ಸಾರಾಂಶ
- ಜಗಳೂರು ಬಯಲು ರಂಗಮಂದಿರದಲ್ಲಿ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ ಸಮಾರಂಭ - - - ಕನ್ನಡಪ್ರಭ ವಾರ್ತೆ ಜಗಳೂರು
ಕನ್ನಡಕ್ಕೆ ಸಾವಿಲ್ಲ, ಕನ್ನಡವು ಸವಾಲುಗಳನ್ನು ಎದುರಿಸಿಕೊಂಡು ಬಂದಿದೆ. ಕನ್ನಡಿಗರನ್ನು ಉಳಿಸಿದರೆ ಕನ್ನಡ ಭಾಷೆ ಉಳಿಯುತ್ತದೆ ಎಂದು ಬೆಂಗಳೂರಿನ ಖ್ಯಾತ ಸಾಹಿತಿ, ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಹೇಳಿದರು.ಪಟ್ಟಣದ ಬಯಲು ರಂಗಮಂದಿರದಲ್ಲಿ 14ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಭಾನುವಾರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಕನ್ನಡದ ಸಂವೇದನೆ ಅರ್ಥ ಮಾಡಿಕೊಂಡು ಬಹುತ್ವ ಮತ್ತು ಭಾವೈಕ್ಯತೆ, ಬಹುಸಂಸ್ಕೃತಿಯನ್ನು ಉಳಿಸುವವರು ನಿಜವಾದ ಕನ್ನಡಿಗರು ಎಂದರು.
ಎಲ್ಲ ಧರ್ಮಗಳೂ ಕನ್ನಡ ಉಳಿಸಿದ್ದಾರೆ. ರಾಜಪ್ರಭುತ್ವ ಒಡೆಯನಾಗಿದ್ದುಕೊಂಡು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪ್ರಜಾಸತ್ತಾತ್ಮಕ ಸ್ವಾಯತ್ತ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಿಸಿದರು. ಮಾಜಿ ಸಿಎಂ ದೇವರಾಜ ಅರಸು ಅವರ ಕಲ್ಪನೆಯಂತೆ, ಅಕಾಡೆಮಿಗಳ ಸನ್ನದು ಎಂಬಂತೆ ಸಾಂಸ್ಕೃತಿಕವಾದ ಚಿಂತನೆಯುಳ್ಳ ಆಕಾಡೆಮಿಗಳ ಮೇಲೆ ಆಡಳಿತ ಸರ್ಕಾರಗಳಿಂದ ಆರ್ಥಿಕ ಕಡಿವಾಣವಿರಲಿ, ಸಾಂಸ್ಕೃತಿಕ ಕಡಿವಾಣ ಹಾಕಬಾರದು, ಎಲ್ಲದಕ್ಕೂ ಸರ್ಕಾರಗಳ ಬಾಗಿಲು ಬಡಿಯಬಾರದು, ಸಾಹಿತ್ಯ ಸಮ್ಮೇಳನಗಳು ಕೋಟಿ ಕೋಟಿ ಹಣವನ್ನು ಅಳೆಯದೇ, ಸರಳವಾಗಿದ್ದು ಸಾಮಾಜಿಕ ಸಾಂಸ್ಕೃತಿಕ ವೇದಿಕೆಗೆ ಸಾಕ್ಷಿಯಾಗಬೇಕು ಎಂಬುದು ನನ್ನ ಆಶಯ ಎಂದರು.ಸ್ವಾಯತ್ತ ಅಕಾಡೆಮಿಗಳನ್ನು ಸಂರಕ್ಷಿಸುವ ಅನಿವಾರ್ಯತೆಯಿದೆ. ಕನ್ನಡ ನಾಡಿನಲ್ಲಿ ಸಾಹಿತಿಗಳು ಬಹಳ ವಿಶೇಷವೇನಲ್ಲ. ನಿಜವಾದ ಬರೆಯದ ಬರಹಗಾರರನ್ನು, ಹಾಡದ ಹಾಡುಗಾರರನ್ನು, ಓದುಬಾರದ ಸಾಹಿತ್ಯಾಸಕ್ತಿಗಳನ್ನು, ನರ್ತಿಸದ ನೃತ್ಯಗಾರರನ್ನು ಗೌರವಿಸುವವರೇ ನಿಜವಾದ ಸಾಹಿತಿಗಳು. ಸಮಾಜದಲ್ಲಿ ಚಿಂತಕರು, ಕಲಾವಿದರು ಜನರಿಂದ ಮನ್ನಣೆಯನ್ನು ಬಯಸಿದರೆ, ಜನಗಳಿಗೆ ಜವಾಬ್ದಾರಿಯಾಗುವ ಸಾಹಿತಿಗಳು ಅಗತ್ಯವಿದೆ. ಕನ್ನಡ ಜನರನ್ನು ಉಳಿಸಿದರೆ ಕನ್ನಡ ಭಾಷೆ ಉಳಿಯುತ್ತದೆ. ಜನಗಳ ಮುಖಾಂತರ ಭಾಷೆ ಉಳಿಸಬೇಕು. ಕನ್ನಡ ಉಳಿಸುವ ವಿಧಾನ ಬದಲಾಗಬೇಕು. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಒಳಮೀಸಲಾತಿಯಡಿ ಶೇ.15ರಷ್ಟು ಉದ್ಯೋಗ, ವೃತ್ತಿ ಶಿಕ್ಷಣ, ಕೊಟ್ಟರೂ ಇಂಥ ವಾತಾವರಣದಲ್ಲಿ ಹೋರಾಟ ನಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಗ್ರಾಮೀಣ ಭಾಗದ ಜನಸಾಮಾನ್ಯರು ಕನ್ನಡ ಭಾಷೆ ಉಳಿಸಿಕೊಂಡಿದ್ದಾರೆ. ನಿಜವಾದ ಸೃಜನಶೀಲರು ಕನ್ನಡ ಭಾಷೆಯನ್ನು ವಿಸ್ತರಿಸುತ್ತಾ ಹೋಗುತ್ತಾರೆ. ಜನಸಾಮಾನ್ಯರು ಬಳಸುವ ಭಾಷೆಯಲ್ಲಿ ಬೇರೆ ಬೇರೆ ಅರ್ಥಗಳಿವೆ. ಕನ್ನಡಕ್ಕೆ ಸಾವಿಲ್ಲ, ಬದಲಿಗೆ ಸಾಕಷ್ಟು ಸವಾಲುಗಳಿವೆ. ಕುವೆಂಪು, ಬೇಂದ್ರೆ ಅವರಂತಹ ಕವಿಗಳು, ಜನಸಾಮಾನ್ಯರು ಕನ್ನಡವನ್ನು ಉಳಿಸಿದ್ದಾರೆ ಎಂದರು.ಆಳಲು ಬರುವವರನ್ನು ಅರಗಿಸಿಕೊಳ್ಳುವ ಶಕ್ತಿ ಸದಾ ಕನ್ನಡಕ್ಕಿದೆ. ಸಾವಿರಾರು ವರ್ಷಗಳಿಂದ ಕನ್ನಡ ಭಾಷೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಪ್ರಪಂಚದಲ್ಲಿ 6703 ಭಾಷೆಗಳಿವೆ. ಎಷ್ಟೋ ಭಾಷೆಗಳು ವಿನಾಶಹೊಂದಿವೆ. ಆದರೆ ಭಾಷಾ ವಿಜ್ಞಾನಿಗಳ ಅನ್ವೇಷಣೆಯಂತೆ ಜಗತ್ತಿನ ಮೊದಲ 20 ಭಾಷೆಗಳಲ್ಲಿ ಕನ್ನಡವೂ ಒಂದು ಎಂಬುದನ್ನು ನಂಬಬೇಕಿದೆ ಎಂದು ರಾಮಚಂದ್ರಪ್ಪ ಒತ್ತಿಹೇಳಿದರು.
ಜಿಲ್ಲಾಧಿಕಾರಿ ಡಾ.ಗಂಗಾಧರ ಸ್ವಾಮಿ ಮಾತನಾಡಿ, ಬಳ್ಳಾರಿಯಂತಹ ಗಡಿಭಾಗಗಳಲ್ಲಿ ಪತ್ರಿಕೆಗಳೂ ಅನ್ಯಭಾಷೆಯಲ್ಲಿವೆ. ಕನ್ನಡ ಎಂಬುದು ಹಿರಿಮೆ, ಕೀಳಿರಿಮೆಯಲ್ಲ. ಸಂಸ್ಕೃತಿ ಆಳ ಸಾಕಷ್ಟಿದೆ. ಇಂಗ್ಲಿಷ್ ಮಾಧ್ಯಮದಿಂದ ಸಾಧನೆ ಮಾಡುತ್ತೇವೆ ಎಂಬುದು ಸುಳ್ಳು, ನಿರರ್ಗಳವಾಗಿ ಮಾತನಾಡುವ ಭಾಷೆಯಿಂದಲೂ ಸಾಧನೆಗೈಯಬಹುದು ಎಂದರು.ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಲಾಯಿತು. ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ಎ.ಬಿ.ರಾಮಚಂದ್ರಪ್ಪ, ಶಾಸಕ ಬಸವಂತಪ್ಪ, ಕಸಾಪ ಜಿಲ್ಲಾಧ್ಯಕ್ಷ ವಾಮದೇವಪ್ಪ, ಜಿ.ಕಾ.ನಿ.ಪ. ಸಂಘದ ಅಧ್ಯಕ್ಷ ಇ.ಎಂ. ಮಂಜುನಾಥ್, ಹಾರೈಕೆ ಆಸ್ಪತ್ರೆ ಮುಖ್ಯಸ್ಥ ಡಾ.ರವಿಕುಮಾರ್, ಅಭಿವೃದ್ಧಿ ನಿಗಮ ಅಧ್ಯಕ್ಷ ಜಯದೇವ ನಾಯ್ಕ, ಸರ್ಕಾರಿ ನೌಕರ ಸಂಘದ ತಾಲೂಕು ಅಧ್ಯಕ್ಷ ಎ.ಎಲ್. ತಿಪ್ಪೇಸ್ವಾಮಿ, ಜಿ.ಪಂ. ಮಾಜಿ ಸದಸ್ಯ ಕೆ.ಪಿ.ಪಾಲಯ್ಯ, ತಹಸೀಲ್ದಾರ್ ಸೈಯದ್ ಕಲೀಂ ಉಲ್ಲಾ, ನಿಕಟಪೂರ್ವ ಜಿಲ್ಲಾಧ್ಯಕ್ಷ ಮಂಜುನಾಥ್ ಕುರ್ಕಿ, ಮಾಜಿ ಅಧ್ಯಕ್ಷ ಸದಾಶಿವ ಶ್ಯಾಗಲೆ, ಕೆಎಸ್ಎಸ್ ಶಿಕ್ಷಣ ಸಂಸ್ಥೆಯ ಎಚ್.ಕೆ. ಬಸವರಾಜ್, ಕಸಾಪ ಜಿಲ್ಲಾ ಕೋಶಾಧ್ಯಕ್ಷ ರಾಘವೇಂದ್ರ ನಾಯರಿ, ಕಸಾಪ ಜಿಲ್ಲಾ ಸಹ ಕಾರ್ಯದರ್ಶಿ ಕೆ.ಎಸ್. ವೀರೇಶ್ ಪ್ರಸಾದ್, ಕಸಾಪ ತಾಲೂಕು ಅಧ್ಯಕ್ಷೆ ಸುಜಾತಮ್ಮ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಭಾರತಿ ಅಕ್ಕ ಮತ್ತಿತರರು ಇದ್ದರು.
- - - ಗಣ್ಯರ ಕೋಟ್ಸ್ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಗಬೇಕಿದೆ. ಕದಂಬ, ಚಾಲುಕ್ಯರ ಕಾಲದಿಂದಲೂ ಜಿನಗಿ, ಹಗರಿ ನದಿಗಳ ಸಂಗಮವಾಗಿರುವ ಕವಿ ಮಹಾಲಿಂಗ ರಂಗನ ಸಮಾಧಿ ಸ್ಥಳ ಕೊಣಚಗಲ್ಲಿನಲ್ಲಿ ಮುಂದಿನ ಜಿಲ್ಲಾ ಉತ್ಸವ ಆಯೋಜಿಸಲು ಜಿಲ್ಲಾಧಿಕಾರಿ ಕ್ರಮವಹಿಸಬೇಕು- ಟಿ.ಗುರುಸಿದ್ದನಗೌಡ, ಮಾಜಿ ಶಾಸಕ, ಜಗಳೂರು ಅಕ್ಷರ ಜಾತ್ರೆ 2 ದಿನಗಳ ಕಾಲ ಸಾಂಸ್ಕೃತಿಕ ಸುಗ್ಗಿಯಂತಾಗಿದೆ. ಜಗಳೂರಿನ ಕೆರೆಗಳು ಕೋಡಿಬಿದ್ದಿವೆ. ಬುಡಕಟ್ಟು ಸಂಸ್ಕೃತಿ ಗರ್ಭದಲ್ಲಿಟ್ಟುಕೊಂಡಿರುವ ಬರದನಾಡು ಬರಡಲ್ಲ, ಕೋಮುವಾದದ ನಂಜು ಬಿತ್ತದಂತೆ ಸಾಂಸ್ಕೃತಿಕ ಮೌಲ್ಯ ಸಾರುವ, ಕನ್ನಡದ ಅಸ್ಮಿತೆ ಉಳಿಸೋಣ. ಈ ಸಮ್ಮೇಳನ ನನ್ನ ಸ್ಮೃತಿಪಟಲದಲ್ಲಿ ಜೀವನವಿಡೀ ಅಚ್ಚಳಿಯದೆ ಉಳಿದಿದೆ. ಜನಭಾಷೆ ಆಡಳಿತಕ್ಕಾಗಿ ಬರಬೇಕು. ತಾರತಮ್ಯ ಕೊನೆಯಾಗಿ ಸಮಾನತೆಗೆ ಸಾಕ್ಷಿಯಾಗಬೇಕು. ಪ್ರಜ್ಞಾವಂತರೇ ಮೌಢ್ಯತೆ ಬಿತ್ತಲು ಹೊರಟಿರುವುದು ಆತಂಕಕಾರಿ ಬೆಳವಣಿಗೆ, ದುಡಿಯದೇ ಸಂಭ್ರಮಿಸುವ ಸುಳ್ಳಿನ ವರ್ಗದ ಮಧ್ಯೆ ಬಹುಜನರು ಹಸಿವಿನಿಂದ ಬಳಲುತ್ತಿದ್ದಾರೆ - ಡಾ. ಎ.ಬಿ. ರಾಮಚಂದ್ರಪ್ಪ, ಸಮ್ಮೇಳನಾಧ್ಯಕ್ಷ ವೈಚಾರಿಕತೆ, ವೈಜ್ಞಾನಿಕತೆಗೆ ಸಾಕ್ಷಿಯಾಗಿ ಎರಡು ದಿನಗಳ ಕಾಲ 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಜರುಗಿದೆ. 57 ಕೆರೆ ತುಂಬಿಸುವ ಯೋಜನೆ ಸಾಕಾರಗೊಂಡು ಕೆರೆಗಳು ಕೋಡಿ ಬಿದ್ದ ಜಲಸಂಭ್ರಮಕ್ಕಾಗಿ ಜಲೋತ್ಸವ ಕಾರ್ಯಕ್ರಮ ನಡೆಯಲಿದೆ. ಸರಿಗಮಪ ಕಾರ್ಯಕ್ರಮದ ಖ್ಯಾತ ಗಾಯಕರಾದ ಅರ್ಜುನ್ ಜನ್ಯ, ಅನುರಾಧ ಭಟ್ ಅವರ ತಂಡ ಭಾಗವಹಿಸಲಿದೆ. ಅಧಿಕ ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು - ಬಿ.ದೇವೇಂದ್ರಪ್ಪ, ಶಾಸಕ, ಜಗಳೂರು
- - -ಬಾಕ್ಸ್
* ಸಮ್ಮೇಳನ ಕೈಗೊಂಡ 8 ನಿರ್ಣಯಗಳು:1) ಈ ವರ್ಷದಲ್ಲಿಯೇ ಮೂರನೇ ವಿಶ್ವ ಕನ್ನಡ ಸಮ್ಮೇಳನವನ್ನು ದಾವಣಗೆರೆಯಲ್ಲಿ ಆಯೋಜಿಸಬೇಕು ಹಾಗೂ ಸರ್ಕಾರ ಕೂಡಲೇ ದಿನಾಂಕ ಘೋಷಿಸಬೇಕು
2) ಕನ್ನಡ ಮಾಧ್ಯಮ ವಿದ್ಯಾರ್ಜನೆ ಮಾಡಿರುವ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ನೀಡುತ್ತಿರುವ ಮೀಸಲಾತಿಯನ್ನು ಶೇ.5ರಿಂದ ಶೇ.15ಕ್ಕೆ ಏರಿಸುವ ಮೂಲಕ ಕನ್ನಡ ಭಾಷೆಯನ್ನು ಅನ್ನದ ಭಾಷೆಯನ್ನಾಗಿಸಲು ಕ್ರಮ ಕೈಗೊಳ್ಳಬೇಕು3) ದಾವಣಗೆರೆಯಲ್ಲಿ ಕೃಷಿ ಉತ್ಪನ್ನ ಆಧಾರಿತ ಹಾಗೂ ಉದ್ಯೋಗ ಸೃಷ್ಟಿಸುವ ಕೈಗಾರಿಕೆ ಸ್ಥಾಪನೆ ಆಗಬೇಕು
4) ಭೌಗೋಳಿಕವಾಗಿ ಕರ್ನಾಟಕದ ಮಧ್ಯಭಾಗದಲ್ಲಿರುವ ದಾವಣಗೆರೆ ನಗರವನ್ನು ಎರಡನೇ ರಾಜಧಾನಿಯನ್ನಾಗಿಸಬೇಕು5) ಜಗಳೂರು ತಾಲೂಕಿನ ಎಲ್ಲ ಪ್ರವಾಸೋದ್ಯಮ ಸ್ಥಳಗಳನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣವನ್ನಾಗಿಸಲು ಮೂಲಸೌಕರ್ಯ ಒದಗಿಸಬೇಕು
6) ಜಗಳೂರು ತಾಲೂಕಿನ ಅಪರೂಪದ ಪ್ರಾಣಿ ಕೊಂಡಕುರಿ ಸಂರಕ್ಷಣೆಗೆ ಮುಂದಾಗಬೇಕು. ಸರ್ಕಾರಿ ಕಾರ್ಯಕ್ರಮಗಳಲ್ಲಿ ಕೊಂಡಕುರಿ ಲಾಂಛನವನ್ನು ಕಡ್ಡಾಯವಾಗಿ ಬಳಸಲು ಆದೇಶಿಸಬೇಕು7) ದಾವಣಗೆರೆಯಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸುಸಜ್ಜಿತ ಕನ್ನಡ ಭವನ ನಿರ್ಮಿಸಲು ಅಗತ್ಯ ಸಹಕಾರ ಮತ್ತು ಅನುದಾನ ನೀಡಬೇಕು
8) ಕಸಾಪ ಎಲ್ಲ ಹಂತದ ಸಮ್ಮೇಳನಗಳನ್ನು ಸರ್ಕಾರ ಅನುಮೋದಿಸಬೇಕು- - - -12 ಜೆ.ಜಿ.ಎಲ್.3:
ಜಗಳೂರು ಪಟ್ಟಣದ ಬಯಲು ರಂಗಮಂದಿರದಲ್ಲಿ ಭಾನುವಾರ 14ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಬೆಂಗಳೂರಿನ ಖ್ಯಾತ ಸಾಹಿತಿ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಮಾತನಾಡಿದರು.