ಕೊಡವ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೂರು ಪುಸ್ತಕ ಬಿಡುಗಡೆ

| Published : Jun 04 2025, 12:38 AM IST

ಸಾರಾಂಶ

ಗೋಣಿಕೊಪ್ಪ ಕಾವೇರಿ ವಿದ್ಯಾಸಂಸ್ಥೆಯಲ್ಲಿ ನಡೆದ ಕೂಟದ ಕೊಡವ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೂರು ಪುಸ್ತಕ ಬಿಡುಗಡೆಗೊಂಡಿತು.

ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ

‘ಕೊಡವ ತಕ್ಕ್ ಎಳ್ತ್ ಕಾರಡ ಕೂಟ, ಕಾವೇರಿ ಎಜುಕೇಷನ್ ಸೊಸೈಟಿಯ ಆಶ್ರಯದಲ್ಲಿ ಗೋಣಿಕೊಪ್ಪ ಕಾವೇರಿ ವಿದ್ಯಾಸಂಸ್ಥೆಯಲ್ಲಿ ನಡೆದ "ಕೂಟ " ದ ಕೊಡವ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೂರು ಪುಸ್ತಕ ಬಿಡುಗಡೆಗೊಂಡಿತು.

ಕಾವೇರಿ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಮಂಡೇಪಂಡ ಸುಗುಣ ಮುತ್ತಣ್ಣ ಕೊಡವ ಸಾಹಿತ್ಯ ಮಾಲೆ " ಯೋಜನೆಯ 190ನೇ ಹೆಜ್ಜೆಯ ಪುಸ್ತಕವಾಗಿ ಉಳುವಂಗಡ ಕಾವೇರಿ ಉದಯ ಬರೆದ "ಕಾಂಗತಾನ ಚುಳಿ ", 191ನೆ ಹೆಜ್ಜೆಯ ಪುಸ್ತಕವಾಗಿ 17 ಲೇಖಕರು ಬರೆದ "ಕಕ್ಕಡ ಕಥೆ ", 192ನೇ ಹೆಜ್ಜೆಯ ಪುಸ್ತಕವಾಗಿ ಕೊಟ್ಟಂಗಡ ಕವಿತ ಬೋಜಮ್ಮರವರು ಬರೆದ "ನಾ ಬಯಂದ ಪೂ " ಎಂಬ ಮೂರು ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿದರು.

ನಂತರ ಮಾತನಾಡಿದ ಸುಗುಣ ಮುತ್ತಣ್ಣ, ಕೊಡವ ಭಾಷೆ, ಸಾಹಿತ್ಯ, ಕಲೆ ಸೇರಿದಂತೆ ಕೊಡವ ಸಂಸ್ಕೃತಿಯ ಬೆಳವಣಿಗೆಗೆ ಅತೀ ಹೆಚ್ಚು ಕೊಡುಗೆ ನೀಡಿರುವ ಕೊಡವ ತಕ್ಕ್ ಎಳ್ತ್ಕಾರಡ ಕೂಟ ನಮ್ಮ ಕಾಲೇಜಿನಲ್ಲಿ ಕಾರ್ಯಕ್ರಮ ಏರ್ಪಡಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಕೊಡವ ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಮೂಡಿಸಲು ಪ್ರಯತ್ನಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಗೋಣಿಕೊಪ್ಪ ಕಾವೇರಿ ಕಾಲೇಜಿನ ಪ್ರಾಂಶುಪಾಲ ಡಾ. ಮಾಳೇಟಿರ ಕಾವೇರಪ್ಪ ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕೊಡವ ತಕ್ಕ್ ಎಳ್ತ್ಕಾರಡ ಕೂಟವು ಕಾರ್ಯಕ್ರಮವನ್ನು ನಮ್ಮ ಕಾಲೇಜಿನಲ್ಲಿ ಆಯೋಜಿಸಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ "ಕೊಡವ ತಕ್ಕ್ ಎಳ್ತ್ಕಾರಡ ಕೂಟ "ದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಪ್ರಾಸ್ತಾವಿಕ ನುಡಿಯಲ್ಲಿ "ಕೂಟ " ಇದುವರೆಗೆ ಮಾಡಿದ ಸಾಧನೆಯ ಮಾಹಿತಿ ನೀಡಿದರು.

"ಮುದ್ದಿಯಡ ಕುಶ ಪೊನ್ನಪ್ಪ ದತ್ತಿನಿಧಿ "ಯ ಕಥಾ ಸ್ಪರ್ಧೆಯಲ್ಲಿ ಭಾಗವಹಿಸಿದ 17 ಲೇಖಕರಿಗೂ ಪ್ರಶಸ್ತಿ ಪತ್ರ ಮತ್ತು ಕಿರು ಕಾಣಿಕೆ ನೀಡುವುದರೊಂದಿಗೆ ವಿಜೇತ ಆರು ಲೇಖಕರಿಗೆ ಬಹುಮಾನ ನೀಡಲಾಯಿತು.

ಕೊಡವ ಭಾಷೆಯ ಹಾಡುಗಾರಿಕೆ ಮತ್ತು ಓದುವ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನವನ್ನು ಹಾಗೂ ಭಾಗವಹಿಸಿದವರೆಲ್ಲರಿಗೂ ಕಿರು ಕಾಣಿಕೆಯೊಂದಿಗೆ ಪ್ರಶಂಸನಾ ಪತ್ರ ನೀಡಲಾಯಿತು.

ಪುಸ್ತಕದ ಲೇಖಕಿ ಉಳುವಂಗಡ ಕಾವೇರಿ ಉದಯ, ಕೊಟ್ಟಂಗಡ ಕವಿತ ಬೋಜಮ್ಮ, ದಾನಿಗಳಾದ ಮೇಚಮಡ ಮಲ್ಲಿಗೆ ಪೂವಮ್ಮ, ಮುದ್ದಿಯಡ ಪದ್ಮ ಕುಶಾಲಪ್ಪ, ಚಿಂಡಮಾಡ ಸರಿತ ಅಶೋಕ್, ಕೊಟ್ಟಂಗಡ ವಾಸುದೇವ ಹಿರಿಯರಾದ ಡಾ. ಕಾಳಿಮಾಡ ಕೆ.ಶಿವಪ್ಪ, ಕೂಟ”ದ ಉಪಾಧ್ಯಕ್ಷ ಚೆಂಬಾಂಡ ಶಿವಿ ಭೀಮಯ್ಯ, ಸಹ ಕಾರ್ಯದರ್ಶಿ ಬೊಜ್ಜಂಗಡ ನಿತಿನ್ ನಂಜಪ್ಪ, ಕಾರ್ಯದರ್ಶಿ ಅಮ್ಮಣಿಚಂಡ ಪ್ರವೀಣ್ ಚಂಗಪ್ಪ, ಖಜಾಂಚಿ ಬೋಡಂಗಡ ಜಗದೀಶ್ ತಿಮ್ಮಯ್ಯ, ಸದಸ್ಯರಾದ ಅಜ್ಜಮಡ ಸಾವಿತ್ರಿ, ಬೋಡಂಗಡ ಕಾರ್ತಿಕ್ ಇದ್ದರು.