ಕನ್ನಡಪ್ರಭ ವಾರ್ತೆ ಮಂಡ್ಯ
ನಾಡಿನ ಅಭಿವೃದ್ಧಿಯಲ್ಲಿ ಕೈ ಜೋಡಿಸುತ್ತಿದ್ದ ಮಠಗಳನ್ನು ಇಂದಿನ ಸಮುದಾಯಗಳು ಕೈ ಹಿಡಿಯಬೇಕು ಎಂಬುದು ನಮ್ಮ ಆಪೇಕ್ಷೆಯಾಗಿದೆ ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀನಿಶ್ಚಲಾನಂದನಾಥ ಸ್ವಾಮೀಜಿ ತಿಳಿಸಿದರು.ನಗರದ ಗಾಂಧಿಭವನದಲ್ಲಿ ನಂಜಮ್ಮ ಮೋಟೆಗೌಡ ಚಾರಿಟಬಲ್ ಮತ್ತು ಎಜುಕೇಶನಲ್ ಟ್ರಸ್ಟ್ ಕೊಪ್ಪ ವತಿಯಿಂದ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಅಂದಿನ ಕಾಲದಲ್ಲಿ ಸಮಾಜ ಮಠಗಳನ್ನು ಬೆಳೆಸಿ ನೆರವಾಗುತ್ತಿದ್ದವು. ಅದೇ ರೀತಿ ಇಂದಿನ ಸಮಾಜದ ಸಮುದಾಯಗಳು ಮಠಗಳ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ಕೋರಿದರು.
ಮಂಡ್ಯ ಜಿಲ್ಲೆಯ ಜನತೆ ಶ್ರೀಮಠ ಉದ್ದಾರಕ್ಕೆ ಅಪಾರವಾಗಿ ಶ್ರಮಿಸಿದ್ದಾರೆ. ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಸೇವಾ ಕಾರ್ಯಕ್ಕೆ ಕೈಜೋಡಿಸಬೇಕು. ಶ್ರೀಕ್ಷೇತ್ರದ ಮಠದಲ್ಲಿ ಅನ್ನದಾನ ನಡೆಯುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡಲು ಸಕಲ ಸಿದ್ಧತೆ ನಡೆಯುತ್ತಿದೆ. ಉದ್ಯಮಿ ಸ್ಟಾರ್ ಚಂದ್ರು ಅವರು ಮಠಕ್ಕೆ ವಾಹನಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಮಂಡ್ಯ ಜಿಲ್ಲೆಯ ಜನತೆಯನ್ನು ಶ್ರೀಮಠ ಸದಾ ಸ್ಮರಿಸುತ್ತದೆ ಎಂದರು.ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಮಾತನಾಡಿ, ಆಧ್ಯಾತ್ಮಿಕ ಚಿಂತನೆ ಮತ್ತು ಸಂಸ್ಕಾರ-ಸಂಸ್ಕೃತಿ ಬೆಳೆವಣಿಗೆಗೆ ಶ್ರೀಮಠಗಳ ಪಾತ್ರ ದೊಡ್ಡದು. ಅನಾರೋಗ್ಯ ಉಂಟಾದರೆ ಆಸ್ಪತ್ರೆಗೆ ಹೋಗುತ್ತೇವೆ. ಮಾನಸಿಕ ನೆಮ್ಮದಿಗೆ ಶ್ರೀಕ್ಷೇತ್ರ ಮಠಗಳಿಗೆ ತೆರಳಿದಾಗಿ ಶಾಂತಿ ಲಭಿಸುತ್ತದೆ ಎಂದರು.
ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ದೇಶದ ಇತಿಹಾಸದಲ್ಲಿ ಮೈಸೂರು ಒಡೆಯರ್ ಅವರ ಸಾಧನೆ ಕೊಡುಗೆ ಅಜರಾಮರ. ಅದರಲ್ಲೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಜಿಲ್ಲೆಯ ಜನರು ಎಂದಿಗೂ ಮರೆಯಲಾರರು ಎಂದು ಸ್ಮರಿಸಿದರು.
ಕೃಷ್ಣರಾಜ ಒಡೆಯರ್ ಅವರು ಮಾದರಿ ಆಡಳಿತ ನೀಡಿ ನಾಡಿನ ಅಭಿವೃದ್ಧಿಗೆ ನೀಡಿದ ಕೊಡುಗೆಗಳು ನಮ್ಮ ಕಣ್ಣ ಮುಂದಿವೆ. ಕೆ.ಆರ್.ಎಸ್. ಅಣೆಕಟ್ಟೆ, ಶಿಂಷಾ ಜಲ ವಿದ್ಯುತ್, ಶಿಕ್ಷಣ ಸಂಸ್ಥೆಗಳು, ಬ್ಯಾಂಕ್ ಗಳ ಸ್ಥಾಪನೆ, ವಿವಿಗಳು, ಸಾಹಿತ್ಯ ಕ್ಷೇತ್ರ, ಉದ್ಯಮ ಹೀಗೆ ಹಲವು ಕ್ಷೇತ್ರಗಳ ಅಭಿವೃದ್ದಿ ಕಾರ್ಯಗಳನ್ನು ಕಾಣಬಹುದು ಎಂದರು.
ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ಕೆ.ಟಿ.ಹನುಮಂತು, ಕರ್ನಾಟಕ ಸಂಘದ ಅಧ್ಯಕ್ಷ ಡಾ.ಜಯಪ್ರಕಾಶ್ ಗೌಡ, ಹಿರಿಯ ಸಾಹಿತಿ ತೈಲೂರು ವೆಂಕಟಕೃಷ್ಣ, ಜಿಪಂ ಮಾಜಿ ಅಧ್ಯಕ್ಷ ತಗ್ಗಳ್ಳಿ ವೆಂಕಟೇಶ್, ಹೊಸಪೇಟೆ ಮುಡ ಆಯುಕ್ತ ಯೋಗಾನಂದ ಕೆರಗೋಡು, ಬರಹಗಾರ ಲೋಕೇಶ್ ಚಂದಗಾಲು, ರೋಟರಿ ಮಾಜಿ ಅಧ್ಯಕ್ಷ ರಮೇಶ್, ನಿವೃತ್ತ ಅಧಿಕಾರಿ ಬಸವರಾಜ್ ಮತ್ತಿತರರಿದ್ದರು.