ ಪ್ರಕರಣ ಸಂಬಂಧ ಎಲ್ಲ ದಾಖಲೆ ನಾನು ನೋಡಿದ್ದೇನೆ. ಇದರಲ್ಲಿ ನಿಯಮ ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ. ಸಿಎಂ ಸಿದ್ದರಾಮಯ್ಯ ಅ‍ವರೇ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಸಿದ್ದರಾಮಯ್ಯ ಜೈಲಿಗೆ ಹೋಗುವ ಪರಿಸ್ಥಿತಿ ಬರಲಿದೆ. ಅವರಿಗೆ ಶಿಕ್ಷೆಯಾಗಲಿದೆ ಎಂದು ಸಂಸದ ಜಗದೀಶ ಶೆಟ್ಟರ್‌ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಕಾನೂನು ರೀತಿ ಹೋರಾಟ ಮಾಡುತ್ತೇವೆ ಎಂದಿದ್ದರು. ರಾಜ್ಯಪಾಲರು ತನಿಖೆಗೆ ಆದೇಶ ಕೊಟ್ಟಿದ್ದಾರೆ. ತನಿಖೆ ಎದುರಿಸಿ ನಾನು ಸಾಚಾ ಎಂದು ಸಾಬೀತು ಮಾಡಬೇಕು. ರಾಜ್ಯಪಾಲರನ್ನು ಅಪಮಾನ ಮಾಡುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಸಾಂವಿಧಾನಿಕ ಹುದ್ದೆಗೆ ಕುಂದು ತರುವ ರೀತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕಾನೂನು ತಜ್ಞರ ಸಲಹೆ ಪಡೆದು ರಾಜ್ಯಪಾಲರು ನಿರ್ಧಾರ ಮಾಡಿದ್ದಾರೆ. ರಾಜ್ಯಪಾಲರ ನಿರ್ಣಯಗಳನ್ನು ಅನೇಕರು ಪ್ರಶ್ನೆ ಸಹ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ಹಿರಿಯ ವಕೀಲರು ಬೆಂಗಳೂರಿಗೆ ಬಂದಿದ್ದಾರೆ. ರಾಜ್ಯಪಾಲರ ವಿರುದ್ಧ ಕೆಟ್ಟದಾಗಿ ನಡೆದುಕೊಳ್ಳುವುದು ಸರಿಯಲ್ಲ. ದಲಿತ ಸಮಾಜದ ವ್ಯಕ್ತಿ ಅಪಮಾನ ‌ಮಾಡುವ ಕೆಲಸ ಮಾಡಬಾರದು. ಸಂವಿಧಾನದ ಹುದ್ದೆಯಲ್ಲಿರುವ ವ್ಯಕ್ತಿಗೆ ಕಾಂಗ್ರೆಸ್ ಅಪಮಾನ ಮಾಡುತ್ತಿದೆ ಎಂದು ದೂರಿದರು.

ಮುಡಾ ಪ್ರಕರಣ ಸಂಬಧ ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕಿತ್ತು. ಆದರೆ, ಈವರೆಗೂ ಅವರು ರಾಜೀನಾಮೆ ನೀಡುತ್ತಿಲ್ಲ. ಸಿಎಂ ಹುದ್ದೆಯಲ್ಲಿರುವ ಸಿದ್ದರಾಮಯ್ಯ ಅನರ್ಹ. ರಾಜ್ಯಪಾಲರ ನಿರ್ಧಾರಗಳು ಸುಪ್ರೀಂಕೋರ್ಟ್‌ ಮತ್ತು ಹೈಕೋರ್ಟ್‌ನಲ್ಲಿ ಅಂಗೀಕಾರವಾಗಿವೆ ಎಂದರು.

ಮಾಜಿ ಸಚಿವರಾದ ಮುರುಗೇಶ ನಿರಾಣಿ ಮತ್ತು ಶಶಿಕಲಾ ಜೊಲ್ಲೆ ಯಾವುದೇ ಅಧಿಕಾರದಲ್ಲಿಲ್ಲ. ಎಚ್‌.ಡಿ.ಕುಮಾರಸ್ವಾಮಿ ಕೇಂದ್ರ ಸಚಿವರಾಗಿದ್ದಾರೆ. ವಿಧಾನಸಭೆಯಲ್ಲಿ ಅಂದಿನ ವಿರೋಧ ಪಕ್ಷದ ನಾಯಕರು ಏಕೆ ಮಾತನಾಡಲಿಲ್ಲ. ಮುಡಾ ಕೇಸಿನ ಎಲ್ಲ ಫೈಲ್ ನೋಡಿದ್ದೇನೆ. ಕೃಷಿ ಭೂಮಿ ಎಂದು ತೋರಿಸಿದ್ದಾರೆ. ಚುನಾವಣೆ ಅಫಡಿವೀಟ್​​ನಲ್ಲಿ ಕಡಿಮೆ ಹಣ ತೋರಿಸಿದ್ದಾರೆ. ಸಿದ್ದರಾಮಯ್ಯ ಮುಡಾ ಪ್ರಕರಣದಲ್ಲಿ ತಪ್ಪು ಮಾಡಿದ್ದಾರೆ. 50:50 ಅನುಪಾತದಲ್ಲಿ ಭೂಮಿ ಹಂಚಿಕೆ ವಿಚಾರದಲ್ಲಿ ಖರೀದಿಸಿದ ಭೂಮಿಯಲ್ಲಿ ಹಂಚಿಕೆ ಮಾಡಬೇಕಿತ್ತು. ಕಾನೂನು ಉಲ್ಲಂಘನೆ ಮಾಡಿ ಬೇರೆ ಕಡೆ 14 ಕಡೆ ಜಾಗ ತೆಗೆದುಕೊಂಡಿದ್ದಾರೆ. ಮುಂದೆ ಜೈಲಿಗೆ ಹೋಗುವ ಪರಿಸ್ಥಿತಿ ಸಿದ್ದರಾಮಯ್ಯಗೆ ಬರಲಿದೆ. ಮುಡಾ ಅಧಿಕಾರಿಗಳು ರಾಜ್ಯ ಸರ್ಕಾರ ಅನುಮತಿ ಇಲ್ಲದೇ ತಾವೇ ಹಂಚಿಕೆ ಮಾಡಿದ್ದಾರೆ.‌ ಆಗ ಬಿಜೆಪಿ ಸರ್ಕಾರದ ಸಚಿವರು ಏನಾದರೂ ಅನುಮತಿ ಕೊಟ್ಟಿದ್ದರೇ ಅದು ಕಾನೂನುಬಾಹಿರ ಆಗುತ್ತಿತ್ತು ಎಂದು ತಿಳಿಸಿದರು.

ಪ್ರಾಸಿಕ್ಯೂಷನ್​ಗೆ ಅನುಮತಿ ಕೊಟ್ಟಿದಕ್ಕೆ ಬಹಳಷ್ಟು ಖುಷಿ ಪಡೋರು ಕಾಂಗ್ರೆಸ್ ನಾಯಕರೇ ಹೆಚ್ಚು. ನಾವು ಸಿದ್ದರಾಮಯ್ಯ ಹಿಂದೆ ಇದ್ದೇವೆ, ಅವರ ಹೋರಾಟಕ್ಕೆ ಬೆಂಬಲಿಸುತ್ತೇವೆ ಎನ್ನುವವರು ಒಳಗೊಳಗೆ ಖುಷಿ ಪಡುವವರೇ ಕಾಂಗ್ರೆಸ್ ನಾಯಕರು. ಅದರ ಪರಿಣಾಮ ಸ್ವಲ್ಪದರಲ್ಲೇ ಗೊತ್ತಾಗುತ್ತದೆ.

- ಜಗದೀಶ ಶೆಟ್ಟರ್‌ ಸಂಸದ