ದಿನಸಿ ಅಂಗಡಿಯ ಬೀಗ ಒಡೆದು ನಗದು ದೋಚಿದ ಕಳ್ಳರು

| Published : Dec 19 2024, 12:31 AM IST

ಸಾರಾಂಶ

ಕಟ್ಟಿನಕೆರೆ ಮಾರುಕಟ್ಟೆಯ ಒಳಗಿರುವ ದಿನಸಿ ಅಂಗಡಿಯೊಂದರಲ್ಲಿ ಕಳ್ಳರು ಬೀಗ ಒಡೆದು ಒಳಗಿದ್ದ ೧ ಲಕ್ಷದ ೫೦ ಸಾವಿರ ನಗದು ಕಳ್ಳತನ ಮಾಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಅಂಗಡಿಯಲ್ಲಿ ಇನ್ನಿತರ ಬೆಲೆಬಾಳುವ ವಸ್ತುಗಳು ಇದ್ದರೂ ಅವುಗಳನ್ನೆಲ್ಲ ಬಿಟ್ಟು ಕೇವಲ ಹಣವನ್ನು ಮಾತ್ರ ಕಳ್ಳತನ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಈ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮ ವಹಿಸಬೇಕು ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಕಟ್ಟಿನಕೆರೆ ಮಾರುಕಟ್ಟೆಯ ಒಳಗಿರುವ ದಿನಸಿ ಅಂಗಡಿಯೊಂದರಲ್ಲಿ ಕಳ್ಳರು ಬೀಗ ಒಡೆದು ಒಳಗಿದ್ದ ೧ ಲಕ್ಷದ ೫೦ ಸಾವಿರ ನಗದು ಕಳ್ಳತನ ಮಾಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಸಂಗಾತಿ ಪ್ರವಿಜನ್ ಸ್ಟೋರ್‌ನಲ್ಲಿ ಈ ಘಟನೆ ನಡೆದಿದೆ. ಮಂಗಳವಾರ ವ್ಯಾಪಾರ ಎಲ್ಲಾ ಮುಗಿದ ನಂತರ ಬೀಗ ಹಾಕಿಕೊಂಡು ಮನೆಗೆ ತೆರಳಿದ್ದ ವೇಳೆ ಕೈ ಚಳಕ ತೋರಿರುವ ಕಳ್ಳರು ಲಕ್ಷಾಂತರ ರುಪಾಯಿ ಹಣ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾರೆ. ಈ ಬಗ್ಗೆ ಅಂಗಡಿ ಮಾಲೀಕ ವೆಂಕಟೇಶ್ ಮಾತನಾಡಿ, ಮಂಗಳವಾರದಂದು ಎಂದಿನಂತೆ ಅಂಗಡಿ ವ್ಯಾಪಾರ ಮುಗಿದ ನಂತರ ರಾತ್ರಿ ೯ ಗಂಟೆಗೆ ಮನೆಗೆ ತೆರಳಿದ್ದು, ಬೆಳಿಗ್ಗೆ ಎಂದಿನಂತೆ ೭ ಗಂಟೆಗೆ ಬಂದು ನೋಡಲಾಗಿ ಅಂಗಡಿಯ ಒಂದು ಬದಿಯ ಬೀಗ ಒಡೆದಿರುವುದು ಕಂಡು ಬಂದಿದೆ. ಒಳಗೆ ನೋಡಿದರೇ ೧ ಲಕ್ಷದ ೫೦ ಸಾವಿರ ರು. ಹಣ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಈ ಹಿಂದೆ ಯಾವತ್ತೂ ಈ ರೀತಿಯ ಘಟನೆ ನಡೆದಿರಲಿಲ್ಲ. ಇದೇ ಮೊದಲ ಬಾರಿಗೆ ಈ ರೀತಿ ಕಳ್ಳತನ ನಡೆದಿರಲಿಲ್ಲ. ಈ ಬಗ್ಗೆ ಈಗಾಗಲೇ ಹಾಸನ ನಗರ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದರು. ನಗರಾಭಿವೃದ್ಧಿ ಪ್ರಾಧೀಕಾರದ ಮಾಜಿ ನಿರ್ದೇಶಕ ಮೋಹನ್ ಕುಮಾರ್ ಮಾತನಾಡಿ, ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಕಳ್ಳತನ ಪ್ರಕರಣಗಳು ಕಡಿಮೆ. ಆದರೆ ಈ ಅಹಿತಕರ ಘಟನೆ ನಡೆದಿರುವುದು ಬೇಸರ ತಂದಿದೆ. ಎಂದಿನಂತೆ ಮಂಗಳವಾರ ರಾತ್ರಿಯೂ ಸುಮಾರು ೧ ಗಂಟೆಗೆ ಪೊಲೀಸ್ ಬೀಟ್ ನಡೆದಿದೆ ಎಂದು ಅಕ್ಕಪಕ್ಕದವರು ಮಾಹಿತಿ ನೀಡಿದ್ದಾರೆ ಎಂದರು.

ಅಂಗಡಿಯಲ್ಲಿ ಇನ್ನಿತರ ಬೆಲೆಬಾಳುವ ವಸ್ತುಗಳು ಇದ್ದರೂ ಅವುಗಳನ್ನೆಲ್ಲ ಬಿಟ್ಟು ಕೇವಲ ಹಣವನ್ನು ಮಾತ್ರ ಕಳ್ಳತನ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಈ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮ ವಹಿಸಬೇಕು. ಜೊತೆಗೆ ಪ್ರತೀ ಅಂಗಡಿ ಮಾಲೀಕರು ಕೂಡ ತಮ್ಮ ಅಂಗಡಿಗಳಲ್ಲಿ ಸಿ.ಸಿ ಕ್ಯಾಮರಾಗಳನ್ನು ಅಳವಡಿಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.

====

ಫೊಟೋ:

ಕಳ್ಳತನವಾಗಿರುವ ಕಟ್ಟಿನಕೆರೆ ಮಾರುಕಟ್ಟೆ ದಿನಸಿ ಅಂಗಡಿ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.