ಸಾರಾಂಶ
ಜ. 24 ಮತ್ತು 25ರಂದು ಮೂಡುಬಿದಿರೆಯ ಕೋಟಿ-ಚೆನ್ನಯ ಜೋಡುಕರೆ ಕಂಬಳ ನಡೆಯಲಿದೆ ಎಂದು ದ.ಕ., ಉಡುಪಿ ಹಾಗೂ ಕಾಸರಗೋಡು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಬೆಳಪು ಡಾ. ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.
ಕಂಬಳ ಫೆಡರೇಶನ್ ಆಫ್ ಇಂಡಿಯಾ ಎಂಬ ಸಂಸ್ಥೆ ಅಸ್ತಿತ್ವಕ್ಕೆ
ಮೂಡುಬಿದಿರೆ: 2025-26ನೇ ಸಾಲಿನ ಕಂಬಳ ಋತು ನ.15ರಂದು ಪಣಪಿಲ ಕಂಬಳ ಮೂಲಕ ಆರಂಭಗೊಳ್ಳಲಿದ್ದು ಜ. 24 ಮತ್ತು 25ರಂದು ಮೂಡುಬಿದಿರೆಯ ಕೋಟಿ-ಚೆನ್ನಯ ಜೋಡುಕರೆ ಕಂಬಳ ನಡೆಯಲಿದೆ ಎಂದು ದ.ಕ., ಉಡುಪಿ ಹಾಗೂ ಕಾಸರಗೋಡು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಬೆಳಪು ಡಾ. ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.ಮೂಡುಬಿದಿರೆ ಒಂಟಿಕಟ್ಟೆಯಲ್ಲಿ ಭಾನುವಾರ ನಡೆದ ದ. ಕ, ಉಡುಪಿ, ಕಾಸರಗೋಡು ಉಭಯ ಜಿಲ್ಲಾ ಕಂಬಳ ಸಮಿತಿ ಮತ್ತು ದ. ಕ, ಉಡುಪಿ ಕಂಬಳ ವ್ಯವಸ್ಥಾಪಕರ ಜಂಟಿ ಸಭೆಯಲ್ಲಿ ಕಂಬಳದ ಲೋಗೋ ಅನಾವರಣಗೊಳಿಸಿ ಅವಿಭಜಿತ ಜಿಲ್ಲೆಗಳಲ್ಲಿ ನಡೆಯುವ ಕಂಬಳಗಳ ದಿನಾಂಕವನ್ನು ನಿಗದಿ ಪಡಿಸಿ ಅವರು ಮಾತನಾಡಿದರು.ರಾಜ್ಯ ಕಂಬಳ ಅಸೋಸಿಯೇಷನ್ ಮತ್ತು ಕೇಂದ್ರ ಸರ್ಕಾರದಿಂದ ಕೂಡ ಕಂಬಳಕ್ಕೆ ವಿಶೇಷ ಮಾನ್ಯತೆ ನೀಡಲು ಕಂಬಳ ಫೆಡರೇಶನ್ ಆಫ್ ಇಂಡಿಯಾ ಎಂಬ ಸಂಸ್ಥೆ ಅಸ್ತಿತ್ವಕ್ಕೆ ತರಲಾಗಿದೆ ಮುಂದೆ ಕೇಂದ್ರ ಕ್ರೀಡಾ ಪ್ರಾಧಿಕಾರದಲ್ಲಿ ಕಂಬಳಕ್ಕೆ ಮಾನ್ಯತೆ ನೀಡಲು ಪ್ರಯತ್ನಿಸಲಾಗುವುದು ಎಂದು ಮಾಹಿತಿ ನೀಡಿದರು.ಕಂಬಳದ ಅನುದಾನದ ಸಂಹಿತೆಗೆ ಕಾನೂನು ರೂಪಿಸಲು ಪ್ರಾಧಿಕಾರವು ವಿಶೇಷವಾಗಿ ಬೈಲಾ ರಚಿಸಿ ಸರ್ಕಾರ ಮಾನ್ಯತೆ ನೀಡಿ ಕಂಬಳವನ್ನು ಗುರುತಿಸಿದೆ. ರಾಜ್ಯ ಸರ್ಕಾರ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಮಾನ್ಯ ಮುಖ್ಯಮಂತ್ರಿಗಳ ಆದೇಶದಂತೆ ಪ್ರಾಧಿಕಾರದಲ್ಲಿ ಮಾನ್ಯತೆ ಪುರಸ್ಕರಿಸಿರುವುದು ಎಲ್ಲಾ ಕಂಬಳ ಅಭಿಮಾನಿಗಳಿಗೆ ಸಂತೋಷವನ್ನು ತಂದಿರುತ್ತದೆ ಎಂದರು.
ಮೂಡುಬಿದಿರೆ ತಾಲೂಕಿನ ಪಣಪಿಲ ಕಂಬಳ ನ.15, 22-ಕೊಡಂಗೆ, 29-ಕಕ್ಕೆಪದವು, ಡಿ.6-ಹೊಕ್ಕಾಡಿ, 7- ಬಳ್ಳಮಂಜ, 13-ಬಾರಾಡಿ, 20-ಮುಲ್ಕಿ, 27-ಮಂಗಳೂರು, ಜ.3-ಮಿಯ್ಯಾರು, 10-ನರಿಂಗಾಣ, 17-ಅಡ್ಡೆ, 24-ಮೂಡುಬಿದಿರೆ, 31-ಐಕಳ.ಫೆ.7-ಪುತ್ತೂರು, 14-ಜೆಪ್ಪು. 21-ವಾಮಂಜೂರು, 28-ಎರ್ಮಾಳು, ಮಾ.7 ಬಂಟ್ವಾಳ, 15-ಬಂಗಾಡಿ, 31-ವೇಣೂರು, 28-ಉಪ್ಪಿನಂಗಡಿ, ಏ.4 ಗುರುಪುರ, 11-ಬಳ್ಳುಂಜೆ, 18-ಹರೇಕಳ ಹಾಗೂ ಕೊನೆಯದಾಗಿ ಏ. 25ರಂದು ಬಡಗಬೆಟ್ಟು ಕಂಬಳ ನಡೆಯಲಿದೆ ಎಂದು ತಿಳಿಸಿದರು.ಜಿಲ್ಲಾ ಕಂಬಳ ಸಮಿತಿ ಉಪಾಧ್ಯಕ್ಷ ಶ್ರೀಕಾಂತ್ ಭಟ್, ಶಿಸ್ತು ಸಮಿತಿ ಅಧ್ಯಕ್ಷ ಭಾಸ್ಕರ್ ಎಸ್. ಕೋಟ್ಯಾನ್, ಕಂಬಳ ಅಕಾಡೆಮಿ ಸಂಚಾಲಕ ಗುಣಪಾಲ ಕಡಂಬ, ಜಿಲ್ಲಾ ಕಂಬಳ ಸಮಿತಿಯ ಕೋಶಾಧಿಕಾರಿ ಚಂದ್ರಹಾಸ್ ಸಾಧು ಸನಿಲ್, ತೀರ್ಪುಗಾರರ ವಿಭಾಗದ ಸಂಚಾಲಕ ವಿಜಯ ಕುಮಾರ್ ಕಂಗಿನಮನೆ, ಪಿ.ಆರ್. ಶೆಟ್ಟಿ, ಶಾಂತರಾಮ್ ಶೆಟ್ಟಿ, ಜಿಲ್ಲಾ ಹಾಗೂ ಪದಾಧಿಕಾರಿಗಳು ಮತ್ತು ಎಲ್ಲಾ ಕಂಬಳದ ವ್ಯವಸ್ಥಾಪಕರು ಉಪಸ್ಥಿತರಿದ್ದರು.
ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ ಮುಚ್ಚೂರು ನಿರೂಪಿಸಿದರು.