ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದ 24 x 7 ಕುಡಿಯುವ ನೀರು ಸರಬರಾಜು ಯೋಜನೆಯು ಅತ್ಯಂತ ಯಶಸ್ವಿಯಾಗಿದ್ದು, ಅರ್ಥ್ ವಾಟರ್ ಫೌಂಡೇಷನ್‌ರವರ ವತಿಯಿಂದ ಆಯೋಜಿಸಿದ್ದ 2026ರ ರಾಷ್ಟ್ರಮಟ್ಟದಲ್ಲಿ ನಡೆದ ಜಾಗತಿಕ ಸುಸ್ಥಿರತೆ ಮತ್ತು ನಾವೀನ್ಯತೆ ಪ್ರಶಸ್ತಿಯಡಿ “ಎಕ್ಸಲೆನ್ಸ್ ಇನ್ ಸಸ್ಟೈನಬಲ್ ಅರ್ಬನ್ ಡ್ರಿಂಕಿಂಗ್ ವಾಟರ್” ನಲ್ಲಿ ಪಾಲ್ಗೊಂಡಿದ್ದು, ಮೊದಲನೇ ಸ್ಥಾನ ಪಡೆದುಕೊಂಡಿದೆ ಎಂದು ಒಳಚರಂಡಿ ಮಂಡಳಿ ವಿಭಾಗದ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.

ಈ ಯೋಜನೆಯ ವಿವರಗಳನ್ನು ಮಾರ್ಚ್ 2024ರಲ್ಲಿ ಬಿಡುಗಡೆಯಾದ ‘ಡ್ರಿಂಕ್ ಫ್ರಮ್ ಟ್ಯಾಪ್ ಸಿಪಿಎಚ್‌ಇಇಒ’ ಕೈಪಿಡಿಯಲ್ಲಿ ಕೇಸ್ ಸ್ಟಡಿಯಾಗಿ ಸಹ ಸೇರಿಸಲಾಗಿದೆ.24x7 ನೀರು ಸರಬರಾಜು ಯೋಜನೆಯ ಅನುಷ್ಠಾನಕ್ಕೂ ಮೊದಲು ವಿತರಣಾ ವ್ಯವಸ್ಥೆಯು ಸುಮಾರು 1970ರ ದಶಕಗಳಿಂದ ಹಂತ ಹಂತವಾಗಿ ಅಳವಡಿಸಲಾದ (ಕ್ಯಾಸ್ಟ್ ಐರನ್) ಮತ್ತು ಪಿವಿಸಿ ಪೈಪ್‌ಲೈನ್‌ಗಳನ್ನು ಒಳಗೊಂಡಿದೆ. ದಶಕಗಳ ಕಾಲದ ಬಳಕೆ ಮತ್ತು ಪೈಪ್‌ಲೈನ್‌ಗಳಲ್ಲಿ ಕಂಡುಬರುತ್ತಿರುವ ವಿಪರೀತ ಸೋರಿಕೆಯಿಂದಾಗಿ, ಒಟ್ಟಾರೆ ವಿತರಣಾ ಜಾಲದ ಕಾರ್ಯದಕ್ಷತೆಯು ಕ್ಷೀಣಿಸಿತ್ತು. ಇದಲ್ಲದೆ, ಇತ್ತೀಚೆಗೆ ವಿಸ್ತರಣೆಗೊಂಡ ಮತ್ತು ಅಭಿವೃದ್ಧಿ ಹೊಂದಿದ ಹಲವು ಬಡಾವಣೆಗಳಲ್ಲಿ ವ್ಯವಸ್ಥಿತವಾದ ವಿತರಣಾ ವ್ಯವಸ್ಥೆ ಇರಲಿಲ್ಲ ಹಾಗೂ ಪ್ರತಿ ದಿನದ ಕೇವಲ 01 ರಿಂದ 02 ಗಂಟೆ ಮಧ್ಯಂತರ ನೀರು ಸರಬರಾಜು ಮಾಡಲಾಗುತ್ತಿದ್ದು, ಇದರಿಂದಾಗಿ ನೀರಿನ ಪೈಪ್‌ಗಳಲ್ಲಿ ಪದೇ ಪದೇ ನೀರು ಕಲುಷಿತಗೊಳ್ಳುವ ಸಾಧ್ಯತೆ ಹೆಚ್ಚಿತ್ತು ಹಾಗೂ ಅಸಮರ್ಪಕ ಮೂಲಸೌಕರ್ಯದಿಂದಾಗಿ ಸಾರ್ವಜನಿಕರು ದೈನಂದಿನ ನೀರಿನ ಬಳಕೆಗಾಗಿ ದೈಹಿಕ ಶ್ರಮ ಮತ್ತು ಸಂಕಷ್ಟಗಳನ್ನು ಎದುರಿಸಬೇಕಾಗಿತ್ತು ಮತ್ತು ನೀರಿನ ಕಂದಾಯ ವಸೂಲಾತಿಗಿಂತ ವೆಚ್ಚ ಹೆಚ್ಚಾಗುತ್ತಿದ್ದರಿಂದ ಪಟ್ಟಣ ಪಂಚಾಯಿತಿಗೆ ನಷ್ಟವಾಗುತ್ತಿತ್ತು.

ಈ ಎಲ್ಲಾ ಸಮಸ್ಯೆಗಳನ್ನು ಪರಿಗಣಿಸಿ 24 x 7 ನೀರು ಸರಬರಾಜು ಯೋಜನೆಯನ್ನು 1011.20 ಲಕ್ಷ ರು. ಅಂದಾಜು ಮೊತ್ತಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯು.ಐ.ಡಿ.ಎಸ್.ಎಸ್.ಎಂ.ಟಿ ಅನುದಾನದಡಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಕಾಮಗಾರಿ ಕೈಗೊಂಡು, 2018-19ರಲ್ಲಿ ಪೂರ್ಣಗೊಳಿಸಿ ಚಾಲನೆಗೊಳಿಸಲಾಗಿದೆ. ಈ ಯೋಜನೆಯು ನಾಗರಿಕರಿಗೆ ದಿನದ 24 ಗಂಟೆಯೂ ಮತ್ತು ವಾರದ ಏಳೂ ದಿನಗಳ ಕಾಲ ನಿರಂತರವಾಗಿ, ಸುರಕ್ಷಿತ ಮತ್ತು ಕುಡಿಯಲು ಯೋಗ್ಯವಾದ ನೀರನ್ನು ನೇರವಾಗಿ ನಲ್ಲಿಗಳ ಮೂಲಕ ಒದಗಿಸುತ್ತಿದೆ.

ಸುಮಾರು 20,000 ಜನಸಂಖ್ಯೆಯ ಒಟ್ಟು 3300 ಮನೆಗಳಿಗೆ ಕನಿಷ್ಠ 135 ಎಲ್‌ಪಿಸಿಡಿಯೊಂದಿಗೆ ಇಂದಿಗೂ ದಿನದ 24 ಗಂಟೆಯೂ ನಿರಂತರ ಸುರಕ್ಷಿತ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಬಳಕೆ ಆಧಾರಿತ ನೀರಿನ ಬಿಲ್‌ಗಳನ್ನು ನೀಡುವ ಮೂಲಕ ಮತ್ತು ಶೇ.100 ಆದಾಯ ಸಂಗ್ರಹ ದಕ್ಷತೆಯೊಂದಿಗೆ ಸುರಕ್ಷಿತ ಮತ್ತು ಪೋರ್ಟಬಲ್ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. ಇದರ ಪರಿಣಾಮವಾಗಿ ತೀರ್ಥಹಳ್ಳಿ ಪಟ್ಟಣವು 2018-19ರಿಂದ ಮೇಲಿನ ಯೋಜನೆಯಡಿಯಲ್ಲಿ ರಚಿಸಲಾದ ಕುಡಿಯುವ ನೀರಿನ ಮೂಲಸೌಕರ್ಯದ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಮಾಡಿದ ವೆಚ್ಚಕ್ಕಿಂತ ಎರಡು ಪಟ್ಟು ಹೆಚ್ಚು ಆದಾಯವನ್ನು ಸಂಗ್ರಹಿಸುವ ಮೂಲಕ ಸ್ವಾವಲಂಬಿಯಾಗಿದೆ.


ನಗರ ಸ್ಥಳೀಯ ಸಂಸ್ಥೆ ಮಟ್ಟದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಇದು ಗಮನಾರ್ಹ ಸಾಧನೆಯಾಗಿದ್ದು, ಈ ಪ್ರಶಸ್ತಿಯು ಜಿಲ್ಲೆಯ ಹೆಮ್ಮೆಯಾಗಿದೆ ಎಂದು ತಿಳಿಸಿದ್ದಾರೆ.