ಹಣದಿಂದ ಗೌರವ ಸಿಕ್ಕಿಲ್ಲ ಸ್ವ ಸಾಮರ್ಥ್ಯದಿಂದ ಅವಕಾಶ ಸಿಕ್ಕಿದೆ ಎಂದು ಹೆಮ್ಮೆ ಪಡಬೇಕು

ಕೊಪ್ಪಳ: ನಗರದ ಸಾಹಿತ್ಯ ಭವನದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ಆಶ್ರಯದಲ್ಲಿ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿಗೆ ಅಭಿನಂದನೆ, ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ನಿರ್ದೇಶಕರು, ನೌಕರರ ಜತೆ ಸಂಘಟನಾ ಸಭೆ ಹಾಗೂ ಸಂವಾದ ಕಾರ್ಯಕ್ರಮ ನಡೆಯಿತು.

ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ನೌಕರರ ಸಂಘದಲ್ಲಿ 5ಲಕ್ಷ 25 ಸಾವಿರ ಜನ ಸದಸ್ಯರಿದ್ದು, 8500 ನಿರ್ದೇಶಕರಿದ್ದಾರೆ. ಹಣದಿಂದ ಗೌರವ ಸಿಕ್ಕಿಲ್ಲ ಸ್ವ ಸಾಮರ್ಥ್ಯದಿಂದ ಅವಕಾಶ ಸಿಕ್ಕಿದೆ ಎಂದು ಹೆಮ್ಮೆ ಪಡಬೇಕು ಎಂದ ಅವರು, ಸಂಘದ ನಿರ್ದೇಶಕರು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಬೇಕು. ನಿರ್ದೇಶಕರೇ ಆಧಾರ ಸ್ತಂಭ ಎಂದು ತಿಳಿಸಿದರು.

ಮುಂಬರುವ ದಿನಗಳಲ್ಲಿ ಸರ್ಕಾರಿ ನೌಕರರು ಮತ್ತು ನಿವೃತ್ತ ಸರ್ಕಾರಿ ನೌಕರಿಗಾಗಿ ಕಡಿಮೆ ದರದಲ್ಲಿ ಔಷಧಿ,ಕಿರಾಣಿ, ಎಂ.ಎಸ್.ಐ.ಎಲ್ ಅಂಗಡಿ ತೆರೆಯುತ್ತಿದ್ದು, ಐದಾರು ತಿಂಗಳಲ್ಲಿ ಕೊಪ್ಪಳದಲ್ಲಿ ಉದ್ಘಾಟಿಸಲಾಗುವುದು ಎಂದು ತಿಳಿಸಿದರು.

ಸಾಧನೆ ಮಾಡಲು ಎಲ್ಲರಿಗೂ ಸಾಮರ್ಥ್ಯ ಇದೆ. ಆದರೆ ಅವಕಾಶ ಸಿಗುವುದಿಲ್ಲ ಆಯ್ಕೆಯಾದ ನಿರ್ದೇಶಕರು ತಾಲೂಕು ಮತ್ತು ಜಿಲ್ಲೆಗಳಲ್ಲಿನ ಶಾಸಕರು, ಎಂ.ಎಲ್.ಸಿಗಳಿಂದ ಅನುದಾನ ತಂದು ಅಭಿವೃದ್ಧಿ ಮಾಡಬೇಕು. ಸಂಘದಲ್ಲಿ ಆರ್ಥಿಕ ಶಿಸ್ತು ಬೆಳೆಸಬೇಕು. ಈ ನಿಟ್ಟಿನಲ್ಲಿ ಕಾಲ ಕಾಲಕ್ಕೆ ಸಭೆ ನಡೆಸಬೇಕು ಎಂದರು.

ಕೆಲವರು ಇಲ್ಲಸಲ್ಲದ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ. ಸುಳ್ಳು ಸಂದೇಶಗಳು ಬಂದರೆ ನಂಬಬೇಡಿ. ಆಂತಕ ಪಡುವುದು ಬೇಡ. ಯಾರೋ ಹೇಳುವುದಕ್ಕೆ ಕಿವಿಕೊಡಬೇಡಿ ಎಂದು ತಿಳಿಸಿದರು.

ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮಣ್ಣನವರ ಪ್ರಾಸ್ತಾವಿಕ ಮಾತನಾಡಿದರು. ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ, ಹಿರಿಯ ಉಪಾಧ್ಯಕ್ಷ ಮೋಹನಕುಮಾರ, ಸುರೇಶ ಶಡಿಶಾಳ್, ಸದಾನಂದ ನೆಲಕುದರಿ, ಸಂಜೀವ್ ಸತರಡ್ಡಿ, ಮಹೇಶ ಸಬರದ್, ಗದಗ ಜಿಲ್ಲಾಧ್ಯಕ್ಷ ಬಸವರಾಜ ಬಳ್ಳಾರಿ, ವಿಜಯನಗರ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನಗೌಡ್ರು, ಜಿಲ್ಲಾ ಕಾರ್ಯದರ್ಶಿ ಶಿವಪ್ಪ ಜೋಗಿ, ಖಜಾಂಚಿ ಜಯತೀರ್ಥ ದೇಸಾಯಿ, ರಾಜ್ಯ ಪರಿಷತ್ ಸದಸ್ಯ ಮಹ್ಮದ್ ಆಸೀಫ್ ಅಲಿ, ಕಾರ್ಯಾಧ್ಯಕ್ಷ ಬೀರಪ್ಪ ಅಂಗಡಿ, ಗೌರವಾಧ್ಯಕ್ಷ ಸಿದ್ದಪ್ಪ ಮೇಳಿ, ತಾಲೂಕಾಧ್ಯಕ್ಷರು ಇದ್ದರು.

ಜ.2026 ರ ಕೇಂದ್ರ ವೇತನ ಪರಿಷ್ಕರಣೆ ಆಗುತ್ತಿದೆ. ರಾಜ್ಯ ನೌಕರರ ೨೨ ರಾಜ್ಯದಲ್ಲಿ ಕೇಂದ್ರ ವೇತನ ಆಯೋಗ ಜಾರಿಯಾಗಿದೆ. ಮುಂದೆ ಪರಿಷ್ಕರಣೆಯಾಗುವಾಗ ಹೋರಾಟಕ್ಕೆ ಕೈಜೋಡಿಸಬೇಕು. 2026-2027ಕ್ಕೆ ಕೇಂದ್ರ ವೇತನ ಆಯೋಗ ಪಡೆದೇ ತೀರುತ್ತೇವೆ. ಕನಿಷ್ಠ 25-30 ಸಾವಿರ ವೇತನ ಹೆಚ್ಚಾಗಲೇಬೇಕು. ಇದನ್ನು ಬಿಡುವ ಪ್ರಶ್ನೆಯೇ ಇಲ್ಲ. ಎನ್.ಪಿ.ಎಸ್.ವರದಿ ತಯಾರಾಗಿದೆ ಸಂಪುಟದಲ್ಲಿ ಇಡುತ್ತೇವೆ. ಎನ್.ಪಿ.ಎಸ್.ರದ್ದು ಪಡಿಸಿ, ಓಪಿಎಸ್ ಜಾರಿ ಮಾಡುತ್ತೇವೆ. ಇದಕ್ಕಾಗಿ ಡೊಂಗಿ ರಾಜಕಾರಣ, ಸಂಘಟನೆ ಮಾಡುವವರನ್ನು ನಂಬಬೇಡಿ ಹಣ ಕಳೆದುಕೊಳ್ಳಬೇಡಿ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ತಿಳಿಸಿದ್ದಾರೆ.

ಮನವಿ ಸಲ್ಲಿಕೆ ಸಂಘಗಳ ಪದಾಧಿಕಾರಿಗಳು ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿಗೆ ಸನ್ಮಾನಿಸಿ,ಗೌರವ ಸಲ್ಲಿಸಿದರು. ಸಮಸ್ಯೆಗಳ ಕುರಿತು ಸರ್ಕಾರಿ ನೌಕರರೊಂದಿಗೆ ಸಂವಾದ ನಡೆಸಿದರು. ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು. ಸಂಘಗಳ ಪದಾಧಿಕಾರಿಗಳು ವಿವಿಧ ಬೇಡಿಕೆ ಈಡೇರಿಸಲು ಸಹಕರಿಸುವಂತೆ ಷಡಕ್ಷರಿಯವರಿಗೆ ಮನವಿ ಮಾಡಿದರು.