ಜ್ಞಾನ ಇದ್ದವರು ಜಗತ್ತು ಆಳುತ್ತಾರೆ-ಸಂಸದ ಬೊಮ್ಮಾಯಿ

| Published : Jan 28 2025, 12:47 AM IST

ಸಾರಾಂಶ

ಮಕ್ಕಳಿಗೆ ಒಳ್ಳೆಯ ಶಿಕ್ಷಣದ ಅವಕಾಶ ಕೊಟ್ಟರೆ ಅವರು ಯಾವುದೇ ಮಕ್ಕಳ ಜತೆ ಪೈಪೋಟಿ ಮಾಡುತ್ತಾರೆ. 21ನೇ ಶತಮಾನ ಜ್ಞಾನದ ಶತಮಾನ. ಜ್ಞಾನ ಇದ್ದವರು ಜಗತ್ತನ್ನು ಆಳುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಸವಣೂರು: ಮಕ್ಕಳಿಗೆ ಒಳ್ಳೆಯ ಶಿಕ್ಷಣದ ಅವಕಾಶ ಕೊಟ್ಟರೆ ಅವರು ಯಾವುದೇ ಮಕ್ಕಳ ಜತೆ ಪೈಪೋಟಿ ಮಾಡುತ್ತಾರೆ. 21ನೇ ಶತಮಾನ ಜ್ಞಾನದ ಶತಮಾನ. ಜ್ಞಾನ ಇದ್ದವರು ಜಗತ್ತನ್ನು ಆಳುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಇಲ್ಲಿಯ ಶ್ರೀಮತಿ ಗಂಗಮ್ಮ ಎಸ್. ಬೊಮ್ಮಾಯಿ ಕಾನ್ವೆಂಟ್ ಸ್ಕೂಲಿನ 14ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಒಂದು ಕಾಲದಲ್ಲಿ ಯಾರ ಬಳಿ ಭೂಮಿ ಇತ್ತೋ ಅವರು ಜಗತ್ತು ಆಳುತ್ತಿದ್ದರು. ಈಗ ಯಾರ ಬಳಿ ಜ್ಞಾನ ಇದೆಯೋ ಅವರು ಜಗತ್ತನ್ನು ಆಳುತ್ತಾರೆ. ಜ್ಞಾನದಿಂದ ವಿಜ್ಞಾನ ಬರುತ್ತದೆ. ವಿಜ್ಞಾನದಿಂದ ತಂತ್ರಜ್ಞಾನ ಬರುತ್ತದೆ. ಹೀಗೆ ಮಕ್ಕಳು ಬೆಳೆಯುತ್ತಾರೆ. ಹುಟ್ಟಿನಿಂದ ಯಾರೂ ಪ್ರತಿಭಾವಂತರಿರುವುದಿಲ್ಲ. ನಾವು ಯಾವ ರೀತಿಯ ಶಿಕ್ಷಣ ನೀಡುತ್ತೇವೆ. ಶಿಕ್ಷಣ ಸಂಸ್ಥೆಯಲ್ಲಿ ನಾವು ಹೇಗೆ ಗುಣಮಟ್ಟ ಉಳಿಸಿಕೊಳ್ಳುತ್ತೇವೆಯೋ ಹಾಗೇ ಮಕ್ಕಳು ಬೆಳೆಯುತ್ತಾರೆ ಎಂದರು.

ನಮ್ಮ ದೇಶಕ್ಕೆ ನಮ್ಮಷ್ಟಕ್ಕೆ ನಾವು ಗಣರಾಜ್ಯ ಎಂದು ಒಪ್ಪಿಕೊಂಡು 76 ವರ್ಷ ಆಗಿದೆ. ದೇಶ ಬಹಳಷ್ಟು ಪ್ರಗತಿ ಕಂಡಿದೆ. ಪ್ರಜಾಪ್ರಭುತ್ವದ ಬೇರು ಗಟ್ಟಿಯಾಗಿವೆ. ವ್ಯಕ್ತಿ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಎಲ್ಲವನ್ನೂ ಸಂವಿಧಾನದಿಂದ ಕಾಪಾಡಿಕೊಂಡು ಬಂದಿದ್ದೇವೆ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಕೊಡುಗೆ ಅಪಾರವಾಗಿದೆ. ಅವರನ್ನು ಗೌರವದಿಂದ ಸ್ಮರಿಸುತ್ತೇನೆ ಎಂದರು.

ಇಂದು ನಮ್ಮ ತಾಯಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಅವರ ಜನ್ಮ ದಿನಾಚರಣೆ. ಪ್ರತಿ ವರ್ಷ ಗಣರಾಜ್ಯೋತ್ಸವದ ಜತೆಗೆ ನಮ್ಮ ತಾಯಿಯ ಜನ್ಮ ದಿನಾಚರಣೆಯನ್ನು ಸತತ 14 ವರ್ಷಗಳಿಂದ ಮಾಡುತ್ತ ಬಂದಿದ್ದಾರೆ. ಆರಂಭದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿ ಈ ಸಂಸ್ಥೆ ಕಟ್ಟಿದ್ದಾರೆ. ಈ ಸಂಸ್ಥೆಯಿಂದ ಸಾವಿರಾರು ಮಕ್ಕಳು ತೇರ್ಗಡೆಯಾಗಿ ಉನ್ನತ ಶಿಕ್ಷಣ ಪಡೆಯುತ್ತಿರುವುದು ನಮಗೆಲ್ಲ ಹೆಮ್ಮೆಯ ವಿಷಯ. ಇದರಲ್ಲಿ ಶಿವಾನಂದ ಬೋಳಶೆಟ್ಟಿ ಹಾಗೂ ರಾಜಶೇಖರ ಗುರುಸ್ವಾಮಿ ಮಠ ಅವರ ಶ್ರಮ ಕಾರಣ. ಮಕ್ಕಳ ಮೇಲಿನ ಅವರ ಪ್ರೀತಿ ಕಾರಣ ಎಂದು ಹೇಳಿದರು.

ಈ ಸಂಸ್ಥೆಗೆ ನಮ್ಮ ತಾಯಿಯ ಹೆಸರು ಇಟ್ಟಿರುವುದರಿಂದ ಬಹಳಷ್ಟು ಜನರು ಇದಕ್ಕೆ ನಾನು ಸಹಾಯ ಮಾಡಿದ್ದೇನೆ ಎಂದುಕೊಂಡಿರಬಹುದು. ಇದಕ್ಕೆ ನನ್ನ ಕೊಡುಗೆ ಏನೂ ಇಲ್ಲ. ಆದರೆ, ಅವರು ತಮ್ಮ ಸ್ವಂತ ಬೆವರಿನಿಂದ ಶಿಕ್ಷಣ ಸಂಸ್ಥೆ ಕಟ್ಟಿದ್ದಾರೆ ಎಂದು ಹೇಳಿದರು.

ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಿವಾನಂದ ಬೋಳಶೆಟ್ಟಿ, ರಾಜಶೇಖರ ಗುರುಪಾದಮಠ, ರಾಯಪ್ಪ, ಸುರೇಶ ನಾಡಿಗೇರ, ಪಾಂಡು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಆರ್. ಪಾಟೀಲ್, ಗಂಗಣ್ಣ ಸಾತಣ್ಣವರ ಹಾಗೂ ಸುರೇಶ ಪಾಟೀಲ್ ಪಾಲ್ಗೊಂಡಿದ್ದರು.