ಸಾರಾಂಶ
ಅಲೆಮಾರಿ ಸಮುದಾಯಗಳ ನಾಯಕತ್ವವನ್ನು ಹತ್ತಿಕ್ಕಿ, ಅಲೆಮರಿಗಳ ಹಕ್ಕುಗಳನ್ನು ಕಸಿಯಲು ಷಡ್ಯಂತ್ರ ನಡೆಸಿದ್ದಾರೆ. ಸೋದರ ಸಮುದಾಯಗಳ ನಡುವೆ ವಿಷಬೀಜಜ ಬಿತ್ತಿ ಅಲೆಮಾರಿಗಳ ಐಕ್ಯತೆಗೆ ಧಕ್ಕೆ ಮಾಡುತ್ತಾ, ಸಮಾಜದಲ್ಲಿ ಸಾಮರಸ್ಯವನ್ನು ಹಾಳುಗೆಡುವುತ್ತಿರುವ ಎಚ್.ಆಂಜನೇಯ ಮತ್ತು ಅವರ ಬೆಂಬಲಿಗರ ವಿರುದ್ಧ ಕ್ರಮಕ್ಕೆ ಒತ್ತಾಯ.
ಕನ್ನಡಪ್ರಭ ವಾರ್ತೆ, ಮಂಡ್ಯ
ರಾಜಕೀಯ ದುರುದ್ದೇಶದಿಂದ ಅಲೆಮಾರಿ ಮುಖಂಡರ ಮೇಲೆ ಹಲ್ಲೆಗೆ ಯತ್ನಿಸಿರುವ ಮಾಜಿ ಸಚಿವ ಎಚ್.ಆಂಜನೇಯ ಅವರ ದುಷ್ಕೃತ್ಯವನ್ನು ರಾಜ್ಯ ಕುಳುವ ಮಹಾಸಂಘದ ಮಾಜಿ ಅಧ್ಯಕ್ಷ ತಿರುಮಲಾಪುರ ಗೋಪಾಲ್ ಖಂಡಿಸಿದರು.ಜು.೪ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಎಚ್.ಆಂಜನೇಯ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಝಾತಿ ಅಲೆಮಾರಿ ಸಮುದಾಯಗಳ ಮುಖಂಡರ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಮಾಜಿ ಸಚಿವರು ಪರಿಶಿಷ್ಟ ಜಾತಿಯ ಕೊರಮ, ಕೊರಚ ಸಮುದಾಯವನ್ನು ಒಳಗೊಂಡಂತೆ ೩೯ಕ್ಕೂ ಹೆಚ್ಚು ಸಮುದಾಯಗಳ ಅಭಿಪ್ರಾಯ ಪಡೆಯದೆ ನಿರ್ಲಕ್ಷಿಸಿ ರಾಜಕೀಯ ದುರುದ್ದೇಶದಿಂದ ಏಕಪಕ್ಷೀಯವಾಗಿ ಪರಿಶಿಷ್ಟ ಅಲೆಮಾರಿಗಳ ಸಮಾವೇಶ ಮಾಡುವ ನಿರ್ಧಾರವನ್ನು ಸಭೆಯಲ್ಲಿ ಚರ್ಚಿಸಿ ನಿರ್ಣಯಿಸದೆ ಪ್ರಕಟಣೆ ಹೊರಡಿಸಿದ್ದಾಗಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಚಿವರ ಏಕಪಕ್ಷೀಯ ನಿರ್ಣಯವನ್ನು ಇತರೆ ಅಲೆಮಾರಿ ಮುಖಂಡರು ಖಂಡಿಸಿದರು. ಆಗ ಮಾಜಿ ಸಚಿವರ ಆಪ್ತರು ಅಲೆಮಾರಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಅವರನ್ನು ಅವಾಚ್ಯಶಬ್ಧಗಳಿಂದ ನಿಂದಿಸಿ, ಹಲ್ಲೆ ಯತ್ನ ನಡೆಸಿ ಜೀವಬೆದರಿಕೆ ಹಾಕಿದ್ದಾರೆ. ಅಲೆಮಾರಿ ಸಮುದಾಯಗಳಲೇ ಒಂದು ಗುಂಪು ಮಹಿಳೆಯರ ಮೇಲೆ ಹಲ್ಲೆ ನಡೆಸಿರುವುದು ದುರದೃಷ್ಟಕರ ಸಂಗತಿ. ಈ ಸಂಬಂಧ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರೂ ಇದುವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ಆರೋಪಿಸಿದರು.ಅಲೆಮಾರಿ ಸಮುದಾಯಗಳ ನಾಯಕತ್ವವನ್ನು ಹತ್ತಿಕ್ಕಿ, ಅಲೆಮರಿಗಳ ಹಕ್ಕುಗಳನ್ನು ಕಸಿಯಲು ಷಡ್ಯಂತ್ರ ನಡೆಸಿದ್ದಾರೆ. ಸೋದರ ಸಮುದಾಯಗಳ ನಡುವೆ ವಿಷಬೀಜಜ ಬಿತ್ತಿ ಅಲೆಮಾರಿಗಳ ಐಕ್ಯತೆಗೆ ಧಕ್ಕೆ ಮಾಡುತ್ತಾ, ಸಮಾಜದಲ್ಲಿ ಸಾಮರಸ್ಯವನ್ನು ಹಾಳುಗೆಡುವುತ್ತಿರುವ ಎಚ್.ಆಂಜನೇಯ ಮತ್ತು ಅವರ ಬೆಂಬಲಿಗರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು.
ಗೋಷ್ಠೀಯಲ್ಲಿ ವೆಂಕಟೇಶ್, ಕೆ.ವಿ.ನಾಗರಾಜು, ಎನ್.ರವಿಕುಮಾರ್, ಟಿ.ಸಿ.ಗುರಪ್ಪ, ಶ್ರೀನಿವಾಸ್, ಸುರೇಶ್ ಇದ್ದರು.