ಸಾರಾಂಶ
ಭಾರತ - ಪಾಕ್ ಯುದ್ಧದ ಭೀತಿಯ ಹಿನ್ನೆಲೆಯಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ವಿಮಾನ ನಿಲ್ದಾಣದ ಗೇಟ್ನಿಂದ ಪ್ರಯಾಣಿಕರಿಗಷ್ಟೇ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರತಿಯೊಂದು ವಾಹನ, ಬ್ಯಾಗ್ ಸೇರಿದಂತೆ ಪ್ರತಿ ವಸ್ತುವನ್ನು ಅತ್ಯಂತ ಕೂಲಂಕಷವಾಗಿ ಪರಿಶೀಲನೆ ಮಾಡಲಾಗುತ್ತಿದೆ.
ಹುಬ್ಬಳ್ಳಿ: ಭಾರತ - ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡ ಹಿನ್ನೆಲೆಯಲ್ಲಿ ಇಲ್ಲಿನ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣದಲ್ಲಿ ಹೈ ಅಲರ್ಟ್ ಮಾಡಲಾಗಿದೆ.
ರೈಲ್ವೆ ರಕ್ಷಣಾ ಪಡೆ (RPF), ಸರ್ಕಾರಿ ರೈಲ್ವೆ ಪೊಲೀಸ್ (GRP), ಡಾಗ್ ಸ್ಕ್ವಾಡನಿಂದ ನಿರಂತರ ತಪಾಸಣೆ ಮಾಡಲಾಗುತ್ತಿದೆ. ಪ್ರಯಾಣಿಕರ ಮತ್ತು ಲಗೇಜ್ಗಳ ತೀವ್ರ ತಪಾಸಣೆ ನಡೆದಿದೆ. ಹ್ಯಾಂಡ್ ಹೆಲ್ಡ್ ಮೆಟಲ್ ಡಿಟೆಕ್ಟರ್, ಡೋರ್ ಫ್ರೇಮ್ ಮೆಟಲ್ ಡಿಟೆಕ್ಟರ್, ಲಗೇಜ್ ತಪಾಸಣಾ ಸ್ಕ್ಯಾನರ್ಗಳ ಮೂಲಕ ತಪಾಸಣೆ ಮಾಡಲಾಗುತ್ತಿದೆ.ರೈಲು ನಿಲ್ದಾಣದ ಪ್ರವೇಶ ದ್ವಾರ ಮತ್ತು ನಿರ್ಗಮನ ಕೇಂದ್ರಗಳಲ್ಲಿ ಕಟ್ಟುನಿಟ್ಟಾದ ನಿಗಾ ವಹಿಸಲಾಗಿದೆ. ರೈಲ್ವೆ ಬೋಗಿಗಳಿಗೆ ತೆರಳಿ ಇಂಚಿಂಚು ತಪಾಸಣೆ ಮಾಡಲಾಗುತ್ತಿದೆ. ನಿಲ್ದಾಣದ 10 ಕಡೆಗಳಲ್ಲಿ ಚೆಕ್ಪೋಸ್ಟ್ ನಿರ್ಮಿಸಿ ತಪಾಸಣೆ ಮಾಡಲಾಗುತ್ತಿದೆ ಎಂದು ನೈರುತ್ಯ ರೈಲ್ವೆ ವಲಯ ತಿಳಿಸಿದೆ.
ವಿಮಾನ ನಿಲ್ದಾಣಕ್ಕೂ ಹೆಚ್ಚಿನ ಭದ್ರತೆ: ಭಾರತ - ಪಾಕ್ ಯುದ್ಧದ ಭೀತಿಯ ಹಿನ್ನೆಲೆಯಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ವಿಮಾನ ನಿಲ್ದಾಣದ ಗೇಟ್ನಿಂದ ಪ್ರಯಾಣಿಕರಿಗಷ್ಟೇ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರತಿಯೊಂದು ವಾಹನ, ಬ್ಯಾಗ್ ಸೇರಿದಂತೆ ಪ್ರತಿ ವಸ್ತುವನ್ನು ಅತ್ಯಂತ ಕೂಲಂಕಷವಾಗಿ ಪರಿಶೀಲನೆ ಮಾಡಲಾಗುತ್ತಿದೆ. ಕರ್ನಾಟಕ ಕೈಗಾರಿಕೆ ಭದ್ರತಾ ಪಡೆಯು ಭದ್ರತೆಯನ್ನೂ ನಿಭಾಯಿಸುತ್ತದೆ.ಎಂಟ್ರಿ ಇಲ್ಲ: ಮೊದಲು ವಿಮಾನ ನಿಲ್ದಾಣದ ಎಂಟ್ರಿವರೆಗೂ ಎಲ್ಲರಿಗೂ ಬರಲು ಅವಕಾಶವಿತ್ತು. ಇದೀಗ ಪ್ರಯಾಣಿಕರು ಅಲ್ಲದವರು ಸ್ವಲ್ಪ ದೂರದಿಂದಲೇ ತೆರಳಬೇಕು. ನಿಲ್ದಾಣದೊಳಗೆ ಬರಲು ಅವಕಾಶವಿಲ್ಲ. ಜತೆಗೆ ನಿಲ್ದಾಣದೊಳಗೆ ಬರುವ ಎಲ್ಲ ಬಗೆಯ ವಾಹನಗಳನ್ನು ಕಟ್ಟುನಿಟ್ಟಾಗಿ ತಪಾಸಣೆ ಮಾಡಲಾಗುತ್ತಿದೆ.