ಯಲಬುರ್ಗಾ: ಪ್ರತಿಯೊಬ್ಬರೂ ಧಾರ್ಮಿಕ ಕಾರ್ಯಗಳಿಗೆ ದಾನ ಧರ್ಮ ಮಾಡುವ ಮೂಲಕ ಸತ್ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು ಎಂದು ಕೊಪ್ಪಳದ ಅಭಿನವ ಶ್ರೀಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ತಾಲೂಕಿನ ನಿಲೋಗಲ್ ಗ್ರಾಮದ ಶ್ರೀಶರಣಬಸವೇಶ್ವರ ಜಾತ್ರಾಮಹೋತ್ಸವ ಅಂಗವಾಗಿ ಮಹಾರಥೋತ್ಸವದ ಷಟಸ್ಥಲ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಜೀವನ ಸಂತೋಷದಿಂದ ಕೂಡಿರಬೇಕು. ಕೆಟ್ಟದ್ದನ್ನು ತೊಡೆದು ಒಳ್ಳೆಯ ಸಂಸ್ಕಾರ ಸಂಸ್ಕೃತಿ ಬೆಳೆಸಿಕೊಂಡು ನೆಮ್ಮದಿಯಿಂದ ಬದುಕುವುದೇ ಜೀವನವಾಗಬೇಕು ಎಂದರು.

ಒಂದು ಕಲ್ಲು ದೇವರ ವಿಗ್ರಹವಾಗಬೇಕಾದರೆ ಸಾವಿರ ಉಳಿ ಪೆಟ್ಟು ತಿಂದಿರುತ್ತದೆ. ಆದ್ದರಿಂದಲೇ ನಾವೂ ಆ ಕಲ್ಲಿಗೆ ನಮಸ್ಕಾರಿಸುತ್ತೇವೆ. ಹಾಗೇ ಜೀವನದಲ್ಲಿ ಮಾನ ಅಪಮಾನ ಎಲ್ಲವನ್ನು ಸಹಿಸಿಕೊಂಡು ಬದುಕುವುದೇ ಜೀವನ. ಜೀವನದಲ್ಲಿ ಏನೇ ಸಮಸ್ಯೆ ಎದುರಾದರೂ ಭಗವಂತನ ಪಾದಕ್ಕೆ ಅರ್ಪಿಸಿ ಬದುಕಿದರೆ ಜೀವನ ಸಾರ್ಥಕವಾಗುತ್ತದೆ ಎಂದರು.

ಬೆಳಗ್ಗೆ ಶ್ರೀಶರಣಬಸವೇಶ್ವರನಿಗೆ ವಿಶೇಷ ಅಲಂಕಾರ ಪೂಜೆ ಮಾಡಲಾಗಿತ್ತು. ಭಕ್ತರು ಬೇಡಿಕೊಂಡ ಹರಕೆ ತೀರಿಸಿದರು. ದೇವರಿಗೆ ನೈವೇದ್ಯ ಅರ್ಪಿಸಿ ಭಕ್ತಿ ಸಮರ್ಪಿಸಿದರು. ಐದು ಜೋಡಿ ಸಾಮೂಹಿಕ ವಿವಾಹ ನಡೆದವು. ರಥೋತ್ಸವದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.


ಈ ಸಂದರ್ಭ ಶ್ರೀಧರ ಮುರಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ, ರಾಜೂರಿನ ಅಭಿನವ ಶ್ರೀಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ,‌ ಶ್ರೀಶಿವನಾಗಯ್ಯ ಶಾಸ್ತ್ರಿ ಹಿರೇಮಠ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು.