ಸಾರಾಂಶ
ಶ್ರೀರಂಗಪಟ್ಟಣ : ರಾಜ್ಯದಲ್ಲಿ ಹಾಲು, ಮೊಸಲು, ವಿದ್ಯುತ್ ದರ ಬೆಲೆ ಏರಿಕೆ ನಡುವೆಯೇ ಏ.1 ರಿಂದ ಟೋಲ್ ಶುಲ್ಕ ಶೇ.5 ರಷ್ಟು ಏರಿಕೆ ಮಾಡುವ ಮೂಲಕ ವಾಹನ ಸವಾರರಿಗೆ ಟೋಲ್ ಬಿಸಿ ಮುಟ್ಟಿಸಿದೆ.
ತಾಲೂಕಿನ ಗಣಂಗೂರು ಬಳಿಯ ಮೈಸೂರು- ಬೆಂಗಳೂರು ಹೆದ್ದಾರಿಯಲ್ಲೂ ಟೋಲ್ ಹಣ ಹೆಚ್ಚಿಸಿ ದಿನನಿತ್ಯ ಸಂಚರಿಸುವ ವಾಹನಗಳ ಸವಾರರು ಬೆಲೆ ಏರಿಕೆಯಿಂದ ಹೈರಾಣಾಗುವಂತೆ ಮಾಡಿದೆ.
ಏಕಮುಖ ಸಂಚಾರ ವಾಹನಗಳ ಟೋಲ್ ದರ ಇಂತಿದೆ.
ಕಾರು: ಹಳೆಯ ದರ 160ರು. ಪ್ರಸ್ತುತ ದರ 175ರು., ಬಸ್ : ಹಳೆಯ ದರ 260ರು. ಇಂದಿನ ದರ 280ರು., ಟ್ರಕ್ : ಈ ಹಿಂದಿನ ದರ 540ರು. ಪ್ರಸ್ತುತ ದರ 590 ರು., 2 ಎಕ್ಸೆಲ್ ವಾಹನ: ಹಳೆಯ ದರ 590 ರು. ಇಂದಿನ ದರ 645 ರು. 4- 6 ಎಕ್ಸೆಲ್ ವಾಹನ: ಈ ಹಿಂದಿನ ದರ 845ರು. ಇಂದಿನ ದರ 925 ರು., 7 ಎಕ್ಸೆಲ್ಗೂ ಅಧಿಕ ವಾಹನ: ಹಳೆಯ ದರ 1030 ರು. ಇಂದಿನ ದರ 1125 ರು. ಬೆಲೆ ಏರಿಕೆಯಾಗಿದೆ. ಜೊತೆಗೆ ಫಾಸ್ಟ್ಟ್ಯಾಗ್ ಇಲ್ಲದಿದ್ದಲ್ಲಿ ದುಪ್ಪಟ್ಟು ದರ ಕಟ್ಟಬೇಕಾದ ಅನಿವಾರ್ಯ ಎದುರಾಗಿದೆ. ರಾಜ್ಯ ಸರ್ಕಾರ ಜನರ ಮೇಲೆ ಆರ್ಥಿಕ ಹೊರೆ ಹಾಕುವ ಜೊತೆಗೆ ಕೇಂದ್ರ ಸರ್ಕಾರ ಸಹ ಇನ್ನಷ್ಟು ಆರ್ಥಿಕ ಹೊರೆ ಹಾಕಿ ಸಂಕಷ್ಟಕ್ಕೆ ಸಿಲುಕಿಸುವ ಕೆಲಸ ಮಾಡುತ್ತಿದೆ. ಇದು ಕೆಳ, ಮಧ್ಯಮ ವರ್ಗದ ಜನರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.