ಮೂರು ದಿನಗಳ ಸಿಎಂದಿಲ್ಲಿ ಪ್ರವಾಸ ಆರಂಭ

| Published : Jun 24 2025, 12:32 AM IST

ಸಾರಾಂಶ

ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೋಮವಾರ ಸಂಜೆ ದಿಲ್ಲಿಗೆ ಆಗಮಿಸಿದ್ದಾರೆ. ಮೂರು ದಿನಗಳ ತಮ್ಮ ದಿಲ್ಲಿ ಪ್ರವಾಸದ ವೇಳೆ ಅವರು, ಪಕ್ಷದ ಹೈಕಮಾಂಡ್‌ ನಾಯಕರನ್ನೂ ಭೇಟಿ ಮಾಡಲಿದ್ದಾರೆ.

ಕನ್ನಡಪ್ರಭ ವಾರ್ತೆ ನವದೆಹಲಿ

ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೋಮವಾರ ಸಂಜೆ ದಿಲ್ಲಿಗೆ ಆಗಮಿಸಿದ್ದಾರೆ. ಮೂರು ದಿನಗಳ ತಮ್ಮ ದಿಲ್ಲಿ ಪ್ರವಾಸದ ವೇಳೆ ಅವರು, ಪಕ್ಷದ ಹೈಕಮಾಂಡ್‌ ನಾಯಕರನ್ನೂ ಭೇಟಿ ಮಾಡಲಿದ್ದಾರೆ.

ಮಂಗಳವಾರ ಬೆಳಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲಿರುವ ಸಿಎಂ, ಮುಸ್ಲಿಂ ಮೀಸಲಾತಿ ಸೇರಿ ಅಂಕಿತಕ್ಕಾಗಿ ಕಾಯುತ್ತಿರುವ ಐದು ಮಸೂದೆಗಳ ಬಗ್ಗೆ ರಾಷ್ಟ್ರಪತಿಯವರ ಗಮನ ಸೆಳೆಯಲಿದ್ದಾರೆ. ಸಂಜೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ, ಹಣಕಾಸು ಆಯೋಗದ ಮುಂದೆ ಇರಿಸಿರುವ ಕರ್ನಾಟಕದ ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಅಲ್ಲದೆ, ಕೇಂದ್ರದ ಬಳಿ ಬಾಕಿ ಇರುವ ಅನುದಾನ ಬಿಡುಗಡೆಗೆ ಒತ್ತಾಯಿಸಲಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಬಿಡುಗಡೆ ಸೇರಿ ಇನ್ನಿತರ ಹಲವು ವಿಚಾರಗಳೂ ಭೇಟಿ ವೇಳೆ ಪ್ರಸ್ತಾವವಾಗುವ ಸಾಧ್ಯತೆಯಿದೆ.

ಈ ಮಧ್ಯೆ, ಪ್ರಧಾನಿ ಮೋದಿ ಭೇಟಿಗೂ ಅವಕಾಶ ಕೇಳಿರುವ ಸಿಎಂ, ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯಗಳನ್ನು ಸರಿಪಡಿಸಲು ಮೋದಿಯವರನ್ನು ಆಗ್ರಹಿಸಲಿದ್ದಾರೆ. ರಾಜ್ಯದ ನೀರಾವರಿ ಯೋಜನೆಗಳಿಗೆ ಅನುದಾನ ಬಿಡುಗಡೆ. ಕೇಂದ್ರದಿಂದ ರಾಜ್ಯಕ್ಕೆ ತೆರಿಗೆ ಹಂಚಿಕೆ ವಿಚಾರದಲ್ಲಿ ಆಗಿರುವ ಅನ್ಯಾಯ, ಹಣಕಾಸು ಆಯೋಗದ ಮುಂದೆ ಕರ್ನಾಟಕ ಮಂಡಿಸಿರುವ ವಾದ ಕುರಿತು ಚರ್ಚೆ ನಡೆಸಲಿದ್ದಾರೆ.

ಹೈಕಮಾಂಡ್ ನಾಯಕರ ಭೇಟಿ:

ಈ ಮಧ್ಯೆ, ದೆಹಲಿ ಭೇಟಿಯ ವೇಳೆ ಅವರು ಪಕ್ಷದ ಹೈಕಮಾಂಡ್‌ ನಾಯಕರನ್ನೂ ಭೇಟಿ ಮಾಡಲಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಲಿದ್ದಾರೆ. ಈ ವೇಳೆ, ನೆನೆಗುದಿಗೆ ಬಿದ್ದಿರುವ ವಿಧಾನ ಪರಿಷತ್ ಸದಸ್ಯರ ನೇಮಕಾತಿ ಪಟ್ಟಿಗೆ ಗ್ರೀನ್ ಸಿಗ್ನಲ್ ಪಡೆಯುವ ನಿಟ್ಟಿನಲ್ಲಿ ಚರ್ಚೆ ನಡೆಸಲಿದ್ದಾರೆ.