ಆಕಸ್ಮಿಕ ಅಗ್ನಿ ಅವಘಡಗಳು ಸಂಭವಿಸಿದ ವೇಳೆ ಜನರು ಗಾಬರಿಗೊಳ್ಳದೆ ಮೊಬೈಲ್ ನಂಬರ್, ಹೆಸರು ವಿಳಾಸದೊಂದಿಗೆ ಸರಿಯಾದ ಮಾಹಿತಿ ನೀಡಿದಲ್ಲಿ ಅಗ್ನಿಶಾಮಕ ವಾಹನ ಘಟನಾ ಸ್ಥಳಕ್ಕೆ ಬಂದು ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಲು ಅನುಕೂಲವಾಗುತ್ತದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಆಕಸ್ಮಿಕ ಅಗ್ನಿ ಮತ್ತು ನೀರಿನ ಅವಘಡ ಸಂಭವಿಸಿದ ವೇಳೆ ಸಮಯಪ್ರಜ್ಞೆ ಬಹಳ ಮುಖ್ಯ. ಮುನ್ನೆಚ್ಚರಿಕೆಯೊಂದಿಗೆ ಸುರಕ್ಷತಾ ಕ್ರಮ ಅನುಸರಿಸಿದರೆ ಅನಾಹುತ ತಪ್ಪಿಸಬಹುದು ಎಂದು ಪಟ್ಟಣದ ಅಗ್ನಿಶಾಮಕ ಠಾಣಾಧಿಕಾರಿ ಮಂಜುನಾಥ್ ತಿಳಿಸಿದರು.

ತಾಲೂಕಿನ ಕರಡಹಳ್ಳಿಯಲ್ಲಿ ಅಗ್ನಿಶಾಮಕ ಸೇವಾ ಸಪ್ತಾಹದ ಪ್ರಯುಕ್ತ ಸುರಕ್ಷಿತ ಶಾಲೆ, ಆಸ್ಪತ್ರೆ ಹಾಗೂ ಅಗ್ನಿ ಸುರಕ್ಷತೆಯ ಅರಿವುಳ್ಳ ಸಮಾಜ-ಅಗ್ನಿ ಮುಂಜಾಗ್ರತೆಗಾಗಿ ಒಂದಾಗಿ ಎಂಬ ಘೋಷವಾಕ್ಯದಡಿ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆಕಸ್ಮಿಕ ಅಗ್ನಿ ಅವಘಡಗಳು ಸಂಭವಿಸಿದ ವೇಳೆ ಜನರು ಗಾಬರಿಗೊಳ್ಳದೆ ಮೊಬೈಲ್ ನಂಬರ್, ಹೆಸರು ವಿಳಾಸದೊಂದಿಗೆ ಸರಿಯಾದ ಮಾಹಿತಿ ನೀಡಿದಲ್ಲಿ ಅಗ್ನಿಶಾಮಕ ವಾಹನ ಘಟನಾ ಸ್ಥಳಕ್ಕೆ ಬಂದು ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಲು ಅನುಕೂಲವಾಗುತ್ತದೆ ಎಂದರು.

ಮನೆಗಳಲ್ಲಿ ಗೃಹಿಣಿಯರು ಅಡುಗೆ ಸಿಲಿಂಡರ್ ಬಳಸುವಾಗ ವಿಶೇಷ ಕಾಳಜಿ ವಹಿಸಬೇಕು. ಅನಿಲ ಸೋರಿಕೆ ಕಂಡುಬಂದ ತಕ್ಷಣ ಗಾಬರಿಯಾಗದೆ ಸುರಕ್ಷತಾ ಕ್ರಮ ಅನುಸರಿಸಿದರೆ ಅವಘಡ ತಪ್ಪಿಸಬಹುದು ಎಂದರು.

ಬೇಸಿಗೆ ಸಮಯದಲ್ಲಿ ರೈತರು ತಮ್ಮ ಜಮೀನು ತೋಟಗಳಲ್ಲಿ ತ್ಯಾಜ್ಯ ವಸ್ತುಗಳನ್ನು ಸುಡಲು ಬೆಂಕಿ ಹಚ್ಚುವ ವೇಳೆ ಮುಂಜಾಗ್ರತಾ ಕ್ರಮ ವಹಿಸಬೇಕು. ಮಕ್ಕಳನ್ನು ಬೆಂಕಿ ಮತ್ತು ಹರಿಯುವ ನೀರಿನಲ್ಲಿ ಆಟವಾಡಲು ಬಿಡಬಾರದು. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅಥವಾ ಇನ್ನಿತರೆ ಅಗ್ನಿ ಅವಘಡಗಳು ಸಂಭವಿಸಿದ ಕೂಡಲೇ ತುರ್ತು ಸಹಾಯವಾಣಿ ಸಂಖ್ಯೆ 101 ಅಥವಾ 112ಕ್ಕೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದರೆ ತಕ್ಷಣ ಕಾರ್ಯಪ್ರವೃತ್ತರಾಗಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಲಾಗುವುದು ಎಂದರು.

ಮನೆಗಳಿಗೆ, ಹುಲ್ಲಿನ ಬಣವೆಗಳಿಗೆ, ಮರದ ರಾಶಿ ಸೇರಿದಂತೆ ಸೀಮೆಎಣ್ಣೆ, ಪೆಟ್ರೋಲ್ ಅಥವಾ ಇನ್ನಿತರೆ ತೈಲ ಪದಾರ್ಥಗಳಿಗೆ ಬೆಂಕಿ ತಗುಲಿದಾಗ ನೀರು ಸುರಿಯಬಾರದು. ಬದಲಿಗೆ ಸಾಕಷ್ಟು ಮರಳು, ಎಂ ಸ್ಯಾಂಡ್ ಅಥವಾ ಮಣ್ಣನ್ನು ಎರಚಿದರೆ ಬೆಂಕಿ ನಂದಿಸಬಹುದು ಎಂದರು. ನಂತರ ಗ್ರಾಮದ ಅಂಗಡಿ ಮುಂಗಟ್ಟುಗಳಿಗೆ ಕರಪತ್ರ ವಿತರಿಸಿ ಜನರಲ್ಲಿ ಅರಿವು ಮೂಡಿಸಿದರು. ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಮತ್ತು ಗ್ರಾಮಸ್ಥರು ಇದ್ದರು.