ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ ರಾಜ್ಯವನ್ನು ಭಯೋತ್ಪಾದನೆಯಿಂದ ರಕ್ಷಣೆ ಮಾಡಿ ಎಂದು ಒತ್ತಾಯಿಸಿ ಬೆಂಗಳೂರಿನಲ್ಲಿ ನಡೆದ ಬಾಂಬ್ ಸ್ಪೋಟವನ್ನು ಖಂಡಿಸಿ ನಗರದಲ್ಲಿ ಬಿಜೆಪಿ ಜಿಲ್ಲಾ ಯುವ ಮೋರ್ಚಾದಿಂದ ತಿರಂಗ ಯಾತ್ರೆಯನ್ನು ನಡೆಸಲಾಯಿತು.
ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸೂರ್ಯ ಬಾಲರಾಜ್ ನೇತೃತ್ವದಲ್ಲಿ ಹೊರಟ ತಿರಂಗ ಯಾತ್ರೆಯು ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಜನರಲ್ಲಿ ಜಾಗೃತಿ ಮೂಡಿಸಿದರು.ಈ ವೇಳೆ ಮಾತನಾಡಿದ ಯುವ ಮೋರ್ಚಾ ಅಧ್ಯಕ್ಷ ಸೂರ್ಯ ಬಾಲರಾಜ್, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಭಯೋತ್ಪಾದನೆ ಜಾಸ್ತಿಯಾಗುತ್ತಿದೆ. ಕಾಂಗ್ರೆಸ್ ಸರ್ಕಾರ ತುಷ್ಟಿಕರಣ ರಾಜಕಾರಣದಿಂದಾಗಿ ರಾಜ್ಯದಲ್ಲಿ ಹರಾಜಕತೆ ಹೆಚ್ಚಾಗುತ್ತಿದೆ. ವಿಧಾನಸೌಧದಲ್ಲಿಯೇ ಪಾಕಿಸ್ತಾನ ಜಿಂದ್ಬಾದ್ ಘೋಷಣೆ ಕೂಗಿದ ವ್ಯಕ್ತಿಯ ರಕ್ಷಣೆಗೆ ಸರ್ಕಾರ ನಿಂತಿದೆ. ಎಸ್ಎಲ್ಆರ್ ವರದಿ ಬಂದರು ಸಹ ಅದನ್ನು ಬಿಡುಗಡೆ ಮಾಡದೇ ವಿಳಂಬ ಮಾಡುವ ಮೂಲಕ ತಪ್ಪಿಸ್ಥರನ್ನು ರಕ್ಷಣೆ ಮಾಡುವ ಜೊತೆಗೆ ಭಯೋತ್ಪಾದನೆಗೆ ಪರೋಕ್ಷವಾಗಿ ಕುಮ್ಮಕ್ಕು ನೀಡಿದೆ ಎಂದು ಆರೋಪಿಸಿದರು.
ಜವಾಬ್ದಾರಿಯುತ ಗೃಹ ಸಚಿವ ಡಾ. ಪರಮೇಶ್ವರ ಬೆಂಗಳೂರಿನ ಶ್ರೀ ರಾಮೇಶ್ವರ ಕೆಫೆಯಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣದಲ್ಲಿ ಒಂದೊಂದು ವ್ಯಾಪಾರ ದೃಷ್ಟಿಯಿಂದ ನಡೆದ ಘಟನೆ ಎಂದಿರುವುದು ಹಾಸ್ಯಾಸ್ಪದ ಹಾಗೂ ಬೇಜವಾಬ್ದಾರಿ ಹೇಳಿಕೆಯಾಗಿದೆ. ಪ್ರಮುಖ ಹೋಟೆಲ್ಗಳಲ್ಲಿ ವ್ಯಾಪಾರ ದೃಷ್ಟಿಯಿಂದ ಎಷ್ಟು ಬ್ಲಾಸ್ಟ್ ಪ್ರಕರಣಗಳು ನಡೆದಿದೆ ಎಂಬುವುದನ್ನು ಸಚಿವರು ಸಾಬೀತು ಮಾಡಲಿ ಎಂದು ಸವಾಲು ಹಾಕಿದರು.ಯಾತ್ರೆಯಲ್ಲಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ನಟರಾಜು, ನಗರ ಮಂಡಲದ ಅಧ್ಯಕ್ಷ ಶಿವರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಂಗನೂರು ಮಹದೇವಸ್ವಾಮಿ, ಮುಖಂಡರಾದ ಆನಂದ್ ಭಗೀರಥ್, ಯಳಂದೂರು ಅನಿಲ್. ಮಹೇಶ್, ಕಾಡಹಳ್ಳಿ ಮಹೇಶ್, ಎಸ್.ಟಿ. ಮೋರ್ಚಾ ಚಂದ್ರು, ಬೇಡರಪುರ ಬಸವಣ್ಣ, ಶಿವು ವಿರಾಟ್, ಬೂದಂಬಳ್ಳಿ ರಾಜೇಶ್, ಬುಲೆಟ್ ಚಂದ್ರು, ನಗರಸಭಾ ಸದಸ್ಯರಾದ ಮಮತಾ ಬಾಲಸುಬ್ರಮಣ್ಯ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಕಮಲಮ್ಮ, ವಿಶಾಲಾಕ್ಷಿ ಮೊದಲಾದವರು ಇದ್ದರು.