ಉರುಳಿಗೆ ಸಿಲುಕಿ 8 ವರ್ಷ ಪ್ರಾಯದ ಹುಲಿ ಮೃತಪಟ್ಟಿರುವ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಉರುಳಿಗೆ ಸಿಲುಕಿ ಅಂದಾಜು 8 ವರ್ಷ ಪ್ರಾಯದ ಹುಲಿಯೊಂದು ಮೃತಪಟ್ಟಿರುವ ಘಟನೆ ಕುಶಾಲನಗರ ತಾಲೂಕಿನ ಚೆಟ್ಟಳ್ಳಿಯಲ್ಲಿ ನಡೆದಿದೆ.

ಚೆಟ್ಟಳ್ಳಿ ಸಮೀಪದ ಶ್ರೀಮಂಗಲ ಗ್ರಾಮದ ಕೆಚ್ಚೆಟ್ಟೀರ ಕುಟುಂಬದ ತೋಟದಲ್ಲಿ ಹುಲಿಯೊಂದು ಸಾವಿಗೀಡಾಗಿದೆ. ತೋಟದ ಮಾಲೀಕರು ಇದನ್ನು ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತೋಟದ ಬೇಲಿಯಲ್ಲಿ ಹಾಕಲಾಗಿದ್ದ ಉರುಳಿಗೆ ಸಿಲುಕಿಕೊಂಡು ಈ ಹುಲಿ ಸಾವಿಗೀಡಾಗಿದೆ ಎಂದು ತಿಳಿದುಬಂದಿದೆ.

ಹುಲಿಯ ಕಳೇಬರವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಚೆಟ್ಟಳ್ಳಿ ಭಾಗದಲ್ಲಿ ಹುಲಿ ಓಡಾಟ ತೀರಾ ವಿರಳ. ಆದರೆ ಇದೀಗ ಉರುಳಿಗೆ ಸಿಲುಕಿ ಮೃತಪಟ್ಟಿದ್ದು, ಈ ಭಾಗದ ಜನರು ತೀವ್ರ ಆತಂಕಗೊಂಡಿದ್ದಾರೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್, ಎಸಿಎಫ್ ಗೋಪಾಲ್, ವಲಯ ಅರಣ್ಯಾಧಿಕಾರಿ ರಕಚಷಿತ್ , ವೈದ್ಯಾಧಿಕಾರಿ ಡಾ. ಮುಜೀಬ್, ಡಾ. ಸಂಜೀವ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.