ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಭ್ರಷ್ಟಾಚಾರ ಮಾಡಿ ಕೋಟಿ ಕೋಟಿ ಹಣ ಲೂಟಿ ಹೊಡೆದವರಿಗೆ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗುತ್ತಿರುವುದು ಸಂವಿಧಾನಕ್ಕೆ ಮಾಡುವ ಅಪಚಾರವಾಗಿದೆ ಎಂದು ದಕ್ಷಿಣ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ವಾಟಾಳ್ ನಾಗರಾಜ್ ಅಸಮಾಧಾನ ವ್ಯಕ್ತಪಡಿಸಿದರು.ಬಹಿರಂಗವಾಗಿ ಹಣ ಹಂಚುತ್ತಾರೆ. ಇನ್ನು ಚುನಾವಣೆಯಾದರೂ ಏಕೆ ಬೇಕು ಎಂದು ಪ್ರಶ್ನಿಸಿದ ಅವರು, ನಾನು ಪ್ರಾಮಾಣಿಕವಾಗಿ ಚುನಾವಣೆ ಎದುರಿಸಿದ್ದೇನೆ. ಒಂದು ಪೈಸೆಯನ್ನೂ ಕೊಟ್ಟಿಲ್ಲ. ಪ್ರೀತಿಯಿಂದ ಮತ ಕೇಳಿದ್ದೇನೆ. ಮತ ಹಾಕಿದರೆ ವಿಧಾನ ಪರಿಷತ್ತಿನಲ್ಲಿ ಬಹಳ ಗಂಭೀರವಾಗಿ ಚರ್ಚೆ ಮಾಡುತ್ತೇನೆ. ಕಳಕಳಿ, ಪ್ರಾರ್ಥನೆ ಮಾಡಿದ್ದೇನೆ. ಶಿಕ್ಷಕರನ್ನು ಸೂರ್ಯ, ಚಂದ್ರರಷ್ಟು ಬಹಳ ಎತ್ತರವಾಗಿ ಕಾಣುತ್ತೇನೆ ಎಂದರು.
ಚುನಾವಣೆಯಲ್ಲಿ ಬಹಳ ಅನ್ಯಾಯ, ಮೋಸ ನಡೆದಿದೆ. ಲೂಟಿ ನಡೆಯುತ್ತಿದೆ. ಚುನಾವಣೆ ಬಗ್ಗೆ ಆಯೋಗಕ್ಕೆ ಗೌರವ ಇದ್ದರೆ ಈ ರೀತಿಯ ಚುನಾವಣೆ ಮಾಡಬಾರದು ಎಂದು ಸಲಹೆ ನೀಡಿದರು.ಇದು ಚುನಾವಣೆ ಅಲ್ಲ. ಇದೊಂದು ರೀತಿಯ ದರೋಡೆ. ಬಹುಶಃ ಎಲ್ಲ ಚುನಾವಣೆಗಳಲ್ಲಿ ಇದೇ ಪರಿಸ್ಥಿತಿ ಇದೆ. ಇಂತಹದ್ದು ಬರಬಾರದು. ಶಿಕ್ಷಕರು ಬಹಳ ದೊಡ್ಡವರು, ಗುರುವನ್ನು ಬ್ರಹ್ಮನಿಗೆ ಹೋಲಿಸುತ್ತಾರೆ. ಅಂತಹ ಗುರುಗಳನ್ನು ಕೆಡಿಸಿ ವ್ಯವಸ್ಥೆಯನ್ನು ಹಾಳುಗೆಡವಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಸ್ತುತ ಶಿಕ್ಷಕರ ಕ್ಷೇತ್ರ ಚುನಾವಣೆಯಲ್ಲಿ ಮೊದಲನೇ, ಎರಡನೇ, ಮೂರನೇ ಪ್ರಾಶಸ್ತ್ಯ ಮತಗಳಿಗೆ ಅವಕಾಶವಿದೆ. ಯಾರಿಗೆ ಹಾಕಿದ್ದಾರೆ ನೋಡಬೇಕು. ಚುನಾವಣೆ ಬಗ್ಗೆ ನಂಬಿಕೆ ಹೋಗುತ್ತಿದೆ ಎಂದರು.ಶಿಕ್ಷಕರಿಗೆ ೫ ರಿಂದ ೯ ಸಾವಿರ ರು.ಗಳನ್ನು ನೀಡಿ ದುಡಿಸಿಕೊಳ್ಳಲಾಗುತ್ತಿದೆ. ಇದಕ್ಕೆ ಕಳ್ಳಕಾಯಿ ಅಥವಾ ಮಸಾಲೆ ದೋಸೆಯೂ ಬರುವುದಿಲ್ಲ. ಶಿಕ್ಷಕರನ್ನು ದಾರಿ ತಪ್ಪಿಸುವ ದೊಡ್ಡ ದಾಳಿ ಇದು. ಒಳ್ಳೆಯ ಬೆಳವಣಿಗೆಯಲ್ಲ ಎಂದರು.
ವಿಧಾನ ಸಭೆ, ಪಾರ್ಲಿಮೆಂಟ್ ಚುನಾವಣೆಗಳಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಕೋಟಿ ಕೋಟಿ ರು. ಕೊಟ್ಟು ರಾಜ್ಯಸಭೆಗೆ ಆಯ್ಕೆಯಾಗುತ್ತಾರೆ. ದುಡ್ಡು ಕೊಟ್ಟು ನಾಮಿನೇಷನ್ ಮಾಡಲಾಗುತ್ತದೆ. ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಲೂ ಸಹ ದುಡ್ಡು. ಸಂವಿಧಾನಕ್ಕೆ ಅತ್ಯಂತ ಅಪಚಾರ, ಅನ್ಯಾಯ, ಉಪಾಧ್ಯಯರ ಕ್ಷೇತ್ರ ಬಹಳ ಪವಿತ್ರವಾದ ಕ್ಷೇತ್ರ. ವಿಧಾನ ಪರಿಷತ್, ಮೇಲ್ಮನೆಗೆ ಆರಿಸಬೇಕಾದವರು ಎಂತಹವರು ಎಂದರೆ, ರಿಯಲ್ ಎಸ್ಟೇಟ್ನವರು, ಬಾರ್, ಹಣ ಇಟ್ಟಿರುವವರು, ಹಣ ಇಟ್ಟಿರುವವರನ್ನು ಎಲ್ಲ ಪಾರ್ಟಿಗಳೂ ಪ್ರತಿನಿಧಿಗಳನ್ನಾಗಿ ಮಾಡುತ್ತಾರೆ. ಇದು ತಪ್ಪದಿದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆಯೇ ಬುಡಮೇಲಾಗುವ ಸಾಧ್ಯತೆಗಳಿವೆ ಎಂದರು.