ಚಿಕ್ಕಮಗಳೂರುರಾಜ್ಯ ಸರ್ಕಾರ 30 ವರ್ಷದಿಂದ ವಾಸವಾಗಿರುವ ತಾಂಡ್ಯಜನರಿಗೆ ಹಕ್ಕುಪತ್ರ ನೀಡುವ ಕೆಲಸ ಮಾಡುತ್ತಿದೆ ಎಂದು ಶಾಸಕ ಎಚ್‌.ಡಿ.ತಮ್ಮಯ್ಯ ಹೇಳಿದರು.

ಹಸ್ತಿನಾಪುರ (ಹಳೆಹಟ್ಟಿ ತಾಂಡ್ಯ) ದಲ್ಲಿ ಸರ್ಕಾರಿ ಶಾಲೆಯ ನೂತನ ಕಟ್ಟಡದ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ರಾಜ್ಯ ಸರ್ಕಾರ 30 ವರ್ಷದಿಂದ ವಾಸವಾಗಿರುವ ತಾಂಡ್ಯಜನರಿಗೆ ಹಕ್ಕುಪತ್ರ ನೀಡುವ ಕೆಲಸ ಮಾಡುತ್ತಿದೆ ಎಂದು ಶಾಸಕ ಎಚ್‌.ಡಿ.ತಮ್ಮಯ್ಯ ಹೇಳಿದರು.

ಸಖರಾಯಪಟ್ಟಣ ಸಮೀಪದ ಹಸ್ತಿನಾಪುರ (ಹಳೆಹಟ್ಟಿ ತಾಂಡ್ಯ) ದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡದ ಉದ್ಘಾಟಿಸಿ ಮಾತನಾಡಿ ದೇವರಾಜ್ ಅರಸ್ ಉಳುವವನೇ ಭೂ ಒಡೆಯ ಎಂದು ಘೋಷಿಸಿ, ಭೂಮಿ ಕೊಟ್ಟಿದ್ದರು. ಆ ನಂತರ ಸುಮಾರು 40 ವರ್ಷ ಆದರೂ ಯಾರು ಹಳ್ಳಿಗಳಲ್ಲಿ ತಾಂಡ್ಯಗಳಲ್ಲಿ ವಾಸವಾಗಿದ್ದಾರೋ ಅವರಿಗೆ ಇ- ಖಾತೆ ಹಕ್ಕು ಪತ್ರ ಇರಲಿಲ್ಲ. ಕಾಂಗ್ರೆಸ್‌ ಸರ್ಕಾರ 30 ವರ್ಷಗಳಿಂದ ವಾಸವಾಗಿದ್ದಾರೋ ಅವರಿಗೆ ಹಕ್ಕು ಪತ್ರ ನೀಡುತ್ತಿದೆ. ಈಗಾಗಲೇ ಟಿ.ಬಿ.ಕಾವಲ್, ಬಿದರಳ್ಳಿ ತಾಂಡ್ಯಗಳಿಗೆ ಹಕ್ಕು ಪತ್ರಗಳನ್ನು ಅವರ ಮನೆಗಳಿಗೆ ತಲುಪಿಸಿದ್ದೇವೆ. ಅದೇ ರೀತಿ ಹಸ್ತಿನಾಪುರ ತಾಂಡ್ಯದ ಮನೆ ಮನೆಗೆ ಹಕ್ಕುಪತ್ರಗಳನ್ನು ತಲುಪಿಸುತ್ತೇವೆ ಎಂದರು.

ಶಾಲೆಗಳನ್ನು ಮುಚ್ಚಬಾರದು ಅವುಗಳನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗಬೇಕೆಂಬ ಉದ್ದೇಶ ದಿಂದ ಸರ್ಕಾರ ಶಾಲೆಗಳಿಗೆ ಮೂಲ ಸೌಲಭ್ಯ ಹಾಗೂ ಉತ್ತಮ ಶಿಕ್ಷಕರನ್ನು ನೇಮಕ ಮಾಡಿದೆ. ಹಾಗಾಗಿ ಬಡವರು ಹಾಗೂ ಮಧ್ಯಮ ವರ್ಗದವರು ಖಾಸಗಿ ಶಾಲೆಗಳಿಗೆ ಹೋಗದೆ ಸರ್ಕಾರಿ ಶಾಲೆಯಲ್ಲಿ ಓದಿಸುತ್ತಿದ್ದಾರೆ ಎಂದು ಹೇಳಿದರು.ರಾಜ್ಯದಲ್ಲಿ 500 ಕೆಪಿಎಸ್ ಶಾಲೆಗಳನ್ನು ಸರ್ಕಾರ ಮಂಜೂರು ಮಾಡಿದೆ, ಅದರಲ್ಲಿ 3 ಶಾಲೆಗಳನ್ನು ಚಿಕ್ಕ ಮಗಳೂರು ವಿಧಾನಸಭಾ ಕ್ಷೇತ್ರಕ್ಕೆ ನೀಡಲಾಗಿದೆ. ಎರಡು ಶಾಲೆಗಳನ್ನು ನಗರಕ್ಕೆ ಕೊಡಲಾಗಿದೆ. ಇನ್ನೊಂದು ಶಾಲೆ ಸಖರಾಪಟ್ಟಣಕ್ಕೆ ನೀಡಲಾಗಿದೆ. ಒಂದರಿಂದ ಹನ್ನೇರಡನೆ ತರಗತಿವರೆಗೆ ಅತ್ಯುತ್ತಮ ಶಿಕ್ಷಣದ ಜತೆಗೆ ಮೂಲ ಸೌಲಭ್ಯ ನೀಡಲಾಗುವುದು ಎಂದರು.ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಮಾತನಾಡಿ, ಪ್ರಾಥಮಿಕ ಶಿಕ್ಷಣ ಮಕ್ಕಳ ಭವಿಷ್ಯ ನಿರ್ಮಾಣ ಮಾಡಲಿದೆ. ಹಾಗಾಗಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಅನಿವಾರ್ಯವೂ ಆಗಿದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ನಮ್ಮೂರ ಶಾಲೆ ನಮ್ಮ ಹೆಮ್ಮೆ. ಶಾಲೆಗಳನ್ನು ಮುಚ್ಚಲು ಬಿಡಬಾರದು. ಆಂಗ್ಲ ಶಾಲೆ ವ್ಯಾಮೋಹದ ಮಾನಸಿಕ ಗುಲಾಮಗಿರಿಯಿಂದ ಹೊರಗೆ ಬರಬೇಕು ಎಂದು ಹೇಳಿದರು.

ಬದುಕನ್ನು ಬದಲಾಯಿಸುವ ಶಕ್ತಿ ಶಿಕ್ಷಣಕ್ಕೆ ಇದೆ. ಕಾನ್ವೆಂಟ್, ವ್ಯಾಮೋಹ ಬದಲಾಗಬೇಕು. ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಬೇಕು ಎಂದು ಕರೆ ನೀಡಿದರು.ಸಮಾರಂಭದಲ್ಲಿ ಕಡೂರು ತಾಪಂ ಮಾಜಿ ಸದಸ್ಯ ಆನಂದ ನಾಯ್ಕ, ಮಹಡಿಮನೆ ಸತೀಶ್, ಹೇಮಾಜಿ ನಾಯ್ಕ, ಫೈರೋಜ್ ಖಾನ್, ಶಕುಂತಲಾ ಬಾಯಿ ಉಪಸ್ಥಿತರಿದ್ದರು.