ಸಾರಾಂಶ
ಯಲ್ಲಾಪುರ ತಾಲೂಕಿನ ಬಾಗಿನಕಟ್ಟಾದ ಜಿಲ್ಲಾ ಕೃಷಿ ಪ್ರಶಸ್ತಿ ಪುರಸ್ಕೃತ ಸುಬ್ರಹ್ಮಣ್ಯ ಗಾಂವ್ಕರ್ ಮನೆಯಂಗಳದಲ್ಲಿ ಇತ್ತೀಚೆಗೆ ಸಮಗ್ರ ತೋಟಗಾರಿಕೆ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮ ನಡೆಯಿತು.
ಯಲ್ಲಾಪುರ: ಅಡಕೆಗೆ ಪರ್ಯಾಯ ಬೆಳೆ ಬೆಳೆಯುವ ಬಗ್ಗೆ ಕೃಷಿಕರು ಯೋಚಿಸಬೇಕು ಎಂದು ಸಹಾಯಕ ತೋಟಗಾರಿಕೆ ನಿರ್ದೇಶಕ ಸತೀಶ ಹೆಗಡೆ ಹೇಳಿದರು.
ಇಲ್ಲಿಯ ಬಾಗಿನಕಟ್ಟಾದ ಜಿಲ್ಲಾ ಕೃಷಿ ಪ್ರಶಸ್ತಿ ಪುರಸ್ಕೃತ ಸುಬ್ರಹ್ಮಣ್ಯ ಗಾಂವ್ಕರ್ ಮನೆಯಂಗಳದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಮಗ್ರ ತೋಟಗಾರಿಕೆ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರೈತರ ಕೈ ಹಿಡಿಯುವ ಉಪ ಬೆಳೆ ರೈತರ ಆರ್ಥಿಕ ಪ್ರಗತಿಗೆ ಕಾರಣವಾಗಬೇಕು. ಕೊಳೆ ರೋಗ ತಡೆಯಲು ವಾರ್ಷಿಕ ನೀರಾವರಿ ಹಂಚಿಕೆ ಕೂಡಾ ಮಹತ್ವದ ಕಾರಣವಾಗಬಲ್ಲದು. ಹವಾಮಾನ ವೈಪರೀತ್ಯಗಳಿಂದ ಬೆಳೆಯ ಇಳುವರಿಯಲ್ಲಿ ಏರುಪೇರಾಗುವುದು ಸಹಜ ಎಂದು ಹೇಳಿದರು.ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ ನಾಯ್ಕ ಮಾತನಾಡಿ, ಇಂದಿನ ಆಧುನಿಕತೆಯ ಸಂದರ್ಭದಲ್ಲಿ ಕೃಷಿ ಕ್ಷೇತ್ರದಲ್ಲಿ ಅಮೂಲಾಗ್ರವಾಗಿ ಬದಲಾವಣೆ ಆಗುತ್ತಿದೆ. ಮಣ್ಣಿನ ಫಲವತ್ತತೆಯನ್ನು ಪರಿಶೀಲಿಸಿ ಪೋಷಕಾಂಶಗಳನ್ನು ಒದಗಿಸಬೇಕು. ನಮ್ಮ ತಾಲೂಕಿನ ವ್ಯಾಪ್ತಿಯಲ್ಲಿ ೧೯೦೦೦ ಹೆಕ್ಟೇರ್ ಪ್ರದೇಶದಲ್ಲಿ ಭತ್ತ, ೯೦೦೦ ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆಯಲಾಗುತ್ತಿದೆ ಎಂದರು.
ಮಾವಿನಮನೆ ಗ್ರಾಪಂ ಅಧ್ಯಕ್ಷ ಸುಬ್ಬಣ್ಣ ಕುಂಟೇಗಾಳಿ, ವಜ್ರಳ್ಳಿಯ ಗ್ರಾಪಂ ಅಧ್ಯಕ್ಷ ಭಗೀರಥ ನಾಯ್ಕ, ಉಪಾಧ್ಯಕ್ಷೆ ಗಂಗಾ ಕೋಮಾರ, ತೋಟಗಾರಿಕೆ ಸಹಾಯಕ ಅಧಿಕಾರಿ ವೇದಾವತಿ ನಾಯ್ಕ, ಆತ್ಮ ಯೋಜನೆಯ ಎಂ.ಜಿ. ಭಟ್ಟ, ಲಲಿತಾ ಹೆಗಡೆ ಉಂಚಳ್ಳಿ, ಸದಾನಂದ ಭಟ್ಟ ಸಾಂದರ್ಭಿಕ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಹಿರಿಯ ರಾಮಕೃಷ್ಣ ಭಟ್ಟ ನೆಲೆಮನೆ ಮಾತನಾಡಿ, ಗ್ರಾಮೀಣ ಪ್ರದೇಶದ ಸಾಧಕರಲ್ಲಿ ಶ್ರಮ ಇರುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಮಾಧ್ಯಮಶ್ರೀ ಪ್ರಶಸ್ತಿ ಪುರಸ್ಕೃತೆ ಪತ್ರಕರ್ತೆ ವಿನುತಾ ಹೆಗಡೆ ಕಾನಗೋಡ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿ, ಶ್ರಮದಿಂದ ಮಾತ್ರ ಯಶಸ್ಸು ಸಿಗಲು ಸಾಧ್ಯ ಎಂದರು. ಶ್ರೇಷ್ಠ ಕೃಷಿಕ ಶ್ರೀಕೃಷ್ಣ ಭಟ್ಟ ಅವರನ್ನು ಅಭಿನಂದಿಸಲಾಯಿತು.ಶ್ರೀಮತಿ ಹೆಗಡೆ ಸಂಗಡಿಗರು ಪ್ರಾರ್ಥಿಸಿದರು. ಸುಬ್ರಹ್ಮಣ್ಯ ಗಾಂವ್ಕರ ಸ್ವಾಗತಿಸಿದರು. ಗಜಾನನ ಭಟ್ಟ ಕಳಚೆ ಪ್ರಾಸ್ತಾವಿಕ ಮಾತನಾಡಿದರು.