ಸಾರಾಂಶ
-ರೈತರು ನೀರು ಮಿತವಾಗಿ ಬಳಸಲು ಸಚಿವ ದರ್ಶನಾಪುರ ಸಲಹೆ । ಮಳೆ ಚೆನ್ನಾಗಿ ಆಗಿರುವುದರಿಂದ ರೈತರು ನೀರಿಗೆ ಆತಂಕ ಪಡುವ ಅಗತ್ಯವಿಲ್ಲ
ಕನ್ನಡಪ್ರಭ ವಾರ್ತೆ ಶಹಾಪುರಆಲಮಟ್ಟಿ ಡ್ಯಾಮ್ ನಲ್ಲಿ 105 ಟಿಎಂಸಿ, ನಾರಾಯಣಪುರ ಡ್ಯಾಮ್ ನಲ್ಲಿ 17 ರಿಂದ18 ಟಿಎಂಸಿ ನೀರು ಲಭ್ಯತೆ ಇದೆ. ಈ ಭಾಗದ ರೈತರ ಹಿಂಗಾರು ಬೆಳೆಗಳಿಗೆ 80 ಟಿಎಂಸಿ ನೀರು ಸಾಕಾಗುತ್ತದೆ. ರೈತರು ಆತಂಕ ಪಡುವ ಅಗತ್ಯವಿಲ್ಲ. ಈ ಬಾರಿ ಮಳೆ ಚೆನ್ನಾಗಿ ಆಗಿರುವುದರಿಂದ ರೈತರ ಬೆಳೆಗಳಿಗೆ ನೀರಿನ ಕೊರತೆಯಾಗದು ಎಂದು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರು ಹೇಳಿದರು.
ತಾಲೂಕಿನ ಭೀಮರಾಯನ ಗುಡಿಯ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 15 ದಿನಗಳಿಂದಲೂ ಈ ಭಾಗದ ರೈತರು ಹಿಂಗಾರು ಬೆಳೆಗೆ ನೀರು ಕೊಡುವ ಬಗ್ಗೆ ಕೇಳುತ್ತಿದ್ದರು. ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ ಅವರೊಂದಿಗೆ ಮಾತನಾಡಿದ್ದೇನೆ. ಅವರು ಪ್ರಸಕ್ತ ಸಾಲಿನಲ್ಲಿ ರೈತರ ಹಿಂಗಾರು ಬೆಳೆಗಳಿಗೆ ನೀರಿನ ಕೊರತೆಯಾಗದಂತೆ ಕ್ರಮ ವಹಿಸಲಾಗಿದೆ ಎಂದು ತಿಳಿಸಿದ್ದಾರೆ ಎಂದರು.ಕಳೆದ ಬಾರಿ ಮಳೆ ಸರಿಯಾಗಿ ಬಾರದಿದ್ದರಿಂದ ರೈತರ ಹಿಂಗಾರು ಬೆಳೆಗೆ ನೀರಿನ ಸಮಸ್ಯೆ ಉಂಟಾಗಿತ್ತು. ಈ ಸಲ ಮಳೆ ಚೆನ್ನಾಗಿ ಬಂದಿರುವುದರಿಂದ ಆಲಮಟ್ಟಿ ಡ್ಯಾಮಿನಲ್ಲಿ 105 ಟಿಎಂಸಿ ನೀರು ಇದೆ. ನಾರಾಯಣಪುರ ಡ್ಯಾಮಿನಲ್ಲಿ 17 ರಿಂದ 18 ಟಿಎಂಸಿ ನೀರು ಇದೆ. ಹಿಂಗಾರು ಬೆಳೆ ಗಳಿಗೆ 80 ಟಿ.ಎಂ.ಸಿ. ನೀರು ಸಾಕಾಗುತ್ತದೆ. ಕುಡಿಯಲು ಕೈಗಾರಿಕೆಗೆ 40 ಟಿಎಂಸಿ ನೀರು ಸಾಕಾಗುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ವಾರ ಬಂದಿ ಪ್ರಕಾರ ಕಾಲುವೆಗೆ ನೀರು ಬಿಡಲಾಗುವುದು ಎಂದು ಸಚಿವ ದರ್ಶನಾಪುರ ತಿಳಿಸಿದರು.
ನೀರು ಮಿತವಾಗಿ ಬಳಸಲು ಸಲಹೆ: ರೈತರು ತಮ್ಮ ಅವಶ್ಯಕತೆಗೆ ತಕ್ಕಂತೆ ಮಾತ್ರ ನೀರನ್ನು ಮಿತವಾಗಿ ಬಳಸಿಕೊಳ್ಳುವುದು ಈ ಸಮಯದಲ್ಲಿ ಅತಿ ಅವಶ್ಯಕವಾಗಿದೆ. ಉಳಿದ ರೈತರಿಗೂ ನೀರು ಕೊಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ನೀರನ್ನು ವ್ಯರ್ಥವಾಗಿ ಪೋಲು ಮಾಡದೆ, ಅವಶ್ಯಕತೆಗೆ ತಕ್ಕಷ್ಟು ನೀರು ಬಳಕೆ ಮಾಡುವುದು ರೈತರ ಜವಾಬ್ದಾರಿಯು ಆಗಿದೆ ಎಂದರು.ರೈತರು ಪ್ರತಿಸಲ ಹಿಂಗಾರು ಬಿತ್ತನೆ 15 ದಿನ ಮುಂಚಿತವಾಗಿ ಬಿತ್ತನೆ ಮಾಡಿದರೆ ಬೆಳೆಗೆ ಕೊನೆ ಗಳಿಗೆ ನೀರಿನ ಸಮಸ್ಯೆ ಉಂಟಾಗದು. ತಡವಾಗಿ ಬಿತ್ತನೆ ಮಾಡಿದರೆ ಫಸಲು ಕೈಗೆ ಬರುವ ಹೊತ್ತಿಗೆ ನೀರಿನ ಸಮಸ್ಯೆ ಆಗಬಹುದು. ಮಾರ್ಚ್ 2ನೇ ವಾರದವರೆಗೆ ನೀರು ಹರಿಸಲಾಗುತ್ತದೆ. ರೈತರು ಆದಷ್ಟು ಮಾರ್ಚ್ ಕೊನೆಯ ವಾರದಲ್ಲಿ ಬೆಳೆಗಳು ಕೈಗೆ ಬರುವಂತೆ ಬಿತ್ತನೆ ಮಾಡಬೇಕು ಎಂದು ರೈತರಿಗೆ ಸಲಹೆ ನೀಡಿದರು.
....ಬಾಕ್ಸ್ ....- ವಕ್ಫ್ ಆಸ್ತಿ ವಿವಾದ ಇಲ್ಲಿಲ್ಲ : ದರ್ಶನಾಪುರ
ಕನ್ನಡಪ್ರಭ ವಾರ್ತೆ ಶಹಾಪುರಯಾದಗಿರಿ ಜಿಲ್ಲೆಯಲ್ಲಿ ಯಾವುದೇ ವಕ್ಫ್ ಆಸ್ತಿ ವಿವಾದವಿಲ್ಲ, ಇದೆಲ್ಲ ಸುಳ್ಳು ಎಂದು ಹೇಳಿದ ಸಚಿವ ದರ್ಶನಾಪುರ, ನಮ್ಮ ಸರ್ಕಾರ ಬಂದ ಮೇಲೆ ವಕ್ಫ್ ಆಸ್ತಿ ಎಂದು ಪಹಣಿಯಲ್ಲಿ ಸೇರ್ಪಡೆ ಆಗಿರುವುದಿಲ್ಲ. 2017-18 ಮತ್ತು 2020 ರಲ್ಲಿ ಪಹಣಿಯಲ್ಲಿ ವಕ್ಫ್ ಆಸ್ತಿಯೆಂದು ನಮ್ಮದಾಗಿವೆ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಆಗಿವೆ ಎಂದರು. ನ್ಯಾಯಾಲಯದ ಆದೇಶದ ಮೇರೆಗೆ ಕೆಲವೊಂದು ವಕ್ಫ್ ಆಸ್ತಿ ಎಂದು ನಮೂದಾದರೆ ನಾವೇನು ಮಾಡಲು ಬರುವುದಿಲ್ಲ ಅವರು ತಿಳಿಸಿದರು. ಎರಡು ಕಡೆಯಿಂದ ಅಗತ್ಯ ದಾಖಲೆಗಳನ್ನು ತರಿಸಿಕೊಂಡು ದಾಖಲೆ ಪರಿಶೀಲಿಸಿ ಕ್ರಮ ವಹಿಸುವಂತೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
-----....ಕೋಟ್.....1:
ಶಹಾಪುರದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ 19 ಕೋಟಿ ರುಪಾಯಿಗಳ ಅನುದಾನ ಮಂಜೂರು ಆಗಿದೆ. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದ್ದು, ಮುಂದಿನ ದಿನಗಳಲ್ಲಿ ಸ್ಥಳ ನಿಗದಿಗೊಳಿಸಿ, ಆಸ್ಪತ್ರೆ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗುವುದು.- ಶರಣಬಸಪ್ಪಗೌಡ ದರ್ಶನಾಪುರ, ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರು.
------31ವೈಡಿಆರ್8 : ಶರಣಬಸಪ್ಪಗೌಡ ದರ್ಶನಾಪುರ, ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರು.